ಅಪರಾಧಿಗಳ ಪತ್ತೆಗೆ ಬೆರಳು ಮುದ್ರಣ ಪಾತ್ರ ಮಹತ್ತರ
ಅಪರಾಧಿಯ ವಿಚಾರಣೆಯಲ್ಲಿ ನ್ಯಾಯವಾದಿಗಳಿಗೆ ಬೆರಳು ಮುದ್ರಣದ ಮಾಹಿತಿಯ ಜ್ಞಾನದ ಅವಶ್ಯಕತೆ ಇರಬೇಕು
ಹುಬ್ಬಳ್ಳಿ[ಅ.20]: ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ನ್ಯಾಯ ವಿಜ್ಞಾನ ಹಾಗೂ ಬೆರಳು ಮುದ್ರಣ ಪರೀಕ್ಷೆಯು 3 ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರದಲ್ಲಿ ಭೂಪಾಲದ ಬೆರಳು ಮುದ್ರಣ ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯದ ನಿರೀಕ್ಷಕಿ ನಿಧಿ ಶ್ರಿವಾತ್ಸವ ಮಾತನಾಡಿ, ಅಪರಾಧಿಗಳ ಪತ್ತೆ ಹಚ್ಚುವಲ್ಲಿ ಬೆರಳು ಮುದ್ರಣ ಮಹತ್ತರ ಪಾತ್ರ ವಹಿಸುತ್ತದೆ ಎಂದರು.
ಅಲ್ಲದೇ, ಬೆರಳು ಮುದ್ರಣದ ಪ್ರಕಾರ, ಅವುಗಳನ್ನು ಪರಿಶೀಲಿಸುವ ಹಾಗೂ ಪರೀಕ್ಷಿಸುವ ವಿಧಾನ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೊ. ಶರತ್ ಫಡ್ನಿಸ್ ಮಾತನಾಡಿ, ಬೆರಳು ಮುದ್ರಣದ ಮಹತ್ವ ಹಾಗೂ ಅಪರಾಧಿಯ ವಿಚಾರಣೆಯಲ್ಲಿ ನ್ಯಾಯವಾದಿಗಳಿಗೆ ಬೆರಳು ಮುದ್ರಣದ ಮಾಹಿತಿಯ ಜ್ಞಾನದ ಅವಶ್ಯಕತೆ ಬಗ್ಗೆ ವಿವರಿಸಿದರು.
ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರೂಪಾ ಇಂಗಳಹಳ್ಳಿ ಮಾತನಾಡಿ, ವಕೀಲ ವೃತ್ತಿಯ ಪದವಿಯ ಅಧ್ಯಾಯದಲ್ಲಿ ವಿಶ್ವವಿದ್ಯಾನಿಲಯದ ಪಠ್ಯಗಳೊಂದಿಗೆ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ವೃತ್ತಿ ಕೌಶಲ್ಯತೆ ವೃದ್ಧಿಸಲು ಸಹಕಾರಿಯಾಗುತ್ತವೆ ಎಂದರು.
ಪ್ರೊ. ಶ್ರೀಶೈಲಾ ಮುಧೋಳ ನಿರೂಪಿಸಿದರು. ಪ್ರೊ.ಬಾಬುಲಾಲ ದರ್ಗದ, ಪ್ರೊ. ದೀಪಾ ಪಾಟೀಲ, ಪ್ರೊ. ಸುರೇಶ ಲಿಂಬಿಕಾಯಿ, ಪ್ರೊ. ಪೂರ್ಣಿಮಾ ಮುರಗೋಡ, ಪ್ರೊ. ವಿಶ್ವನಾಥ ಬಿಚಗತ್ತಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. 60 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.