ಗೊಬ್ಬರ ವಿತರಣೆ ವೇಳೆ ರೈತರ ನಡುವೆ ವಾಗ್ವಾದ| ನೂಕು ನುಗ್ಗಾಟ, ಘಟನೆ ವೇಳೆ ಒಬ್ಬನಿಗೆ ಗಾಯ| ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದಲ್ಲಿ ನಡೆದ ಘಟನೆ| ಈ ಕುರಿತು ಪೊಲೀಸ್‌ ದೂರು ದಾಖಲಾಗಿಲ್ಲ| 

ನವಲಗುಂದ(ಆ.16): ಯೂರಿಯಾ ಗೊಬ್ಬರಕ್ಕಾಗಿ ನವಲಗುಂದದಲ್ಲಿ ನೂಕು ನುಗ್ಗಾಟ ನಡೆದು ರೈತರು ಪರಸ್ಪರ ಹೊಡೆದಾಡಿಕೊಂಡಿದ್ದು ಒಬ್ಬ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಬಳಿ ಇರುವ ಮಾಲತೇಶ ಅಗ್ರೋ ಸೆಂಟರ್‌ನ ಗೋದಾಮಿನ ಎದುರಿಗೆ ಈ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಗೋದಾಮು ಬಳಿ ಗೊಬ್ಬರ ಪಡೆದುಕೊಳ್ಳುತ್ತಿದ್ದಾಗ ರೈತರ ನಡುವೆ ನೂಕು ನುಗ್ಗಾಟ ನಡೆದಿದೆ. ಈ ವೇಳೆ ಇಬ್ಬರು ರೈತರ ನಡುವೆ ವಾಗ್ವಾದ ನಡೆದಿದ್ದು ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಓರ್ವನಿಗೆ ಗಾಯಗಳಾಗಿವೆ. ಈ ಕುರಿತು ಪೊಲೀಸ್‌ ದೂರು ದಾಖಲಾಗಿಲ್ಲ.

ಧಾರವಾಡ: ಮನೆ, ಬೆಳೆಹಾನಿ ಕುರಿತು ಶೀಘ್ರ ವರದಿ ಸಲ್ಲಿಸಿ, ಜಗದೀಶ್‌ ಶೆಟ್ಟರ್‌

ಇತ್ತೀಚಿಗೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಮುಗಿ ಬೀಳುತ್ತಿದ್ದು, ನೂಕುನುಗ್ಗಲು ಉಂಟಾಗುತ್ತಿದ್ದರೂ ಆಗ್ರೋ ಸಂಸ್ಥೆಯ ಮಾಲಿಕರು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿಯೇ ಇಂತಹ ಘಟನೆ ನಡೆದಿದೆ ಎಂದು ರೈತರು ಆರೋಪಿಸಿದ್ದಾರೆ.

ಕೊಪ್ಪಳ, ಬಳ್ಳಾರಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಯೂರಿಯಾಕ್ಕೆ ರೈತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಪ್ರತಿ ದಿನ ಕಾಣುತ್ತಿದೆ.