Asianet Suvarna News Asianet Suvarna News

ಉತ್ತರಕನ್ನಡ: ಇಲಾಖೆಗಳ ಜಂಗಿ ಕುಸ್ತಿಯಿಂದ ಬಳಕೆಯಾಗದ ತೇಲುವ ಜೆಟ್ಟಿ

ಮೊದಲನೆಯದಾಗಿ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ರೆಸಾರ್ಟ್‌ಗಳಿಗೆ ಕರೆದೊಯ್ಯಲು ಹಾಗೂ ಜಲಸಾಹಸ ಕ್ರೀಡೆ ನಡೆಸಲು ಬೋಟ್ ನಿಲುಗಡೆಗೆ ತಮಗೆ ಬೇಕು ಎಂದು ಬೇಡಿಕೆಯಿಟ್ಟರೆ, ಯುವಜನ ಮತ್ತು ಕ್ರೀಡಾ ಇಲಾಖೆ ಜಲಸಾಹಸ ಕ್ರೀಡೆ ನಡೆಸಲು ತಮಗೆ ಬೇಕು ಎಂದು ಪಟ್ಟು ಹಿಡಿದಿದೆ. 

Floating Bridge Not Used in Uttara Kannada grg
Author
First Published Aug 17, 2023, 10:39 PM IST

ಉತ್ತರಕನ್ನಡ(ಆ.17):  ಉತ್ತರಕನ್ನಡ ಜಿಲ್ಲೆಯ ಕಾರವಾರದ ಸದಾಶಿವಗಢದ ಕಾಳಿನದಿ, ಅರಬ್ಬೀ ಸಮುದ್ರ ಸೇರುವ ಸಂಗಮದಲ್ಲಿ ರಾಜ್ಯದಲ್ಲೇ ಮೊದಲ ಬಾರಿ ತೇಲುವ ಕಾಂಕ್ರಿಟ್ ಜೆಟ್ಟಿಯನ್ನು ಬಂದರು ಇಲಾಖೆ ಸಾಗರ ಮಾಲಾ ಯೋಜನೆಯಡಿ  2.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಆದರೆ, ಇದರ ಬಳಕೆ ಮಾಡಲು ಕ್ರೀಡಾ ಇಲಾಖೆ ಮತ್ತು ಪ್ರವಾಸೋಧ್ಯಮ ಇಲಾಖೆ ಜಂಗಿ ಕುಸ್ತಿ ನಡೆಸುತ್ತಿದೆ. 

ಮೊದಲನೆಯದಾಗಿ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ರೆಸಾರ್ಟ್‌ಗಳಿಗೆ ಕರೆದೊಯ್ಯಲು ಹಾಗೂ ಜಲಸಾಹಸ ಕ್ರೀಡೆ ನಡೆಸಲು ಬೋಟ್ ನಿಲುಗಡೆಗೆ ತಮಗೆ ಬೇಕು ಎಂದು ಬೇಡಿಕೆಯಿಟ್ಟರೆ, ಯುವಜನ ಮತ್ತು ಕ್ರೀಡಾ ಇಲಾಖೆ ಜಲಸಾಹಸ ಕ್ರೀಡೆ ನಡೆಸಲು ತಮಗೆ ಬೇಕು ಎಂದು ಪಟ್ಟು ಹಿಡಿದಿದೆ. ಸದ್ಯ ಈ ಜಾಗ ಕ್ರೀಡಾ ಇಲಾಖೆಯದ್ದಾದರೂ, ಹತ್ತು ವರ್ಷಗಳ ಹಿಂದೆ ಪ್ರವಾಸೋದ್ಯಮ ಇಲಾಖೆಗೆ ಗುತ್ತಿಗೆ ನೀಡಿತ್ತು. ಹೀಗಾಗಿ ಈ ಭಾಗದ ಸ್ಥಳವನ್ನು ಅಭಿವೃದ್ಧಿಪಡಿಸಿ ನದಿ ತೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿತ್ತು. ಆದ್ರೆ, ಕಳೆದ ಎರಡು ತಿಂಗಳ ಹಿಂದೆ ಈ ಜಾಗ ಮರಳಿ ತಮಗೆ ಬೇಕೆಂದು ಕ್ರೀಡಾ ಇಲಾಖೆ ಪಡೆದುಕೊಂಡಿದ್ದು, ಈವರೆಗೂ ಯಾವುದೇ ಚಟುವಟಿಕೆ ನಡೆಸದೇ ಪಾಳು ಬಿಟ್ಟಿದೆ. ಹೀಗಾಗಿ ಇದೀಗ ಉತ್ತಮ ಮಟ್ಟದ ತೇಲುವ ಜೆಟ್ಟಿ ನಿರ್ಮಾಣ ಮಾಡಿದ್ದರಿಂದ ಎರಡೂ ಇಲಾಖೆ ತಮ್ಮ ಸುಪರ್ದಿಗೆ ನೀಡಬೇಕು ಎಂದು ಬಂದರು ಇಲಾಖೆಗೆ ಪಟ್ಟು ಹಿಡಿದು ಪ್ರಭಾವ ಬಳಸುತ್ತಿದೆ. ಹೀಗಾಗಿ ಯಾರಿಗೆ ಈ ಜೆಟ್ಟಿಯನ್ನು ನಿರ್ವಹಣೆಗೆ ನೀಡಬೇಕು ಎಂಬ ಧ್ವಂಧ್ವದಲ್ಲಿ ನಿರ್ಮಾಣವಾಗಿ ಎರಡು ತಿಂಗಳುಗಳಾದರೂ ಹಸ್ತಾಂತರಿಸಲಾಗದೇ ಬಂದರು ಇಲಾಖೆ ಕೈ ಚಲ್ಲಿ ಕುಳಿತಿದೆ. 

