ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಓರ್ವ ಅವಿವೇಕಿ, ನಾವು ಅವರಿಗೆ ಆಫರ್ ಕೊಡುತ್ತಿದ್ದೇವೆ. 50 ಕೋಟಿ ರು. ಕೊಡ್ತೀವಿ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಕಿಡಿಕಾರಿದ ಹೋರಾಟಗಾರರು. 

ಚಾಮರಾಜನಗರ(ಸೆ.07): ಪರಿಹಾರದ ಆಸೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಎಂಬ ಸಕ್ಕರೆ ಸಚಿವರ ಹೇಳಿಕೆ ಖಂಡಿಸಿ ಕಬ್ಬು ಬೆಳೆಗಾರರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಜಿಲ್ಲಾಡಳಿತ ಭವನದ ಎದುರು ಕಬ್ಬುಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಭಾಗ್ಯರಾಜು ನೇತೃತ್ವದಲ್ಲಿ ಕಾವೇರಿ ನೀರು ನಿಲ್ಲಿಸುವಂತೆ ಹಾಗೂ ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿ ಅರೆಬೆತ್ತಲೆಯಾಗಿ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು.

Add Asianetnews Kannada as a Preferred SourcegooglePreferred

ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಓರ್ವ ಅವಿವೇಕಿ, ನಾವು ಅವರಿಗೆ ಆಫರ್ ಕೊಡುತ್ತಿದ್ದೇವೆ. 50 ಕೋಟಿ ರು. ಕೊಡ್ತೀವಿ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಹೋರಾಟಗಾರರು ಕಿಡಿಕಾರಿದರು. ಸಕ್ಕರೆ ಸಚಿವನಿಗೆ ತಿರುಗೇಟು ನೀಡಿದರಲ್ಲದೆ, ರಾಜ್ಯದಲ್ಲಿ 950 ಕೋಟಿ ರು. ಕಬ್ಬಿನ ಬಾಕಿ ಬಿಲ್ ಕೊಡಬೇಕಿದೆ ಅದನ್ನ ಕೊಡೋ ಯೋಗ್ಯತೆ ಅವನಿಗಿಲ್ಲ, ನಾವು 50 ಕೋಟಿ ರು. ಕೊಡ್ತೀವಿ ಆತ್ಮಹತ್ಯೆ ಮಾಡಿಕೋಳ್ತಾರಾ? ಎಂದು ಪ್ರಶ್ನಿಸಿದರು.ಎಲ್ಲ ರೈತರು ಭಿಕ್ಷೆ ಬೇಡಿ 50 ಕೋಟಿ ಕೊಡ್ತೀವಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ ಎಂದು ಪ್ರತಿಭಟನಾಕಾರರು ಏಕವಚನದಲ್ಲೇ ಹರಿಹಾಯ್ದರು.ಇದುವರೆಗೆ ಒಬ್ಬ ಸಚಿವ, ಕಬ್ಬಿನ ಕಾರ್ಖಾನೆ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿಲ್ಲ, ವರ್ಷ ವರ್ಷ ನಿಮ್ಮ ಆದಾಯ ದ್ವಿಗುಣ ಆಗುತ್ತಿದೆ, ಆದರೆ, ರೈತರ ಆದಾಯ ದ್ವಿಗುಣ ಆಗುತ್ತಾ..?

ಮತ್ತೇ ಮುನ್ನಲೆಗೆ ಬಂತೂ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ: ಗಣಿಗಾರಿಕೆ ಆರಂಭಿಸಲು ಲಾಬಿ!

ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಲಿನ ನಾಗರಾಜು, ಪಟೇಲ್‌ ಶಿವಮೂರ್ತಿ, ಅರಳಿಕಟ್ಟೆ ಕುಮಾರ್‌, ಪ್ರಭುಸ್ವಾಮಿ, ಮಹದೇವಸ್ವಾಮಿ, ವೀರಭದ್ರಸ್ವಾಮಿ, ಬಸವಣ್ಣ, ಮಹದೇವಪ್ಪ, ನಂದೀಶ್‌ ಇತರರು ಇದ್ದರು.

ರೈತರಿಗೆ ಏನು ಕೊಡ್ತೀರಿ ನೀವು ?

ನೀವು ಅಧಿಕಾರಕ್ಕೆ ಬರೋವಾಗ ಸಲ್ಲಿಸುವ ಅಫಿಡವಿಟ್ ನಲ್ಲಿ ವರ್ಷ ವರ್ಷ ನಿಮ್ಮ ಆದಾಯ ಮಾತ್ರ ದ್ವಿಗುಣ ಆಗುತ್ತೆ ಎಂದು ಕಿಡಿಕಾರಿದರು. ನೀವು ಕೊಡುವ ಮೂಲಸೌಕರ್ಯ ಏನು ರೈತರ ಕಣ್ಣು, ಬೆನ್ನು, ತಲೆಗೆ ಮೊಳೆ ಹೊಡಿಯುವ ಕೆಲಸ ಮಾಡ್ತೀರಿ. ನಾವೇ 50 ಕೋಟಿ ಕೊಡ್ತೀವಿ ಆತ್ಮಹತ್ಯೆ ಮಾಡಿಕೊಳ್ಳಿ, ಪುಟಗೋಸಿ 5 ಲಕ್ಷಕ್ಕೆ ಯಾರು ಆತ್ಮಹತ್ಯೆ ಮಾಡಿಕೊಳ್ತಾರೆ, ಈಗಲೇ ಸಚಿವರು ಕ್ಷಮೆ ಕೇಳಬೇಕು, ಇಲ್ಲವಾದರೆ ಚಾಮರಾಜನಗರಕ್ಕೆ ಬಂದಾಗ ನಾವೇ 50 ಕೋಟಿ ಕೊಡ್ತಿವಿ, ಅವ್ರು ಆತ್ಮಹತ್ಯೆ ಮಾಡಿಕೊಳ್ಳಲಿ, ಈ ಬಗ್ಗೆ ನಾವು ಅಭಿಯಾನ ಮಾಡ್ತೀವಿ ಎಂದು ಎಚ್ಚರಿಕೆ ಕೊಟ್ಟರು.