ದಾಖಲೆಗಳ ಪರಿಶೀಲನೆ ವೇಳೆ ಅನುಮಾನಗೊಂಡು ಆಂತರಿಕ ತನಿಖೆ ಮಾಡಿದಾಗ ಅಕ್ರಮ ಬಯಲಾಗಿದೆ. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ಕಂಡು ಬಂದಿದೆ. 

ಬೆಂಗಳೂರು(ಸೆ.02):  ದಾಖಲೆಗಳನ್ನು ಪರಿಶೀಲಿಸದೆ ಅರವತ್ತು ವರ್ಷ ತುಂಬದ ವ್ಯಕ್ತಿಗಳಿಗೂ ಸರ್ಕಾರದ ಮಾಸಾಶನ ಮಂಜೂರು ಮಾಡಿದ ಆರೋಪದಡಿ ಉಪ ತಹಸೀಲ್ದಾರ್‌ ಸೇರಿ ಐವರ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add Asianetnews Kannada as a Preferred SourcegooglePreferred

ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್‌ ಎಚ್‌.ಶ್ರೀನಿವಾಸ್‌ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರು ದಕ್ಷಿಣ ತಾಲೂಕು ಉಪತಹಸೀಲ್ದಾರ್‌ ಅಂಜನ್‌ಕುಮಾರ್‌, ರಾಜಸ್ವ ನಿರೀಕ್ಷಕ ಮಂಜುನಾಥ ರೆಡ್ಡಿ ಮತ್ತು ಮಾಶಾಸನಕ್ಕೆ ನಕಲಿ ದಾಖಲೆ ಸಲ್ಲಿಸಿದ್ದ ನಾಗಮಣಿ, ಜಯರಾಮ್‌ ಮತ್ತು ಮಹದೇವ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ​ಬು​ರಗಿ ಜಿಲ್ಲಾ​ದ್ಯಂತ ಪಿಂಚಣಿ ವಂಚನೆ ಹಗ​ರ​ಣ?

ಸರ್ಕಾರದ ಮಾಸಾಶನ ಅಥವಾ ಪಿಂಚಣಿ ಪಡೆಯಲು ವ್ಯಕ್ತಿಗೆ 60 ವರ್ಷ ದಾಟಿರಬೇಕು. ಆದರೆ, ನಾಗಮಣಿ, ಜಯರಾಮ್‌ ಮತ್ತು ಮಹದೇವ ಎಂಬುವವರು ಮಾಸಾಶನ ಪಡೆಯಲು ಅರ್ಹತೆ ಇಲ್ಲದಿದ್ದರೂ 60 ವರ್ಷ ದಾಟಿದ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಅರ್ಜಿಯ ಹಾಗೂ ದಾಖಲೆಗಳ ಪರಿಶೀಲನೆ ವೇಳೆ ದಾಖಲೆಗಳ ನೈಜತೆ ಪರಿಶೀಲಿಸದೆ ಉಪ ತಹಸೀಲ್ದಾರ್‌ ಮತ್ತು ರಾಜಸ್ವ ನಿರೀಕ್ಷಕ ನಿರ್ಲಕ್ಷ್ಯ ವಹಿಸಿದ್ದರು. ನಕಲಿ ದಾಖಲೆ ಆಧಾರದ ಮೇಲೆ ಈ ಮೂವರಿಗೂ ಮಾಸಾಶನ ಮಂಜೂರಾತಿ ಪತ್ರ ವಿತರಿಸಿದ್ದಾರೆ.

ಆಂತರಿಕ ತನಿಖೆಯಲ್ಲಿ ಅಕ್ರಮ ಬಯಲು

ದಾಖಲೆಗಳ ಪರಿಶೀಲನೆ ವೇಳೆ ಅನುಮಾನಗೊಂಡು ಆಂತರಿಕ ತನಿಖೆ ಮಾಡಿದಾಗ ಅಕ್ರಮ ಬಯಲಾಗಿದೆ. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ಕಂಡು ಬಂದಿದೆ. ಹೀಗಾಗಿ ಈ ಐವರು ಆರೋಪಿಗಳ ವಿರುದ್ಧ ಸರ್ಕಾರದ ಬೊಕ್ಕಸಕ್ಕೆ ನಷ್ಟಮತ್ತು ಸರ್ಕಾರಿ ದಾಖಲೆ ತಿದ್ದಿದ ಆರೋಪದಡಿ ಕಾನೂನು ಕ್ರಮ ಜರುಗಿಸುವಂತೆ ತಹಸೀಲ್ದಾರ್‌ ಶ್ರೀನಿವಾಸ್‌ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.