ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಗೆ ನಕಲಿ ಅಭ್ಯರ್ಥಿ : ಸಂಬಂಧಿಗಳ ಕಳಿಸಿ ಸಿಕ್ಕಿಬಿದ್ದರು
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ತಮ್ಮ ಬದಲಿಗೆ ನಕಲಿ ಅಭ್ಯರ್ಥಿಗಳನ್ನು ಕಳಿಸಿ ದೈಹಿಕ ಪರೀಕ್ಷೆ ಮಾಡಿಸಿದ್ದ ಅಭ್ಯರ್ಥಿಗಳು ಈಗ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು (ಮಾ.23): ಕೆಎಸ್ಆರ್ಪಿ ಕಾನ್ಸ್ಟೇಬಲ್ಗಳ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಮೂಲ ಅಭ್ಯರ್ಥಿಗಳ ಬದಲಾಗಿ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆಗ್ನೇಯ ವಿಭಾಗದ ಪೊಲೀಸರು ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಜಗದೀಶ್ ದೊಡ್ಡಗೌಡರ್(24), ರಾಮಚಂದ್ರ ಚಿಗಡ್ಡನವರ್(26) ಮತ್ತು ಲಕ್ಷ್ಮಣ್(24) ಮತ್ತು ರಾಯಭಾಗದ ಮಲ್ಲಯ್ಯ ಪೂಜಾರಿ(25) ಹಾಗೂ ನಾಗಪ್ಪ ಫಕೀರಪ್ಪ ಗೊಲ್ಲ (26), ಮಲ್ಲಿಕಾರ್ಜುನ್ ಡೋನಿ(26) ಬಂಧಿತರು. ತಲೆಮರೆಸಿಕೊಂಡಿರುವ ಪ್ರಕಾಶ್ ಆಡಿನ್, ಸೈಯದ್ ಚಿಮ್ಮಡ್ ಎಂಬುವವರ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆ ಮತ್ತು ಮಡಿವಾಳ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯಪುರದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು: ಕಾರಣ..? ..
230 (ಸ್ಥಳೀಯೇತರ) ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ ವರ್ಷ ಅಧಿಸೂಚನೆ ಹೊರಡಿಸಲಾಗಿತ್ತು. ಈ ಸಂಬಂಧ ಜನವರಿಯಲ್ಲಿ ದೈಹಿಕ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಆರೋಪಿ ಜಗದೀಶ್ ದೊಡ್ಡಗೌಡರ್ ತನ್ನ ಬದಲಿಗೆ ಪ್ರಕಾಶ್ ಆಡಿನ್, ಮಲ್ಲಯ್ಯ ಪೂಜಾರಿ ಬದಲಿಗೆ ಅಪರಿಚಿತ ವ್ಯಕ್ತಿ ಮತ್ತು ನಾಗಪ್ಪ ಫಕೀರಪ್ಪ ಬದಲಿಗೆ ಮಲ್ಲಿಕಾರ್ಜುನ್ ಡೋನಿ ಎಂಬವರು ದೈಹಿಕ ಪರೀಕ್ಷೆಗೆ ಹಾಜರಾಗಿದ್ದು, ಮೂವರು ಉತ್ತಮ ಅಂಕ ಪಡೆದು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅದನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು.
ವೈದ್ಯಕೀಯ ಪರೀಕ್ಷೆ ವೇಳೆ ಬೆಳಕಿಗೆ:
ಉತ್ತೀರ್ಣಗೊಂಡ ಮೂವರು ಅಭ್ಯರ್ಥಿಗಳಿಗೆ ಮಾ.8ರಿಂದ 23ರವರೆಗೆ ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ದೈಹಿಕ ಪರೀಕ್ಷೆ ಚಿತ್ರೀಕರಿಸಿಕೊಂಡಿದ್ದ ವಿಡಿಯೋ ಮುಂದಿಟ್ಟುಕೊಂಡು ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಮಧ್ಯೆ ಜಗದೀಶ್ ದೊಡ್ಡಗೌಡರ್ ಮತ್ತು ಮಲ್ಲಯ್ಯ ಪೂಜಾರಿ ದಾಖಲಾತಿ ಪರಿಶೀಲನೆ ವೇಳೆ ಈ ಹಿಂದೆ ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳ ಮುಖ ಚಹರೆಗೂ ಜನವರಿಯಲ್ಲಿ ನಡೆದ ದೈಹಿಕ ಪರಿಕ್ಷೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳ ಮುಖಚಹರೆಗೂ ವ್ಯತ್ಯಾಸ ಕಂಡು ಬಂದಿದೆ.
ಕೂಡಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ.
ಸೋದರ ಸಂಬಂಧಿ ಕಳುಹಿಸಿ ಸಿಕ್ಕಿ ಬಿದ್ದ
ಮತ್ತೊಂದು ಪ್ರಕರಣದಲ್ಲಿ ನಾಗಪ್ಪ ಎಸ್ ಫಕೀರಪ್ಪ ಗೊಲ್ಲ ಮತ್ತು ಮಲ್ಲಿಕಾರ್ಜುನ್ ಡೋನಿ ಎಂಬವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕಾರ್ಜುನ ಡೋನಿ, ನಾಗಪ್ಪನ ಫಕೀರಪ್ಪನ ಸೋದರ ಸಂಬಂಧಿಯಾಗಿದ್ದಾನೆ, ಈ ಹಿಂದೆ ನಾಲ್ಕೈದು ಬಾರಿ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಸಂಬಂಧಿ ಮಲ್ಲಿಕಾರ್ಜನ್ ಡೋನಿಯನ್ನು ಕಳುಹಿಸಿ ಸಿಕ್ಕಿ ಬಿದ್ದಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.