Asianet Suvarna News Asianet Suvarna News

Irrigation Project: 130 ಕೋಟಿ ಫಂಡ್‌ ಇದ್ರೂ ರೈತರಿಗೆ ಸಿಗದ ಪರಿಹಾರ

*  4 ಜಿಲ್ಲೆಗಳ 82 ಪ್ರಕರಣ 1885 ಎಕರೆ ಪರಿಹಾರ ಬಾಕಿ
*  ಪ್ರಕರಣ ಅಸಿಂಧುಗೊಳ್ಳದಂತೆ ತಡೆಯಲು ಠೇವಣಿ
*  ಭೂಮಿ ಕಳೆದುಕೊಂಡ ರೈತರಿಗೆ 2007-08 ರಿಂದ ಪರಿಹಾರ ವಿತರಣೆ
 

Farmers Not Yet Get Compensation of Irrigation Project at Huvina Hadagali grg
Author
Bengaluru, First Published Dec 26, 2021, 11:34 AM IST

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಡಿ.26): ನೀರಾವರಿ ಯೋಜನೆಗಾಗಿ(Irrigation Project) ಭೂಮಿ ಕಳೆದುಕೊಂಡ ರೈತರಿಗೆ(Farmers) ಪರಿಹಾರ ವಿತರಣೆ ಮಾಡಲು ಸರ್ಕಾರ, ಧಾರವಾಡದ ಕರ್ನಾಟಕ ನೀರಾವರಿ ನಿಗಮದಲ್ಲಿ 130 ಕೋಟಿ ಕಾರ್ಪಸ್‌ ಫಂಡ್‌ (ಮೂಲನಿಧಿ) ಠೇವಣಿ ಮಾಡಿದ್ದರೂ ರೈತರಿಗೆ ಅಲೆದಾಟ ಮಾತ್ರ ತಪ್ಪಿಲ್ಲ. ಉತ್ತರ ಕರ್ನಾಟಕ(North Karnataka) ಭಾಗದ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ(Singatalur Lift Irrigation Scheme) ಪೂರ್ಣಗೊಂಡು ದಶಕ ಕಳೆದಿದೆ. ಆದರೆ, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಇನ್ನೂ ಮರೀಚಿಕೆಯಾಗಿದೆ.

ಏನಿದು ಕಾರ್ಪಸ್‌ ಫಂಡ್‌?

2014ರ ಹೊಸ ವಿಶೇಷ ಭೂಸ್ವಾಧೀನಾ ಕಾಯ್ದೆ(Land Acquisition Act) ಪ್ರಕಾರ ರೈತರ ಭೂಮಿ(Land)  ಸ್ವಾಧೀನಕ್ಕೂ ಮುನ್ನ ಶೇ. 50ರಷ್ಟು ಪರಿಹಾರವನ್ನು(Compensation) ಸರ್ಕಾರ ನಿಗಮದಲ್ಲಿ ಠೇವಣಿ ಇಡಬೇಕಿದೆ. ಒಂದು ವೇಳೆ ಸರ್ಕಾರ ಪರಿಹಾರ ಧನ ಠೇವಣಿ ಇಲ್ಲದಿದ್ದರೆ ಪ್ರಕರಣ ಅಸಿಂಧುವಾಗುತ್ತಿತ್ತು. ಅದಕ್ಕಾಗಿ ಸರ್ಕಾರ ಕರ್ನಾಟಕ(Government of Karnataka) ನೀರಾವರಿ ನಿಗಮ ಧಾರವಾಡ ಕೇಂದ್ರ ಕಚೇರಿಯ ವ್ಯಾಪ್ತಿಗೆ ಒಳ ಪಟ್ಟಿರುವ ಎಲ್ಲ ಯೋಜನೆಗಳಿಗೆ ಸಂಬಂಧ ಪಟ್ಟಂತೆ 130 ಕೋಟಿ ಕಾರ್ಪಸ್‌ ಫಂಡ್‌ (ಮೂಲನಿಧಿ) ಠೇವಣಿ ಮಾಡಿದೆ. ಪರಿಹಾರ ಧನದ ಕಡತಗಳು ವಿಲೇವಾರಿ ಆಗುತ್ತಿದಂತೆಯೇ ಆ ಕಾರ್ಪಸ್‌ ಫಂಡ್‌ನಲ್ಲಿರುವ ಹಣವನ್ನು ರೈತರಿಗೆ ಪರಿಹಾರ ವಿತರಿಸಲು ಅವಕಾಶವಿದೆ.

Singatalur Lift Irrigation Scheme: ಒಂಬತ್ತು ವರ್ಷದಿಂದ 90 ಟಿಎಂಸಿ ನೀರು ಪೋಲು..!

ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನು, ಕಾಲುವೆ ನಿರ್ಮಾಣಕ್ಕೆ ಬಳಕೆಯಾದ ಜಮೀನು, ಕೆರೆ ತುಂಬಿಸುವ ಯೋಜನೆ ನಿರ್ಮಾಣದ ಜಮೀನು ಹಾಗೂ ಯೋಜನೆಯ ವ್ಯಾಪ್ತಿಯಲ್ಲಿ ಮುಳುಗಡೆಯಾದ ವಿಜಯನಗರ(Vijayanagara) ಜಿಲ್ಲೆಯ ಅಲ್ಲಿಪುರ, ಗದಗ(Gadag) ಜಿಲ್ಲೆಯ ಗುಮ್ಮಗೋಳ, ಬಿದರಹಳ್ಳಿ ಮತ್ತು ವಿಠಲಾಪುರ ಗ್ರಾಮಗಳ ಸಂತ್ರಸ್ತರ ಸ್ಥಳಾಂತರಕ್ಕೆ ಜಮೀನು ಸೇರಿದಂತೆ ಒಟ್ಟು 7500 ಎಕರೆ ಜಮೀನು ಭೂಸ್ವಾಧೀನವಾಗಿದೆ. ಇದರಲ್ಲಿ 5300 ಎಕರೆ ಅವಾರ್ಡ್‌ ಆಗಿದ್ದು, ಉಳಿದ 2200 ಎಕರೆಯ ಕತಡಗಳು ವಿಲೇವಾರಿ ಆಗಬೇಕಿದೆ.

ಯೋಜನೆಯ ವ್ಯಾಪ್ತಿಯಲ್ಲಿ ವಿಜಯನಗರ, ಕೊಪ್ಪಳ(Koppal), ಗದಗ ಮತ್ತು ಹಾವೇರಿ(Haveri) 4 ಜಿಲ್ಲೆಗಳಲ್ಲಿ ಅವಾರ್ಡ್‌ ಹಂತದಲ್ಲಿ 14 ಪ್ರಕರಣಗಳ 350 ಎಕರೆ ಜಮೀನು ಸ್ಥಳ ತನಿಖೆ, ಸರ್ವೇ ಸೇರಿದಂತೆ ವಿವಿಧ ಹಂತದಲ್ಲಿದ್ದು, ಬೆಳಗಾವಿ(Belagavi) ವಿಶೇಷ ಜಿಲ್ಲಾ ಕಚೇರಿಯಲ್ಲಿದೆ. 19(1) ರಲ್ಲಿ 6 ಪ್ರಕರಣಗಳ 155 ಎಕರೆ, 15(1) ರಲ್ಲಿ 7 ಪ್ರಕರಣಗಳ 300 ಎಕರೆ ಜಮೀನಿನ ಜಂಟಿ ಕೌಟುಂಬಿಕ ಸಮೀಕ್ಷೆ ಬಾಕಿ ಇದೆ. 15(3) ರಲ್ಲಿ 19 ಪ್ರಕರಣಗಳ 180 ಎಕರೆ ಹಾಗೂ ವಿವಿಧ ಹಂತದ 36 ಪ್ರಕರಣಗಳ 900 ಎಕರೆ ಸೇರಿದಂತೆ, ಒಟ್ಟು 82 ಪರಿಹಾರದ ಪ್ರಕರಣಗಳ 1885 ಎಕರೆಗೆ ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ವಿತರಿಸಬೇಕಿದೆ. ಒಟ್ಟಾರೆ ಇನ್ನು 2200 ಎಕರೆ ಭೂಸ್ವಾಧೀನಾ ಪ್ರಕ್ರಿಯೆಯಲ್ಲಿದ್ದು, ಇದರಲ್ಲಿ 1200 ಎಕರೆ ವಿವಿಧ ಹಂತದಲ್ಲಿವೆ. ಉಳಿದ 1 ಸಾವಿರ ಎಕರೆ ಜಮೀನಿನ ಪ್ರಸ್ತಾವನೆಯು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಚೇರಿಯಿಂದ ಬರಬೇಕಿದೆ.

ಯೋಜನೆಗೆ 2005ರಿಂದ ಆವಾರ್ಡ್‌ ಆಗಿದ್ದು, ಭೂಮಿ ಕಳೆದುಕೊಂಡ ರೈತರಿಗೆ 2007-08 ರಿಂದ ಪರಿಹಾರ ವಿತರಣೆಯಾಗುತ್ತಿದೆ. ಈ ವರೆಗೂ 26 ಐತೀರ್ಪು ಅನುಮೋದನೆಯಾಗಿ ಈ ವರೆಗೂ 2 ಸಾವಿರ ಎಕರೆ ಜಮೀನು ಮತ್ತು 33 ಸಾವಿರ ಚದುರ ಮೀಟರ್‌ ಕಟ್ಟಡಗಳಿಗೆ ಸೂಕ್ತ ಪರಿಹಾರ ವಿತರಣೆಯಾಗಿದೆ.

ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ರೈತರು ಈಗಲೂ ಪರಿಹಾರಕ್ಕಾಗಿ ಅಲೆಯುತ್ತಿದ್ದಾರೆ. 1 ಸಾವಿರ ಎಕರೆಗೂ ಹೆಚ್ಚು ಭೂಮಿ ಸರ್ವೇಯಾಗಬೇಕಿದ್ದು, ಈ ಕಚೇರಿಯಲ್ಲಿ ಸರ್ವೇ ಅಧಿಕಾರಿಗಳೇ ಇಲ್ಲ. ಜತೆಗೆ ಶಿರಸ್ತೆದಾರರು ಸೇರಿದಂತೆ ಬಹುತೇಕ ಸಿಬ್ಬಂದಿ ಕೊರತೆಯಿಂದ ಕಡತ ವಿಲೇವಾರಿಯೇ ದೊಡ್ಡ ಸವಾಲಾಗಿದೆ.

Koppal| ಸಿಂಗಟಾಲೂರು ಹನಿ ನೀರಾವರಿ ಕೈಬಿಟ್ಟ ಸರ್ಕಾರ?

ಈ ಕಾರ್ಪಸ್‌ ಫಂಢ್‌ ಆಧಾರದ ಮೇಲೆ ರೈತರ ಪರಿಹಾರ ಧನ ಕಡತಗಳು ತಕ್ಕ ಮಟ್ಟಿಗೆ ವಿಲೇವಾರಿಯಾಗಿ, ಕಳೆದ 5 ತಿಂಗಳಲ್ಲಿ ಬಲದಂಡೆ ಭಾಗದ ರೈತರಿಗೆ 4.7 ಕೋಟಿ ಪರಿಹಾರ ವಿತರಿಸಿದೆ. ಉಳಿದ ಪ್ರಕರಣಗಳಿಗೆ ಪರಿಹಾರ ವಿತರಣೆಯು ವಿವಿಧ ಹಂತದಲ್ಲಿದೆ.

ಪ್ರತಿ ಬಾರಿ ನಮ್ಮ ಜಮೀನು ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿ ಬೆಳೆ ಹಾನಿ ಅನುಭವಿಸುತ್ತಿದ್ದೇವೆ. ಯೋಜನೆಗೆ ಭೂಸ್ವಾಧೀನ ಆಗಿದ್ದರೂ ಸಿಂಗಟಾಲೂರು ಏತ ನೀರಾವರಿ ಯೋಜನೆ, ಅಧಿಕಾರಿಗಳು ಸರ್ವೇ ಕಾರ್ಯ ಪೂರ್ಣಗೊಳಿಸಿಲ್ಲ, ಅರೆಬರೆ ಮಾಡಿರುವ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಅಲೆದು ಅಲೆದು ಬೇಸತ್ತಿದ್ದೇವೆ ಅಂತ ಹೊಸಹಳ್ಳಿ ರೈತ ಶಿವಾನಂದಯ್ಯ ತಿಳಿಸಿದ್ದಾರೆ. 

4 ಜಿಲ್ಲೆಗಳ ವ್ಯಾಪ್ತಿಯಲ್ಲಿ 82 ಪ್ರಕರಣಗಳ 1885 ಎಕರೆ ಜಮೀನಿಗೆ ಪರಿಹಾರ ಬಾಕಿ ಇದ್ದು, ವಿವಿಧ ಹಂತದಲ್ಲಿವೆ. ಪರಿಹಾರ ಪ್ರಕರಣ ಅಸಿಂಧು ಆಗದಂತೆ ಸರ್ಕಾರ ಕರ್ನಾಟಕ ನೀರಾವರಿ ನಿಗಮ ಧಾರವಾಡ ಕೇಂದ್ರ ಕಚೇರಿಯಲ್ಲಿ . 130 ಕೋಟಿ ಕಾರ್ಪಸ್‌ ಫಂಢ್‌ ಠೇವಣಿಯಾಗಿದೆ. ಇದರಿಂದ 5 ತಿಂಗಳಲ್ಲಿ ಬಲದಂಡೆ ಭಾಗದ ರೈತರಿಗೆ . 4.7 ಕೋಟಿ ಪರಿಹಾರ ವಿತರಿಸಿದ್ದೇವೆ ಅಂತ ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಪರ್ಣಿಕಾ ಪವನ್‌ ರಾಮ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios