Asianet Suvarna News Asianet Suvarna News

'ಪಿ.ಟಿ. ಪರಮೇಶ್ವರ ನಾಯ್ಕ ಲಾಟರಿ ಶಾಸಕ'

* ಹಡಗಲಿಯ ಕಾಂಗ್ರೆಸ್‌ ಏಕೋಪಾಧ್ಯಾಯ ಶಾಲೆ ಇದ್ದಂತೆ: ಬಿ.ಚಂದ್ರನಾಯ್ಕ
* ಯಾವ ಬಡವರಿಗೂ ಸ್ವ ಇಚ್ಛೆಯಿಂದ ಆಹಾರ ಕಿಟ್‌ ನೀಡಿಲ್ಲ 
* ಕಾಂಗ್ರೆಸ್‌ ಪಕ್ಷಕ್ಕೆ ಜನರಿಗೆ ಹಾಗೂ ಸಮಾಜಕ್ಕೆ ಒಳ್ಳೆಯದನ್ನು ಮಾಡಿ ರೂಢಿ ಇಲ್ಲ
 

Former BJP MLA B Chandra Naik Slams Congress MLA PT Parameshwar Naik grg
Author
Bengaluru, First Published Aug 24, 2021, 11:35 AM IST

ಹೂವಿನಹಡಗಲಿ(ಆ.24): ಬಿಜೆಪಿಯ ಒಳ ಜಗಳ ಹಾಗೂ ಹೊಂದಾಣಿಕೆ ಕೊರತೆಯ ಕಾರಣದಿಂದ ಪಿ.ಟಿ. ಪರಮೇಶ್ವರ ನಾಯ್ಕಗೆ 2 ಬಾರಿ ಶಾಸಕ ಸ್ಥಾನದ ಲಾಟರಿ ಹೊಡೆದಿದೆ. ಸಂಪೂರ್ಣ ಜನಾಭಿಪ್ರಾಯದಿಂದ ಜಯ ಸಿಕ್ಕಿಲ್ಲ ಎಂದು ಮಾಜಿ ಶಾಸಕ ಬಿ.ಚಂದ್ರನಾಯ್ಕ ಆರೋಪಿಸಿದ್ದಾರೆ.  

ಈ ಕುರಿತು ಹಡಗಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಡಗಲಿ ಹಾಗೂ ಹರಪನಹಳ್ಳಿ ಸೇರಿ 4 ಬಾರಿ ಲಾಟರಿ ಹೊಡೆದು ಶಾಸಕರಾಗಿದ್ದಾರೆ. ಹಡಗಲಿ ಕಾಂಗ್ರೆಸ್‌ ಏಕೋಪಾಧ್ಯಾಯ ಶಾಲೆ ಇದ್ದಂತೆ. ಶಾಸಕ ಹಡಗಲಿಯಲ್ಲಿ ಇದ್ದರೇ, ಶಾಲೆ ಬಾಗಿಲು ತೆರೆದಿತ್ತದೆ. ಇಲ್ಲ ಅಂದ್ರೆ ಶಾಲೆ ಬಾಗಿಲು ಬಂದ್‌ ಆಗಿರುತ್ತದೆ ಎಂದು ವ್ಯಂಗ್ಯವಾಡಿದರು.

ರಾಜ್ಯದ ಕುರುಬರಿಗೆ ಎಸ್ಟಿ, ಪಂಚಾಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಬಿಜೆಪಿಯಿಂದ ಇನ್ನೂ 10 ವರ್ಷವಾದರೂ ಅಸಾಧ್ಯ ಎಂದು ಹೇಳಿಕೆ ನೀಡಿರುವ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅರಿತು ಮಾತನಾಡಲಿ. ಈ ದೇಶವನ್ನು 70 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್‌ ಈ ಪ್ರಬಲ ಸಮುದಾಯಗಳನ್ನು ಶೋಷಣೆ ಮಾಡಿದೆ. ಮಾಜಿ ಸಿಎಂ ಯಡಿಯೂರಪ್ಪ ಮೇಲೆ ನಂಬಿಕೆ ವಿಶ್ವಾಸವಿಟ್ಟು, ಕುರುಬರು ಹಾಗೂ ಪಂಚಮಸಾಲಿ ಸಮಾಜ ಮೀಸಲಾತಿ ಪ್ರಸ್ತಾಪ ಮುಂದಿಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಮುಂದಿನ 10 ವರ್ಷಗಳ ಕಾಲ ಶಾಸಕ ಪಿ.ಟಿ.ಪಿ. ಹೇಳಿಕೆಯಂತೆ ಬಿಜೆಪಿ ಸರ್ಕಾರವೇ ಅಧಿ​ಕಾ​ರ​ಕ್ಕೆ ಬರಲಿದೆ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದರು.

RTI ಕಾರ್ಯಕರ್ತನ ಕೊಲೆ, ಮಾಜಿ ಸಚಿವ ಪರಮೇಶ್ವರ ನಾಯ್ಕ್ ಆಪ್ತ ಅರೆಸ್ಟ್

ಇಷ್ಟು ದಿನಗಳ ಕಾಲ ದೇಶದ ಜನರಿಗೆ ಸುಳ್ಳು ಹೇಳಿ ಕಣ್ಣಿಗೆ ಮಂಕು ಬೂದಿ ಎರಚಿ ಆಳ್ವಿಕೆ ಮಾಡಿರುವ ಕಾಂಗ್ರೆಸ್‌ ಈವರೆಗೂ ವಿವಿಧ ಜಾತಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲು ಸಾಧ್ಯವಾಗಿಲ್ಲ. ದೇಶದ ಭದ್ರತೆ ಹಾಗೂ ಗಡಿ ಕಾಯುವ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇವರ ಹೇಳಿಕೆಯು ಸೈನಿಕರ ಆತ್ಮಸ್ಥೈರ್ಯ ಕುಂದಿಸುವಂತಿದೆ. ರಾಜಕಾರಣ ಮಾಡಲು ಬೇರೆ ಬೇರೆ ವಿಚಾರಗಳು ಸಾಕಷ್ಟಿವೆ. ಆದರೆ ದೇಶದ ಭದ್ರತೆಯ ವಿಚಾರದಲ್ಲಿ ರಾಜಕಾರಣ ಸಲ್ಲದು ಎಂದರು.

