ಬೆಳಗಾವಿ ಸೇರಿ ಕೃಷ್ಣಾ ತೀರದ ಜಿಲ್ಲೆಗಳ ಜನರು ನಿರಾಳ
ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದ್ದು ಇದರಿಂದ ಕೃಷ್ಣ ನದಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಕೃಷ್ಣಾ ತೀರದ ಜನರು ನಿರಾಳರಾಗಿದ್ದಾರೆ.
ಬೆಂಗಳೂರು (ಆ.20): ರಾಜ್ಯದೆಲ್ಲೆಡೆ ಮಳೆ ಕ್ಷೀಣಿಸಿದ ಬೆನ್ನಲ್ಲೇ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣವೂ ಇದೀಗ ಇಳಿಮುಖವಾಗಿದ್ದು, ಪ್ರವಾಹದ ಆತಂಕದಲ್ಲಿದ್ದ ಉತ್ತರ ಕರ್ನಾಟಕ ಕೊಂಚ ನಿರಾಳವಾಗಿದೆ. ಬೆಳಗಾವಿ, ಬಾಗಲಕೋಟೆಯಲ್ಲಿ ಕೃಷ್ಣಾ, ಘಟಪ್ರಭಾ ಪ್ರವಾಹದಿಂದ ಜಲಾವೃತವಾಗಿದ್ದ ಪ್ರದೇಶಗಳಿಂದ ನೀರಿನಮಟ್ಟನಿಧಾನವಾಗಿ ಇಳಿಮುಖವಾಗುತ್ತಿದ್ದು, ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಈ ಮಧ್ಯೆ, ತುಂಗಭದ್ರಾ ಡ್ಯಾಂನಿಂದ 1.2 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ನದಿಗೆ ಹರಿದು ಬಿಟ್ಟಿದ್ದರಿಂದ ಹಂಪಿ ಮತ್ತು ಆನೆಗೊಂದಿಯ ಹಲವು ದೇವಸ್ಥಾನ, ಸ್ಮಾರಕಗಳು ಜಲಾವೃತವಾಗಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ...
ಮಹಾರಾಷ್ಟ್ರದ ಕೊಂಕಣ, ಪಶ್ಚಿಮಘಟ್ಟಭಾಗದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಇದೀಗ ಇಳಿಮುಖವಾಗಿದ್ದು, ಅಲ್ಲಿನ ಕೊಯ್ನಾ ಡ್ಯಾಂನಿಂದ ಕೃಷ್ಣಾ ನದಿಗೆ ಸದ್ಯ 2 ಲಕ್ಷ ಕ್ಯುಸೆಕ್ಗಿಂತಲೂ ಕಡಿಮೆ ನೀರು ಹರಿಸಲಾಗುತ್ತಿದೆ. ಅದೇ ರೀತಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ 82,295ದಿಂದ ಈಗ 36,900 ಕ್ಯುಸೆಕ್ಗೆ ಇಳಿದಿದ್ದು, ಮೂರ್ನಾಲ್ಕು ದಿನಗಳಿಂದ ಜಲಾವೃತವಾಗಿದ್ದ ಬೆಳಗಾವಿಯ ಗೋಕಾಕ, ಬಾಗಲಕೋಟೆಯ ಮುಧೋಳ ಸೇರಿದಂತೆ ಹಲವು ಕಡೆ ನೀರಿನಮಟ್ಟತಗ್ಗಿದೆ.
ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿ..
ಆದರೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಾಭದ್ರಾ ಡ್ಯಾಂನಿಂದ 1.12 ಲಕ್ಷ ಕ್ಯುಸೆಕ್ಗೂ ಅಧಿಕ ನೀರನ್ನು ಹೊರಬಿಡುತ್ತಿರುವುದರಿಂದ ನದಿತೀರ ಪ್ರದೇಶಗಳಲ್ಲಿ ನೀರು ನುಗ್ಗುತ್ತಿದ್ದು, ಹಂಪಿಯ ರಾಮಲಕ್ಷ್ಮಣ ದೇವಸ್ಥಾನ, ಸಾಲು ಮಂಟಪ, ನಂದಿ ವಿಗ್ರಹ, ಪುರಂದರದಾಸ ಮಂಟಪ ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿಯ ನವವೃಂದಾವನಗಡ್ಡೆ, ಕೃಷ್ಣದೇವರಾಯ ಸಮಾಧಿ ಸೇರಿ ಹಲವು ಸಮಾಧಿಗಳು ಜಲಾವೃತವಾಗಿದೆ. ಕಂಪ್ಲಿ-ಗಂಗಾವತಿ ಸೇತುವೆ ಮೇಲೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.