ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೂವಿನಹಡಗಲಿ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಇಂದು ಉಪವಾಸ ಸತ್ಯಾಗ್ರಹ| ಪಟ್ಟಣದ ಲಾಲ್‌ ಬಹದ್ದೂರ್‌ ಶಾಸ್ತ್ರೀ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನ| ಬಳ್ಳಾರಿ ವಿಭಜನೆ ಸೂಕ್ತ ಎಂದ ಕೆ.ಸಿ. ಕೊಂಡಯ್ಯ| ಬಳ್ಳಾರಿ ಜಿಲ್ಲಾ ವಿಭಜನೆಗೆ ನನ್ನ ತೀವ್ರ ವಿರೋಧವಿದೆ ಎಂದ ಶಾಸಕ ಜಿ.ಕರುಣಾಕರರೆಡ್ಡಿ| 

ಹೂವಿನಹಡಗಲಿ(ಅ.2): ಬಳ್ಳಾರಿ ಇಬ್ಭಾಗ ಖಂಡಿಸಿ ಮಂಗಳವಾರ ಬಳ್ಳಾರಿ ಬಂದ್‌ ನಡೆದರೆ, ಮತ್ತೊಂದೆಡೆ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನವಾಗಿ ಹೂವಿನಹಡಗಲಿ ಜಿಲ್ಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಅ.2ರಂದು ಉಪವಾಸ ಸತ್ಯಾಗ್ರಹ ಆಯೋಜಿಸಲು ಜಿಲ್ಲಾ ಹೋರಾಟ ಸಮಿತಿ ತೀರ್ಮಾನಿಸಿದೆ. 

Add Asianetnews Kannada as a Preferred SourcegooglePreferred

ಪಟ್ಟಣದ ಗವಿಮಠದಲ್ಲಿ ಸೋಮವಾರ ಸಂಜೆ ನಡೆದ ಜಿಲ್ಲಾ ಹೋರಾಟ ಸಮಿತಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದ್ದು, ಗಾಂಧಿ​ ಜಯಂತಿ ದಿನದಂದು ಪಟ್ಟಣದ ಲಾಲ್‌ ಬಹದ್ದೂರ್‌ ಶಾಸ್ತ್ರೀ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ಬಳ್ಳಾರಿ ವಿಭಜನೆ ಸೂಕ್ತ: ಕೆ.ಸಿ. ಕೊಂಡಯ್ಯ

ಆಡಳಿತಾತ್ಮಕ ದೃಷ್ಟಿಯಿಂದ ವಿಜಯನಗರ ಜಿಲ್ಲೆಯಾಗುವುದು ಸೂಕ್ತವಿದೆ ಎಂದು ವಿಧಾನಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಪ್ರತ್ಯೇಕವಾಗಬೇಕು ಎಂಬ ಕೂಗು ಹೊಸದಲ್ಲ. ಎರಡೂವರೆ ದಶಕಗಳಿಂದ ಇದೆ. ನಾನು ಜಿಲ್ಲಾದ್ಯಂತ ಸುತ್ತಾಡಿದ್ದೇನೆ. ದೂರದ ಹರಪನಹಳ್ಳಿ, ಹಡಗಲಿ ಸೇರಿದಂತೆ ಕೊನೆಯ ಭಾಗದ ಜನರಿಗೆ ಸಮಸ್ಯೆಯಾಗುತ್ತದೆ. ಈ ಕಾರಣಕ್ಕಾಗಿಯೇ ಮತ್ತೊಂದು ಜಿಲ್ಲೆಗೆ ನಾವು ಬೆಂಬಲಿಸಿದ್ದೇನೆ ಎಂದರು.

ವಿಭಜನೆಗೆ ಕರುಣಾಕರರೆಡ್ಡಿ ವಿರೋಧ

ಬಳ್ಳಾರಿ ಜಿಲ್ಲಾ ವಿಭಜನೆಗೆ ನನ್ನ ತೀವ್ರ ವಿರೋಧವಿದೆ. ಜಿಲ್ಲಾ ವಿಭಜನೆ ಸಂಬಂಧ ಮುಖ್ಯಮಂತ್ರಿಗಳು ಅ.2ರಂದು ಕರೆದ ಸಭೆಯಲ್ಲಿ ಪಾಲ್ಗೊಂಡು ನನ್ನ ವಿರೋಧವನ್ನು ವ್ಯಕ್ತಪಡಿಸುತ್ತೇನೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ತಿಳಿಸಿದ್ದಾರೆ.
ತಾಲೂಕಿನ ಚಿಗಟೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಹಿತಿ ಕುಂ.ವೀರಭದ್ರಪ್ಪನವರು ರೆಡ್ಡಿಗಳು ಕರ್ನಾಟಕದವರಲ್ಲ, ಆಂಧ್ರದವರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅಂತಹ ಮೂರ್ಖ ಸಾಹಿತಿಗಳ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ ಎಂದು ಉತ್ತರಿಸಿದರು.

ವಿಜಯನಗರ ಜಿಲ್ಲೆಗಾಗಿ ವಕೀಲರ ಪ್ರತಿಭಟನೆ

ಸಮಗ್ರ ಬಳ್ಳಾರಿ ಜಿಲ್ಲೆಗಾಗಿ ಒತ್ತಾಯಿಸಿ ಮಂಗಳವಾರ ಬಳ್ಳಾರಿ ಬಂದ್‌ ಆಚರಿಸಿದರೆ, ಇತ್ತ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಕೂಡಲೇ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಹೊಸಪೇಟೆ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ನೂರಾರು ವಕೀಲರು, ಸ್ಥಳೀಯ ರೋಟರಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಗರದ ನ್ಯಾಯಾಲಯದ ಆವರಣದಿಂದ ಮೆರವಣಿಗೆ ನಡೆಸಿದ ವಕೀಲರು, ನಗರದ ರೋಟರಿ ವೃತ್ತದಲ್ಲಿ ಜಮಾವಣೆಗೊಂಡು, ಸರ್ಕಾರ ಕೂಡಲೇ ವಿಜಯನಗರ ಜಿಲ್ಲೆ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.