ಕುಮಾರಸ್ವಾಮಿ ಬಯಸಿದ ಖಾತೆಗಳೇ ಅವರಿಗೆ ಸಿಕ್ಕಿದೆ
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದ್ದರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಕೆಲ ಬಿನ್ನಾಭಿಪ್ರಾಯ ಆಗಾಗ ಸ್ಫೋಟಗೊಳ್ಳುತ್ತಲೇ ಇದೆ. ಇದೀಗ ಮಾಜಿ ಸಚಿವ ಎ.ಮಂಜು ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು : ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದ್ದರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಕೆಲ ಬಿನ್ನಾಭಿಪ್ರಾಯ ಆಗಾಗ ಸ್ಫೋಟಗೊಳ್ಳುತ್ತಲೇ ಇದೆ.
ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಕ್ಕೆ ಮಾಜಿ ಸಚಿವ ಎ.ಮಂಜು ಟಾಂಗ್ ನೀಡಿದ್ದಾರೆ. ಕುಮಾರಸ್ವಾಮಿ ಅವರು ಹೇಳಿರುವಂತೆ ನಾವು ಅವರಿಗೆ ವಿಷವನ್ನು ಕೊಟ್ಟಿಲ್ಲ. ಅವರು ಕೇಳಿದ ಪ್ರಮುಖ ಖಾತೆಗಳನ್ನೇ ನೀಡಿದ್ದೇವೆ ಎಂದು ಮೈಸೂರಿನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು, ಶಾಸಕರು ತಪ್ಪು ಮಾಡಿರೋ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿರುವುದು ಸರಿಯಲ್ಲ. ಅವರ ಇತ್ತೀಚಿನ ಹೇಳಿಕೆಗಳಿಂದಾಗಿ ಹೆಚ್ಚು ನೋವಾಗಿದೆ. ಓರ್ವ ಕಾಂಗ್ರೆಸ್ಸಿಗನಾಗಿ ನನಗೆ ನೋವಾಗಿದೆ ಎಂದು ಮಂಜು ತಮ್ಮ ಅಸಮಾಧಾನದ ಮಾತುಗಳನ್ನಾಡಿದ್ದಾರೆ.
ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿರುವುದಕ್ಕೆ ನಿಮಗೆ (ಕಾರ್ಯಕರ್ತರಿಗೆ) ಸಂತೋಷ ವಾಗಿದೆ. ಆದರೆ, ನಾನು ಸಂತೋಷದಲ್ಲಿಲ್ಲ. ನೋವಿನ ವಿಷ ನುಂಗಿ ನಾನು ವಿಷಕಂಠನಾಗಿದ್ದು, ನಿಮಗೆ ಅಮೃತ ನೀಡುವ ಪ್ರಯತ್ನ ಪಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೋವಿನಿಂದ ಮಾತನಾಡಿದ್ದರು.