ಕಾಂಗ್ರೆಸ್ ಸೇರುವ ಯಾವುದೇ ಪರಿಸ್ಥಿತಿ ಬಂದಿಲ್ಲ: ಶಾಸಕ ಶಿವರಾಮ್ ಹೆಬ್ಬಾರ್

ತೇಲುವ ಕಾಂಕ್ರೀಟ್ ಜೆಟ್ಟಿಯನ್ನು ರಾಜ್ಯ ಬಂದರು ಇಲಾಖೆ ಉಡುಪಿ, ಮಂಗಳೂರು, ಉತ್ತರಕನ್ನಡ ಜಿಲ್ಲೆ ಸೇರಿ ಒಟ್ಟು 10ಕ್ಕೂ ಹೆಚ್ಚು ಸ್ಥಳದಲ್ಲಿ ನಿರ್ಮಿಸಲು ಮುಂದಾಗಿದ್ದು, ಬಂದರು ಸಚಿವರು ಜಿಲ್ಲೆಯವರಾದ್ದರಿಂದ ಮೊದಲ ಬಾರಿ ಕಾರವಾರದಲ್ಲಿ ನಿರ್ಮಾಣವಾಗಿದೆ. ಈ ತೇಲುವ ಜೆಟ್ಟಿಯು ಮಳೆ ಗಾಳಿ, ಪ್ರವಾಹ ಬಂದರೂ ಜಗ್ಗದಷ್ಟು ಸದೃಢವಾಗಿದೆ. ಅಲ್ಯೂಮಿಲಿಯಮಂ ಹೊಂದಿದ ಮೇಲ್ಭಾಗ, ತಳಭಾಗದಲ್ಲಿ ಪಾಲಿಥಿನ್ ಹಾಗೂ ಸಿಮೆಂಟ್ ಕಾಂಕ್ರೀಟ್ ಬಳಸಿ ಈ ತೇಲುವ ಜೆಟ್ಟಿಯನ್ನು ನಿರ್ಮಾಣ ಮಾಡಲಾಗಿದೆ. 

ಈ ಜೆಟ್ಟಿಯಲ್ಲಿ ಬೋಟ್‌ಗಳ ಬ್ಯಾಟರಿ ಚಾರ್ಜ್ ಮಾಡಲು ಸಹ ಅವಕಾಶ ಕಲ್ಪಿಸಲಾಗಿದ್ದು , ನೀರಿನ ಏರಿಳಿತವಿದ್ದಾಗಲೂ ಬೋಟುಗಳ ನಿಲುಗಡೆಗೆ ಯಾವುದೇ ಸಮಸ್ಯೆಗಳಿಲ್ಲ. ಹೀಗಾಗಿ ಸರ್ವ ಋತುವಿನಲ್ಲೂ ಇದನ್ನು ಬಳಕೆ ಮಾಡಬಹುದಾಗಿದೆ. ಇನ್ನು ಈ ಕಾರಣದಿಂದಲೇ ಕ್ರೀಡಾ ಇಲಾಖೆ ತಮಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದು, ಮುಂದೆ ರಾಷ್ಟ್ರೀಯ, ಅಂತರಾಷ್ಟೀಯ ತರಬೇತಿಗಳನ್ನು ಇದೇ ಭಾಗದಲ್ಲಿ ನೀಡುತ್ತೇವೆ. ಹೀಗಾಗಿ ಈ ಜೆಟ್ಟಿಯ ನಿರ್ವಹಣೆಯನ್ನು ತಮಗೆ ನೀಡಿ, ಪ್ರವಾಸೋದ್ಯಮ ಇಲಾಖೆಗೆ ಬೇರೆ ಅವಕಾಶ ಮಾಡಿಕೊಡಿ ಎನ್ನುತ್ತಾರೆ ಕ್ರೀಡಾ ಇಲಾಖೆಗೆ ಸಂಬಂಧಪಟ್ಟವರು.

Follow Us:
Download App:
  • android
  • ios