Asianet Suvarna News Asianet Suvarna News

ಮನೆ ಕಟ್ಟಲು ಪರವಾನಿಗೆ ನೀಡದ ಎಂಜಿನಿಯರ್: ಬೇಸತ್ತ ಮಾಜಿ ಯೋಧ ಮಾಡಿದ್ದೇನು?

ಮನೆ ಕಟ್ಟಲು ಪರವಾನಗಿ ನೀಡದ್ದಕ್ಕೆ ಶಿಕ್ಷಕ, ಮಾಜಿ ಯೋಧನಿಂದ ಕೃತ್ಯ| ಪೌರ ಕಾರ್ಮಿಕರ ಪ್ರತಿಭಟನೆ | ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು| 

EX Soldier Assault on Municipal Engineer in Lakshmeshwara in Gadag District
Author
Bengaluru, First Published Mar 13, 2020, 8:26 AM IST

ಲಕ್ಷ್ಮೇಶ್ವರ(ಮಾ.13): ಮನೆ ಕಟ್ಟಲು ಪರವಾನಿಗೆ ನೀಡಲು ಸತಾಯಿಸುತ್ತಿದ್ದಾರೆಂದು ಆರೋಪಿಸಿ ಪುರಸಭೆಯ ಎಂಜಿನೀಯರ್ ಅವರನ್ನು ಕಾರಿನಲ್ಲಿ ಅಪಹರಿಸಿ, ಥಳಿಸಿ ಬಳಿಕ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಬಳಿ ಬಿಟ್ಟು ಹೋದ ಘಟನೆ ನಡೆದಿದೆ. 

ಪುರಸಭೆಯ ಎಂಜಿನಿಯರ್ ಶಿವನಗೌಡ ಮರಿಗೌಡರ ಥಳಿತಕ್ಕೊಳಗಾದವರು. ಶಿಕ್ಷಕ ಎಸ್.ಬಿ. ಅಣ್ಣಿಗೇರಿ ಹಾಗೂ ಮಾಜಿ ಯೋಧ ಐ.ಬಿ.ಅಣ್ಣಿಗೇರಿ ಎಂಬುವವರು ಥಳಿಸಿದ್ದಾರೆ ಎಂದು ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆಯ ವಿವರ: 

ಪಟ್ಟಣದ ಕೆಂಪಿಗೇರಿ ಕೆರೆಯ ಹತ್ತಿರ ಮಾಜಿ ಯೋಧ ಐ.ಬಿ.ಅಣ್ಣಿಗೇರಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕ ಎಸ್.ಬಿ. ಅಣ್ಣಿಗೇರಿ ಎಂಬುವವರು ಮನೆ ಕಟ್ಟಲು ಆರಂಭಿಸಿದ್ದು, ಮನೆ ಕಟ್ಟಲು ಪುರಸಭೆಯ ಪರವಾನಿಗೆ ಪಡೆಯಲು ಕಳೆದ 3-4 ತಿಂಗಳ ಅಲೆದಾಡಿದ್ದರೂ ಪುರಸಭೆಯ ಎಂಜಿನಿಯರ್ ಎಸ್.ಬಿ. ಮರಿಗೌಡರ ಮನೆ ಪರವಾನಿಗೆ ನೀಡಿರಲಿಲ್ಲ ಮತ್ತು ಕಟ್ಟಡ ಪರವಾನಿಗೆ ನೀಡಲು ಬರುವುದಿಲ್ಲ ಎಂದು ಹೇಳಿದ್ದರಂತೆ. ಪಟ್ಟಣದಲ್ಲಿ ಮನೆ ಕಟ್ಟಲು ಹಲವರಿಗೆ ಪರವಾನಿಗೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಮಗೆ ವಿನಾಕಾರಣ ಸತಾಯಿಸುತ್ತಿರುವುದನ್ನು ಕಂಡು ರೋಸಿ ಹೋಗಿ ಗುರುವಾರ ಮದ್ಯಾಹ್ನ ಎಂಜಿನಿಯರ್ ಊಟ ಮುಗಿಸಿ ಕಚೇರಿಗೆ ಮರಳುತ್ತಿರುವ ವೇಳೆಯಲ್ಲಿ ಶಿವನಗೌಡ ಮರಿಗೌಡರ ಅವರೊಂದಿಗೆ ಐ.ಬಿ.ಅಣ್ಣಿಗೇರಿ ಹಾಗೂ ಎಸ್.ಬಿ. ಅಣ್ಣಿಗೇರಿ ಅವರುಗಳು ಮಾತಿಗೆ ಮಾತು ಬೆಳೆಸಿ ಥಳಿಸಿ ಓಮ್ನಿ ಕಾರಿನಲ್ಲಿ ಹಾಕಿಕೊಂಡು ಹೋಗಿ ಶಿಗ್ಗಾಂವಿ ಸಮೀಪ ಬಿಟ್ಟು ಹೋಗಿದ್ದಾರೆ ಎಂದು ದೂರಲಾಗಿದೆ. 
ಈ ವಿಷಯವನ್ನು ಮುಖ್ಯಾಧಿಕಾರಿ ಎಂ.ಆರ್. ಪಾಟೀಲ ಹಾಗೂ ನಗರ ಯೋಜನಾ ನಿರ್ದೇಶಕ ರುದ್ರೇಶ.ಪಿ ಅವರಿಗೆ ಎಂಜಿನಿಯರ್ ಜೊತೆಯ ಲ್ಲಿದ್ದವರು ಪೋನ್ ಮೂಲಕ ತಿಳಿಸಿ ದ್ದಾರೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಿಗ್ಗಾಂವಿ ಸಮೀಪ ಎಸ್.ಬಿ. ಮರಿಗೌಡರನ್ನು ಬಿಟ್ಟಿರುವ ವಿಷಯ ತಿಳಿದ ಪೊಲೀಸರು ಅವರನ್ನು ಪುರಸಭೆಗೆ ವಾಪಸ್ ಕರೆತಂದು, ಅವರಿಂದ ದೂರು ದಾಖಲು ಪಡೆದಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ಪೌರ ಕಾರ್ಮಿಕರ ಪ್ರತಿಭಟನೆ: 

ಎಂಜಿನಿಯರ್ ಮೇಲೆ ಹಲ್ಲೆ ನಡೆದಿರುವ ವಿಷಯ ತಿಳಿದ ಗದಗ ಜಿಲ್ಲೆಯ ವಿವಿಧ ಪುರಸಭೆ ಮತ್ತು ಪಟ್ಟಣ ಪಂಚಾಯತಿಯ ಪೌರ ಕಾರ್ಮಿಕರು ಪಟ್ಟಣದ ಪುರಸಭೆಯ ಎದುರು ಜಮಾಯಿಸಿ ಹಲ್ಲೆ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಘೋಷಣೆ ಕೂಗುತ್ತ ಹೊಸ ಬಸ್ ನಿಲ್ದಾಣ ಹಾಗೂ ಶಿಗ್ಲಿ ಕ್ರಾಸ್ ಮೂಲಕ ಪೊಲೀಸ್ ಠಾಣೆಯವರೆಗೆ ಹಲಿಗೆ ಬಾರಿಸುತ್ತ ಮೆರವಣಿಗೆ ಸಾಗಿ ಪ್ರತಿಭಟನೆ ನಡೆಸಿದರು. ಪುರಸಭೆ ಸದಸ್ಯರು, ಗಣ್ಯರು ಮತ್ತು ಜಿಲ್ಲೆಯ ಪೌರ ಕಾರ್ಮಿಕ ಸಿಬ್ಬಂದಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

Follow Us:
Download App:
  • android
  • ios