ಹಡಗಲಿ ಕ್ಷೇತ್ರದ ಜನರಿಗೆ ತಾವೇ ಭರವಸೆ ನೀಡಿರುವ ಶೈಕ್ಷಣಿಕ ಜಿಲ್ಲೆ ಬೇಡಿಕೆ ಇನ್ನೂ ಈಡೇರಿಲ್ಲ, ಈ ಹಿಂದೆ ಪ್ರಗತಿ ಪರ ಸಂಘಟನೆಗಳು ಮೈಲಾರದಿಂದ ಹೂವಿನಹಡಗಲಿ ವರೆಗೂ ಪಾದಯಾತ್ರೆ ಮಾಡಿ ಒತ್ತಾಯಿಸಿದ್ದ ಸಂದರ್ಭದಲ್ಲಿ ನಾನು ಸರ್ಕಾರ ಮಟ್ಟದಲ್ಲಿ ಶೈಕ್ಷಣಿಕ ಜಿಲ್ಲೆ ಘೋಷಣೆ ಮಾಡಿಸುತ್ತೇನೆಂದು ಹೇಳಿ​ದ್ದರು. ಅದು ಏನಾಗಿದೆ ಎಂದು ಅವರೇ ತಿರುಗಿ ನೋಡಿಕೊಳ್ಳಲಿ ಎಂದು ಸವಾಲು ಹಾಕಿದರು.

ಕೋವಿಡ್‌ ಹೆಸರಲ್ಲಿ ಬಿಜೆಪಿ ಸರ್ಕಾರಗಳಿಂದ ಲೂಟಿ: ಪರಮೇಶ್ವರನಾಯ್ಕ

ಈವರೆಗೂ ಕಾಂಗ್ರೆಸ್‌ ಪಕ್ಷಕ್ಕೆ ಜನರಿಗೆ ಹಾಗೂ ಸಮಾಜಕ್ಕೆ ಒಳ್ಳೆಯದನ್ನು ಮಾಡಿ ರೂಢಿ ಇಲ್ಲ. ಅದಕ್ಕಾಗಿಯೇ ದೇಶದ ಜನ ಅವರನ್ನು ವಿರೋಧ ಪಕ್ಷದಲ್ಲಿಯೂ ಕುಳಿತುಕೊಳ್ಳಲು ಆಗದಂತಹ ಸ್ಥಿತಿಗೆ ತಂದು ನಿಲ್ಲಿಸಿದ್ದು, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಕೋವಿಡ್‌ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಹಡಗಲಿಗೆ ಕರೆ ತಂದು ಬಡವರಿಗೆ ಆಹಾರದ ಕಿಟ್‌ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಮಾಡಿದ್ದೇನು? ಬಿಜೆಪಿ ಸರ್ಕಾರ ಕಾರ್ಮಿಕ ಇಲಾಖೆಯಿಂದ ನೀಡಿದ ಆಹಾರ ಕಿಟ್‌ಗಳನ್ನು ತಮ್ಮ ಪಕ್ಷದ ಕಿಟ್‌ ಎಂಬ ರೀತಿಯಲ್ಲಿ ಬಿಂಬಿಸಲು ಹೊರಟಿದ್ದಾರೆ. ಯಾವ ಬಡವರಿಗೂ ಸ್ವ ಇಚ್ಛೆಯಿಂದ ಆಹಾರ ಕಿಟ್‌ ನೀಡಿಲ್ಲ ಎಂದರು.

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಘೋಷಣೆ ಮಾಡಿದ ಗರಿಬೀ ಹಠಾವೋ ಯೋಜನೆ ಸರಿಯಾಗಿ ಅನುಷ್ಠಾನ ಆಗಿದ್ದರೇ ಹಿಂದಿನ ಸಿಎಂ ಸಿದ್ದರಾಮಯ್ಯನವರ ಅನ್ನಭಾಗ್ಯ ಬೇಕಾಗಿರಲಿಲ್ಲ. ಇದರಲ್ಲಿ ಯಾರದು ಸತ್ಯ, ಯಾರದು ಸುಳ್ಳು ಜನರೇ ತೀರ್ಮಾನಿಸುತ್ತಾರೆ. ಇದು ಒಂದು ರೀತಿಯಲ್ಲಿ ಹೊಸ ಬಾಟಲಿಗೆ ಹಳೆ ಮದ್ಯ ಹಾಕಿದಂತಾಗಿದೆ ಎಂದು ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಸ್‌. ಸಂಜೀವರೆಡ್ಡಿ, ತಾಪಂ ಮಾಜಿ ಸದಸ್ಯ ಈಟಿ ಲಿಂಗರಾಜ, ಹನುಮಂತಪ್ಪ, ಪೂಜಾರ ಮಲ್ಲಿಕಾರ್ಜುನ, ಶಿವಪುರ ಸುರೇಶ ಸೇರಿದಂತೆ ಇತರರಿದ್ದರು.
 

Follow Us:
Download App:
  • android
  • ios