ಬಸ್ ನಿರ್ವಾಹಕನ ಮೇಲೆ ಕರವೇ ಜಿಲ್ಲಾಧ್ಯಕ್ಷನಿಂದ ಹಲ್ಲೆ | ಟಿಕೆಟ್ ತೆಗೆದುಕೊಳ್ಳಲು ಕರವೇ ಅಧ್ಯಕ್ಷ ನಿರಾಕರಣೆ, ಪ್ರಶ್ನಿಸಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ  | ಗದಗದಲ್ಲಿ ಇಂತದ್ದೊಂದು ಘಟನೆ 

ಗದಗ (ಅ. 03): ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕುಡಿದ ಅಮಲಿನಲ್ಲಿ ಕರವೇ ಜಿಲ್ಲಾಧ್ಯಕ್ಷನೋರ್ವ ಬಸ್ ನಿರ್ವಾಹಕನ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ತೋರಿರುವ ಘಟನೆ ಗದಗ ತಾಲೂಕಿನ ಹೊಂಬಳ ಬಳಿ ನಡೆದಿದೆ. 

Add Asianetnews Kannada as a Preferred SourcegooglePreferred

ಕರವೇ ಸ್ವಾಭಿಮಾನಿ ಬಣದ ಗದಗ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಚೌಡಣ್ಣವರ್ ಎಂಬುವರು ಬಸ್ ನಿರ್ವಾಹಕ ಪ್ರಕಾಶ ಎಂಬುವರ ಮೇಲೆ ಹಲ್ಲೆ ಮಾಡಿ ಅವರಲ್ಲಿದ್ದ ಹಣ ದೋಚಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ರಾತ್ರಿ ವೇಳೆ ಗದಗದಿಂದ ಹೊಂಬಳ ಮಾರ್ಗವಾಗಿ ನವಲಗುಂದಕ್ಕೆ ಹೊರಟಿತ್ತು ಬಸ್. ಹೊಂಬಳ ಗ್ರಾಮದ ಮೊದಲನೆ ಸ್ಟಾಪ್ ನಲ್ಲಿ ಕರವೇ ಜಿಲ್ಲಾಧ್ಯಕ್ಷ ಬಸ್ ಹತ್ತಿ ಎರಡನೇ ಸ್ಟಾಪ್ ನಲ್ಲಿ ಇಳಿಯಲು ಮುಂದಾಗಿದ್ದಾನೆ.

ಈ ಸ್ಟಾಪ್‌ನಿಂದ ಮುಂದಿನ ಸ್ಟಾಪ್ ಗೆ ಇಳಿಯೊಕೆ ಇದು ಸಿಟಿ ಬಸ್ ಅಲ್ಲ. ಇದಕ್ಕೆ ಟಿಕೆಟ್ ಕೊಡೊಕಾಗಲ್ಲ. ಊರು ಬರುವ ಮುಂಚಿತವಾಗಿ ಟಿಕೆಟ್ ಕ್ಲೋಸ್ ಮಾಡಲಾಗಿದೆ. ಮುಂದೆ ಚೆಕ್ಕಿಂಗ್ ಬಂದ್ರೆ ನಮಗೆ ಸಮಸ್ಯೆಯಾಗುತ್ತೆ ಎಂದಿದಕ್ಕೆ‌, ನಾನು ಕರವೇ ಅಧ್ಯಕ್ಷ, ಯಾರೂ ನನ್ನ ಟಿಕೆಟ್ ಕೇಳಲ್ಲ. ನನ್ನನ್ನೇ ಟಿಕೆಟ್ ಕೇಳುತ್ತೀಯಾ? ಟಿಕೆಟ್ ತೆಗೆದುಕೊಳ್ಳಲ್ಲ, ಹಣವೂ ಕೊಡಲ್ಲ ಎಂದು ದರ್ಪ ತೋರಿ ಮನಬಂದಂತೆ ಹಲ್ಲೆಮಾಡಿ ಹಣ ದೋಚಿ ಪರಾರಿಯಾಗಿದ್ದಾನೆ ಎಂಬುದು ನಿರ್ವಾಹಕನ ಆರೋಪವಾಗಿದೆ.

ನಂತರ ಚಾಲಕ ಸಿದ್ದನಗೌಡ ಹಾಗೂ ಪ್ರಯಾಣಿಕರು ಜಗಳ ಬಿಡಿಸುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಕಂಪ್ಲೇಂಟ್ ಏನಾದ್ರೂ ಕೊಟ್ರೆ ಹುಷಾರ್..! ಎಂದು ಬೆದರಿಕೆ‌ ಕೂಡಾ ಹಾಕಿದ್ದಾನೆ ಎನ್ನಲಾಗಿದೆ. 

ಈ ಗಲಾಟೆ ವೇಳೆ ನಿರ್ವಾಹಕನ ಶರ್ಟ್ ಹರಿದಿದೆ. ಜೇಬ್ ನಲ್ಲಿದ್ದ ಹಣ ಇಲ್ಲದಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದರಿಂದ ನಿರ್ವಾಹಕ ಪ್ರಕಾಶ ಮಾಧ್ಯಮದ ಎದುರು ಕಣ್ಣಿರಿಟ್ಟಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರವೆ ಸ್ವಾಭಿಮಾನಿ ಅಧ್ಯಕ್ಷ ಮುತ್ತಣ್ಣ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.