* ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ನಡೆದ ಘಟನೆ* ಸೂಕ್ತ ಬೆಲೆ ಬೆಲೆ ಸಿಗದೇ ಕಂಗಾಲಾದ ಅನ್ನದಾತ* ತೋಟಗಾರಿಕೆ ಬೆಳೆ ಬೆಳೆದು ರೈತ ಅನುಭವಿಸಿದ ಬವಣೆ ಅಷ್ಟಿಷ್ಟಲ್ಲ 

ದೇವರಹಿಪ್ಪರಗಿ(ಜೂ.10):ಕೊರೋನಾದಿಂದ ಬಾಳೆ ಬೆಳೆಗೆ ಸೂಕ್ತ ಮಾರುಕಟ್ಟೆಹಾಗೂ ಬೆಲೆ ಸಿಗದೇ ಇರುವ ಕಾರಣಕ್ಕೆ ಮನನೊಂದು ರೈತನೊಬ್ಬ ತನ್ನ ತೋಟದಲ್ಲಿ ಬೆಳೆದಿದ್ದ 1200 ಬಾಳೆ ಗಿಡಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಪಟ್ಟಣದ ರೈತ ಉಸ್ಮಾನಸಾಬ್‌ ಹಚ್ಯಾಳ ಎಂಬ ರೈತರ ಮೂರು ವರ್ಷಗಳಿಂದ ಈ ಬಾಳೆಗಿಡಗಳನ್ನು ಜೋಪಾನ ಮಾಡಿ ಬೆಳೆಸಿದ್ದ. ಹೀಗೆ ಬೆಳೆಸಿದ ಗಿಡಗಳು ಒಳ್ಳೆಯ ಫಸಲನ್ನು ನೀಡಿದ್ದವು. ಇದೇ ಖುಷಿಯಲ್ಲಿದ್ದ ರೈತ ಉಸ್ಮಾನಸಾಬ್‌ ಅವರಿಗೆ ಏಕಾಏಕಿ ಕೊರೋನಾ ಭಾರಿ ಹೊಡೆತ ನೀಡಿತು. ಬಾಳೆ ಕೊಯ್ದು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು ಎಂಬ ಹೊತ್ತಿನಲ್ಲಿ ಕೊರೋನಾ ವ್ಯಾಪಕವಾಗಿ ಹರಡಿತು. ಇದರಿಂದ ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಣೆಯಾಯಿತು. ಈ ವೇಳೆ ಉಸ್ಮಾನಸಾಬ್‌ ಅವರು ಬಾಳೆಹಣ್ಣು ಕೊಯ್ದುಕೊಂಡು ಮಾರುಕಟ್ಟೆಗೆ ಹೋದರೆ, ಸೂಕ್ತ ಮಾರುಕಟ್ಟೆ, ಬೆಲೆ ಸಿಗದೇ ಕಂಗಾಲಾದರು.

'45 ವರ್ಷ ಮೇಲ್ಪಟ್ಟವರಿಗೆ ವಾರದಲ್ಲಿ ಲಸಿಕೆ ಹಾಕಿ'

ಹಾಕಿದ ಬಂಡವಾಳಕ್ಕೆ ಸರಿಯಾಗಿ ಬರಲಿಲ್ಲ. ಇದರಿಂದ ಮನನೊಂದ ರೈತ ಉಸ್ಮಾನಸಾಬ್‌ ಅವರು ಖರ್ಚು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಬೆಲೆಯಿಲ್ಲ. ಗಿಡದಲ್ಲೇ ಬಿಟ್ಟರೇ ಎಲ್ಲವೂ ಹಾಳು ಎಂದು ತಿಳಿದು ಆ ಬಾಳೆಹಣ್ಣುಗಳನ್ನು ಉಚಿತವಾಗಿ ಊರ ಜನರಿಗೆ ಹಂಚಿದರು. ಅಷ್ಟೇ ಅಲ್ಲದೆ, ನೊಂದಿದ್ದ ಅವರು ತಮ್ಮ ಹೊಲದಲ್ಲಿ ಇದ್ದ 1200 ಬಾಳೆ ಗಿಡಗಳಿಗೆ ಬೆಂಕಿ ಹಚ್ಚಿ ಅವುಗಳನ್ನು ಜೆಸಿಬಿಯಿಂದ ನೆಲೆಸಮಗೊಳಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಹಚ್ಯಾಳ ತನ್ನ 6 ಎಕರೆ 25 ಗುಂಟೆ ಜಮೀನಿನಲ್ಲಿ 2 ಎಕರೆ ಬಾಳೆ, 4 ಎಕರೆ ಉಳ್ಳಾಗಡ್ಡಿ ಹಾಗೂ ಪೇರಲ್‌ ಹಣ್ಣು ಹೀಗೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತ ಅನುಭವಿಸಿದ ಬವಣೆ ಅಷ್ಟಿಷ್ಟಲ್ಲ. ಈಗಲಾದರೂ ಸರ್ಕಾರ ರೈತರ ನೆರವಿಗೆ ಧಾವಿಸಬೇಕಾಗಿದೆ ಎಂದು ಪಟ್ಟಣದ ಯುವ ಮುಖಂಡ ಸುಭಾಷ ತಾಂಬೆ ಆಗ್ರಹಿಸಿದ್ದಾರೆ.

ನಮ್ಮ ತೋಟದಲ್ಲಿ ಬೆಳೆಯುತ್ತಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ನಮ್ಮ ತೋಟದಲ್ಲಿ ಬೆಳೆದ ಈರುಳ್ಳಿ ಬೆಳೆಗಳು ಸಮೀಕ್ಷೆಯಲ್ಲಿರುವ ಶೇಂಗಾ ಬೆಳೆಗಳು ಅಂತಿದೆ. ಇದಕ್ಕೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದು ಕಾರಣ ಎಂದು ನೊಂದ ರೈತನ ಮಗ ಯಾಸಿನ್‌ ಉಸ್ಮಾನಸಾಬ್‌ ಹಚ್ಯಾಳ ತಿಳಿಸಿದ್ದಾರೆ. 

ರೈತರು ದುಡುಕಿನ ನಿರ್ಧಾರ ತೆಗೆದುಕೊಳ್ಳದೆ ಇಲಾಖೆಗೆ ತಿಳಿಸಿದ್ದರೆ ಗ್ರೀನ್‌ಪಾಸ್‌ದಿಂದ ಹಾಗೂ ಸರ್ಕಾರದಿಂದ ಸಹಾಯ ಆಗುತ್ತಿತ್ತು. ಬೆಳೆ ಸಮೀಕ್ಷೆಯ ಲಿಸ್ಟ್‌ ಪ್ರಕಾರ ಸಹಾಯಧನ ವಿತರಿಸಲು ಅವಕಾಶವಿದೆ. ಸರ್ಕಾರದ ಮಾರ್ಗಸೂಚಿಯಂತೆ ಸಿಂದಗಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹೂ ತರಕಾರಿ ಹಾಗೂ ಹಣ್ಣು ಬೆಳೆದ ರೈತರಿಗೆ ವಿತರಿಸಲಾಗುತ್ತಿದೆ ಎಂದು ಸಿಂದಗಿ ತೋಟಗಾರಿಕೆ ಇಲಾಖೆ (ತಾಂತ್ರಿಕ ವಿಭಾಗ) ಅಧಿಕಾರಿ ರಾಘವೇಂದ್ರ ಬಗಲಿ ತಿಳಿಸಿದ್ದಾರೆ.