Asianet Suvarna News Asianet Suvarna News

341 ಸ್ಮಶಾನ ಜಾಗ ಹದ್ದು ಬಸ್ತುಗೊಳಿಸಿ: ಶಾಸಕ

ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ 341 ಜನವಸತಿ ಪ್ರದೇಶಗಳಲ್ಲಿ ಕಂದಾಯ ಇಲಾಖೆ ಗುರುತಿಸಿರುವ ಸ್ಮಶಾನ ಜಾಗಗಳನ್ನು ಹದ್ದುಬಸ್ತು ಮಾಡಲು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಕ್ರಮ ಕೈಗೊಳ್ಳದ ತಾಲೂಕು ಸರ್ವೆಯರ್‌ಗಳ ವಿರುದ್ಧ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ ಹರಿಹಾಯ್ದರು.

Fix 341 Graveyard Land Says MLA snr
Author
First Published Jun 8, 2023, 5:33 AM IST

ತುಮಕೂರು :  ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ 341 ಜನವಸತಿ ಪ್ರದೇಶಗಳಲ್ಲಿ ಕಂದಾಯ ಇಲಾಖೆ ಗುರುತಿಸಿರುವ ಸ್ಮಶಾನ ಜಾಗಗಳನ್ನು ಹದ್ದುಬಸ್ತು ಮಾಡಲು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಕ್ರಮ ಕೈಗೊಳ್ಳದ ತಾಲೂಕು ಸರ್ವೆಯರ್‌ಗಳ ವಿರುದ್ಧ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ ಹರಿಹಾಯ್ದರು.

ಅವರು ತುಮಕೂರಿನಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2018ರಲ್ಲಿ ಸಲ್ಲಿಸಿರುವ ಅರ್ಜಿಗಳಿಗೂ ಇದುವರೆಗೂ ಹದ್ದುಬಸ್ತು ಮಾಡದ ಸರ್ವೆಯರ್‌ ಬಗ್ಗೆ ತೀವ್ರ ವಾಗ್ಧಾಳಿ ನಡೆಸಿದ ಶಾಸಕರು, ಮುಂದಿನ ಒಂದು ತಿಂಗಳ ಒಳಗೆ ಸರ್ವೆ ನಡೆಸಿ, ಹದ್ದುಬಸ್ತು ಗುರುತಿಸಿಕೊಡದಿದ್ದರೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಾಲೂಕು ಸರ್ವೆಯರ್‌ ವಿನಯ… ಅವರಿಗೆ ಎಚ್ಚರಿಕೆ ನೀಡಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಕಂದಾಯ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾಕಷ್ಟುದೂರುಗಳು ಬರುತ್ತಿವೆ. ಕೆಲವು ಕಡೆಗಳಲ್ಲಿ ಕಾನೂನಿನ ನೆಪ ಹೇಳಿಕೊಂಡು ಅನಗತ್ಯವಾಗಿ ಜನರನ್ನು ಅಲೆಸುತ್ತಿರುವುದು ಕಂಡು ಬಂದಿದೆ ಇದು ತಪ್ಪಬೇಕು. ಬಡವರು ಸರ್ಕಾರಿ ಭೂಮಿಗಳಲ್ಲಿ 30-40 ವರ್ಷಗಳಿಂದ ಸಾಗುವಳಿ ಮಾಡುತ್ತಾ ಅನುಭವದಲ್ಲಿದ್ದಾರೆ. ತೆಂಗು, ಅಡಿಕೆ ಸೇರಿದಂತೆ ಗಿಡ, ಗಂಟಿಗಳನ್ನು ಹಾಕಿ, ಜೀವನೋಪಾಯ ಮಾಡುತ್ತಿದ್ದಾರೆ. ಅವರಿಗೆ 2018ರ ಮಾಚ್‌ರ್‍ 23ರಂದು ಬಗರ್‌ಹುಕುಂ ಕಮಿಟಿಯಲ್ಲಿ ಪರಿಶೀಲಿಸಿ ನನ್ನ ಕಾಲದಲ್ಲಿ ಸಾಗುವಳಿ ಚೀಟಿ ನೀಡಿ, ಹಕ್ಕು ಪತ್ರ ವಿತರಿಸಿದ್ದರೂ ಸಹ ಇದುವರೆಗೂ ಅವರ ಹೆಸರಿಗೆ ಖಾತೆ, ಪಹಣಿ ಅಗಿಲ್ಲ ಎಂದರು.

ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಪ್ರಭಾವಿಗಳು ಸರ್ಕಾರಿ ಜಾಗಗಳಾದ ರಾಜಕಾಲುವೆ, ನಕಾಶೆ ರಸ್ತೆಗಳನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಿರುವುದು, ತೆಂಗು, ಅಡಿಕೆ, ಮಾವು ಮತ್ತಿತರರು ಬೆಳೆಗಳನ್ನು ಹಾಕಿದ್ದಾರೆ. ಇದರಿಂದಾಗಿ ಸ್ಮಶಾನ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಗ್ರಾಮ ಆಡಳಿತಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ಇದರ ಬಗ್ಗೆ ಗಮನ ಹರಿಸಿ, ನಕಾಶೆ ದಾರಿ,ಬಂಡಿ ಜಾಡು, ರಾಜಕಾಲುವೆ ಒತ್ತುವರಿ ಮಾಡಿದ್ದರೆ ಸೂಕ್ತ ಕ್ರಮವಹಿಸಿ. ಕ್ಷೇತ್ರದಲ್ಲಿ ರೈತರು ಫಾರಂ 50-53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಉರ್ಡಿಗೆರೆ, ಗೂಳೂರು, ಹೆಬ್ಬೂರು, ಹೊನ್ನುಡಿಕೆ, ಊರುಕೆರೆ ಭಾಗದಲ್ಲಿ ಸುಮಾರು 4386 ಅರ್ಜಿಗಳು ಬಂದಿದ್ದು, ಇವುಗಳಲ್ಲಿ 4214 ಅರ್ಜಿಗಳನ್ನು ಪರಿಶೀಲನೆ ನಡೆಸಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಶಾಸಕರು ರಾಮೇನಹಳ್ಳಿ, ಕಲ್ಕಕೆರೆ, ಚೋಳಾಪುರ, ಡಣಾನಾಯಕನಪುರ, ದೊಡ್ಡಗೊಲ್ಲಹಳ್ಳಿ, ಸೋರೆಕುಂಟೆ ಮತ್ತಿತರ ಕಡೆಗಳಲ್ಲಿ ನಮ್ಮ ಕಾಲದಲ್ಲಿ ನೀಡಿದ ಹಕ್ಕುಪತ್ರಗಳಿಗೆ ಖಾತೆ, ಪಹಣಿ ಮಾಡಿಲ್ಲ. ಸೋರೆಕುಂಟೆ ಗ್ರಾಮದ ಸರ್ವೆ ನಂ 41ರ ಮೇಲಿದ್ದ ಕೇಸು ಖುಲಾಸೆಯಾಗಿದ್ದು, ಫಲಾನುಭವಿಗಳಿಗೆ ಪಹಣಿ, ಖಾತೆ ಮಾಡಿಕೊಡಲು ಶಾಸಕ ಬಿ.ಸುರೇಶಗೌಡರು ಸೂಚಿಸಿದರು.

ರಾಮಗೊಂಡನಹಳ್ಳಿ ಸರ್ವೆ ನಂ. 35ರಲ್ಲಿ ದಲಿತ ಜನಾಂಗಕ್ಕೆ ಸೇರಿದ ಲಕ್ಷ್ಮೀದೇವಮ್ಮ ಎಂಬುವವರು ಕಳೆದ 70 ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದು, ತೆಂಗು,ಅಡಿಕೆ, ಮಾವಿನ ಸಸಿಗಳನ್ನು ನೆಟ್ಟಿದ್ದಾರೆ. ಅಲ್ಲದೆ ಲಕ್ಷ್ಮಿದೇವಮ್ಮ ಅವರ ತಂದೆಯ ಸಮಾಧಿಯು ಕೂಡ ಇದೇ ಜಾಗದಲ್ಲಿದೆ. ಇವರು ಸರ್ಕಾರದ ನಿಯಮದ ಅನ್ವಯ 1998ರಲ್ಲಿ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ. 2018ರಲ್ಲಿ ಹಕ್ಕುಪತ್ರ ನೀಡಲಾಗಿದೆ. ಆದರೆ ಅರಣ್ಯ ಇಲಾಖೆಯ ತಕರಾರು ಎಂದು ಇದುವರೆಗೂ ಖಾತೆ, ಪಹಣಿ ಮಾಡಿಲ್ಲ. ಅಲ್ಲದೆ ಹೈಕೋರ್ಚ್‌ ಕೂಡ ಮೂಲ ದಾಖಲೆಗಳನ್ನು ಪರಿಶೀಲಿಸಿ ತಹಸೀಲ್ದಾರ್‌ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಹೈಕೋರ್ಚ್‌ ಆದೇಶವನ್ನು ಸರಿಯಾಗಿ ಓದದೆ ಇದುವರೆಗೂ ಖಾತೆ ಮಾಡಿಲ್ಲ. ಕೂಡಲೇ ಖಾತೆ ಮಾಡಿಕೊಡುವಂತೆ ತಹಸೀಲ್ದಾರರಿಗೆ ತಾಕೀತು ಮಾಡಿದರು.

