ಭಾನುವಾರ ಸಂಜೆ ಮನೆ ಬಿಟ್ಟಿದ್ದ ಚಂದ್ರು, ನ್ಯಾಮತಿ-ಶಿವಮೊಗ್ಗ ರಸ್ತೆಯಲ್ಲಿ ಕಾರು ಸಾಗುವ ದೃಶ್ಯ ಸೆರೆ, ಹೊನ್ನಾಳಿಯಲ್ಲಿ ಮೊಬೈಲ್‌ ಸ್ವಿಚ್‌ ಆಫ್‌ 

ಹೊನ್ನಾಳಿ(ನ.03):  ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ, ಗುತ್ತಿಗೆದಾರ ಎಂ.ಪಿ.ರಮೇಶ್‌ರ ಪುತ್ರ ಎಂ.ಆರ್‌.ಚಂದ್ರಶೇಖರ (ಚಂದ್ರು) ನಾಪತ್ತೆಯಾಗಿ 4ನೇ ದಿನಕ್ಕೆ ಕಾಲಿಡುತ್ತಿದ್ದು, ಇನ್ನೂ ಅವರ ಸುಳಿವು ಸಿಕ್ಕಿಲ್ಲ. ಅವರ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಜೊತೆಗೆ, ರೇಣುಕಾಚಾರ್ಯ ಕುಟುಂಬದವರು, ಅಭಿಮಾನಿಗಳು ಕೂಡ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ರೇಣುಕಾಚಾರ್ಯಗೆ ಕರೆ ಮಾಡಿ, ಧೈರ್ಯ ತುಂಬಿದ್ದಾರೆ. 

ಭಾನುವಾರ ಸಂಜೆ ಗೌರಿಗದ್ದೆಗೆ ಹೋಗಿ ಬರುವುದಾಗಿ ಹೇಳಿ ಬಿಳಿ ಬಣ್ಣದ ಕ್ರೆಟಾ ಕಾರಿನಲ್ಲಿ ಅವರು ತೆರಳಿದ್ದಾರೆ. ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನ್ಯಾಮತಿ-ಶಿವಮೊಗ್ಗ ರಸ್ತೆಯಲ್ಲಿ ಅವರ ಕಾರು ಸಾಗುವ ದೃಶ್ಯ ಪೊಲೀಸರಿಗೆ ಲಭ್ಯವಾಗಿದೆ. ನಂತರ ಕಾರಿನ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಅವರ ಮೊಬೈಲ್‌ ಸೋಮವಾರ ಬೆಳಗ್ಗೆ 6.48ರ ವೇಳೆಗೆ ಹೊನ್ನಾಳಿಯಲ್ಲಿ ಸ್ವಿಚ್‌ ಆಫ್‌ ಆಗಿದೆ.

ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ: ಭಾವುಕರಾಗಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಶಾಸಕ

ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಅವರು ರೇಣುಕಾಚಾರ್ಯ ಅವರ ಮನೆಗೆ ತೆರಳಿ, ಸುಮಾರು 2 ಗಂಟೆಗಳ ಕಾಲ ಕುಟುಂಬಸ್ಥರ ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಿದರು. ಜೊತೆಗೆ, ಸಚಿವರು, ಶಾಸಕರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಸ್ನೇಹಿತರು, ಬಂಧುಗಳು, ಅಭಿಮಾನಿಗಳು ಮನೆಗೆ ತೆರಳಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.