ಕಾಲುವೆ ಸುರಂಗ ಮಾರ್ಗದಲ್ಲಿ ಸಿಲುಕಿದ್ದ ಯುವಕ| ಯುವಕನ ಪ್ರಾಣ ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ| ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದ ಘಟನೆ|

ಸವದತ್ತಿ(ಜ.15): ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡ ಸಮೀಪದ ಮಲಪ್ರಭಾ ನದಿಯಿಂದ ಮುಂದೆ ಹೋಗುವ ಬಲದಂಡೆ ಕಾಲುವೆ ಸುರಂಗ ಮಾರ್ಗದಲ್ಲಿ ಈಜಲು ಹೋಗಿ ಹಲವು ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಯುವಕನೊಬ್ಬನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿ ಸುರಕ್ಷಿತವಾಗಿ ಸುರಂಗ ಮಾರ್ಗದಿಂದ ಹೊರ ತೆಗೆದಿದ್ದಾರೆ.

Add Asianetnews Kannada as a Preferred SourcegooglePreferred

"

ಮಂಗಳವಾರ ಶ್ರೀಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ನಾಗರಾಳ ಗ್ರಾಮದ ಯುವಕ ವಿಠ್ಠಲ ರಾಮಪ್ಪ ಹೊಸಗೌಡರ ಕೆಲವರೊಂದಿಗೆ ಈಜಲು ಈ ಬಲದಂಡೆ ಕಾಲುವೆಗೆ ಆಗಮಿಸಿದ್ದಾನೆ.

ನೀರಿನ ಹರಿವಿನ ರಭಸ ಅರಿಯದ ಯುವಕ ಒಮ್ಮೆಲೆ ಕಾಲುವೆಯಲ್ಲಿ ಜಿಗಿದ ಕಾರಣ ಕಾಲುವೆಯಿಂದ ನೇರವಾಗಿ ಸುರಂಗ ಮಾರ್ಗದೊಳಗೆ ಹೋಗಿ ಅಲ್ಲಿರುವ ಕಬ್ಬಿಣದ ಸಲಾಖೆಯನ್ನು ಹಿಡಿದುಕೊಂಡು ಹಲವು ಗಂಟೆಗಳ ಕಾಲ ಅಲ್ಲಿಯೇ ಉಳಿದಿದ್ದಾನೆ. ಯುವಕನ ಜೊತೆಗೆ ಬಂದವರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿಯವರು ಕೂಡಲೇ ಸ್ಥಳಕ್ಕೆ ಆಗಮಿಸಿ ಯುವಕನ ಪ್ರಾಣ ರಕ್ಷಣೆ ಮಾಡಿದ್ದಾರೆ.

ಸವದತ್ತಿ ಅಗ್ನಿಶಾಮಕ ಠಾಣಾಧಿಕಾರಿ ಎಂ.ಕೆ.ಕಲಾದಗಿ ನೇತೃತ್ವದಲ್ಲಿ ಸಿಬ್ಬಂದಿಯವರಾದ ಸಂಜು ಮಠಪತಿ, ಉಮೇಶ ಅಂಗಡಿ, ವಿನೋದ ತೋಡಕರ, ಮಂಜು ಪಂಚೆನ್ನವರ, ನವೀನ ಪವಾಡಿ ಬಲದಂಡೆ ಕಾಲುವೆ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡ ಯುವಕನನ್ನು ಹಗ್ಗದಿಂದ ನೀರಿನಲ್ಲಿ ಇಳಿದು ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.<br/>