ಜನವರಿ 8 ರಂದು ಕರ್ನಾಟಕ ಬಂದ್ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಮುಖಂಡರು ತಿಳಿಸಿದ್ದಾರೆ. ಅಂದು ಭಾರತ್ ಬಂದ್ ಕೂಡ ಆಗಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರಿಂದ ಬಂದ್ ನಡೆಯಲಿದೆ. 

ಶಿವಮೊಗ್ಗ [ಜ.03]: ಜನವರಿ 8 ರಂದು ಗ್ರಾಮೀಣ ಕರ್ನಾಟಕ ಬಂದ್ ಮಾಡಲಾಗುತ್ತಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ಬಂದ್ ನಡೆಸುತ್ತಿವೆ ಎಂದು ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಬಸವರಾಜಪ್ಪ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜಪ್ಪ ಋುಣಮುಕ್ತ ಕಾಯ್ದೆಗೆ ಆಗ್ರಹಿಸಿ, ಡಾ. ಸ್ವಾಮಿನಾಥ್‌ ವರದಿ ಜಾರಿಗಾಗಿ, ರಾಜ್ಯದ ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ, ಬಗರ್‌ಹುಕುಂ ಸಕ್ರಮಕ್ಕಾಗಿ, ಭೂ ಸುಧಾರಣಾ ತಿದ್ದುಪಡಿ ಕೈಬಿಡಲು ಆಗ್ರಹಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬಂದ್ ನಡೆಯಲಿದೆ ಎಂದರು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯಿಂದ ಜನವರಿ 8 ರಂದು ಭಾರತ್‌ ಬಂದ್‌ ಕರೆಯಲಾಗಿದೆ. ಇದರ ಅಡಿಯಲ್ಲಿಯೇ ಗ್ರಾಮೀಣ ಕರ್ನಾಟಕ ಬಂದ್‌ ಕೂಡ ನಡೆಯಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂದು ಹಳ್ಳಿಗಳಲ್ಲಿ ರೈತರು ಸರ್ಕಾರಗಳ ವಿರುದ್ಧ ಧ್ವನಿ ಎತ್ತುತ್ತಾರೆ. ತಮ್ಮ ಹಳ್ಳಿಯಿಂದ ನಗರಕ್ಕೆ ತರಕಾರಿ, ಧಾನ್ಯ, ಹಾಲು ಸೇರಿದಂತೆ ಯಾವುದೇ ಉತ್ಪನ್ನಗಳನ್ನು ಮಾರಾಟವನ್ನು ಹೋಗುವುದಿಲ್ಲ. ಇದು ಗ್ರಾಮೀಣ ರೈತರೇ ಮಾಡುವ ಬಂದ್‌ ಆಗಿದೆ. ಈ ಬಂದ್‌ಗೆ ದೇಶದ ಸುಮಾರು 200 ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡ ಅಖಿಲ ಭಾರತ ರೈತ ಸಂಘರ್ಷ ಸಮಿತಿ ಕರೆ ನೀಡಿದೆ. ಇದರಲ್ಲಿ ರಾಜ್ಯದ ರೈತ ಸಂಘಗಳು ಕೂಡ ಸೇರಿಕೊಂಡಿವೆ.