ಇದೇ ಪ್ರಕಾರ ಸಭೆ ನಡೆಯುವ ವೇಳೆ ಅರ್ಜಿ ಹಿಡಿದು ಬಂದ ಸಾರ್ವಜನಿಕರು ಅಹವಾಲು ಕೇಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ನಡೆಸಿದರು. ಸಭೆಯಲ್ಲಿ ತಹಸೀಲ್ದಾರ್‌ ಸಿದ್ದೇಶ್‌, ಇಓ ಜೈಪಾಲ…,ಬಿ.ಇ.ಒ ಹನುಮನಾಯಕ್‌, ಗ್ರೇಡ್‌ 2 ತಹಸೀಲ್ದಾರ್‌ ಕಮಲಮ್ಮ, ಭೂಮಿ ಕೇಂದ್ರದ ಶಿರಸ್ತೇದಾರ್‌ ನರಸಿಂಹರಾಜು ಸೇರಿದಂತೆ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಸರ್ವೆಯರ್‌ಗಳು ಭಾಗವಹಿಸಿದ್ದರು.

‘ಜನತೆಗೆ ತ್ವರಿತವಾಗಿ ಯೋಜನೆ ಲಾಭ ಸಿಗಲಿ’

ಊರುಕೆರೆ, ಊರ್ಡಿಗೆರೆ, ಹೆಬ್ಬೂರು, ಹೊನ್ನುಡಿಕೆ ಮತ್ತು ಗೂಳೂರು ಹೋಬಳಿಗಳಲ್ಲಿ ನೂರಾರು ಪ್ರಕರಣಗಳು ಇವೆ. ಯಾವುದೇ ಸರ್ಕಾರವಿರಲಿ, ಜನರ ಕಲ್ಯಾಣಕ್ಕಾಗಿ ಮಾಡುವ ಯೋಜನೆಗಳು ತ್ವರಿತವಾಗಿ ಜನರಿಗೆ ಉಪಯೋಗವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಂಡರೇ ಮಾತ್ರ ಸರ್ಕಾರಕ್ಕೆ, ಜನಪ್ರತಿನಿಧಿಗೆ ಒಳ್ಳೆಯ ಹೆಸರು ಬರಲು ಸಾಧ್ಯ. ಹಾಗಾಗಿ ತ್ವರಿತಗತಿಯಲ್ಲಿ ಈಗಾಗಲೇ ಸಾಗುವಳಿ ಚೀಟಿ ನೀಡಿ, ಹಕ್ಕುಪತ್ರ ವಿತರಿಸಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಖಾತೆ, ಪಹಣಿ ಮಾಡಲು ಶಾಸಕ ಸುರೇಶ್‌ಗೌಡ ತಹಸೀಲ್ದಾರರಿಗೆ ಸೂಚಿಸಿದರು. ಸರ್ಕಾರಿ ಶಾಲೆಗಳ ಜಾಗಗಳು ಇನ್ನೂ ಸಹ ಖಾತೆ ಆಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕರು, 94 ಸಿ ಅಡಿ ಅರ್ಜಿ ಹಾಕಿ ಹಣ ಪಾವತಿಸದೆ ಇರುವವರ ಮಾಹಿತಿಯನ್ನು ನೀಡುವಂತೆ ತಹಸೀಲ್ದಾರ್‌ ಅವರಿಗೆ ತಿಳಿಸಿದರು. ಬಡವರಿಗೆ ಆಶ್ರಯ ವಸತಿ ಅಡಿ ಸೂರು ಕಲ್ಪಿಸಲು ಸೂಕ್ತ ಗೋಮಾಳದ ಮಾಹಿತಿ ನೀಡುವಂತೆ ರಾಜಸ್ವ ನೀರಿಕ್ಷಕರಿಗೆ ತಾಕೀತು ಮಾಡಿದರು.

Follow Us:
Download App:
  • android
  • ios