ಕರ್ನಾಟಕ ಸರ್ಕಾರದ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ಪರಿಣಾಮ ತುಮಕೂರು ಜಿಲ್ಲಾ ನ್ಯಾಯಾಲಯದ ಮೇಲೆಯೂ ಬೀರಿದ್ದು, ಮೊಬೈಲ್‌ ಟಾರ್ಚ್‌ ಹಿಡಿದು ಕಲಾಪ ನಡೆಸಲಾಗಿದೆ.

ತುಮಕೂರು (ಅ.11): ಕರ್ನಾಟಕ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಆವರಿಸಿದ್ದು, ಮಲೆಗಾಲದಲ್ಲಿಯೇ ಲೋಡ್‌ ಶೆಡ್ಡಿಂಗ್‌ ಆರಂಭವಾಗಿದೆ. ಇದರ ಪರಿಣಾಮ ತುಮಕೂರಿನಲ್ಲಿ ನಡೆಯುತ್ತಿದ್ದ ಕೋರ್ಟ್‌ ಕಲಾಪದ ಮೇಲೆಯೂ ತಟ್ಟಿದೆ. ಇದರಿಂದ ಮೊಬೈಲ್‌ ಟಾರ್ಚ್‌ ಹಿಡಿದುಕೊಂಡೇ ಕೋರ್ಟ್‌ ಕಲಾಪವನ್ನು ನಡೆಸಿದ ಪ್ರಸಂಗ ತುಮಕೂರಿನ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ನಡೆದಿದೆ.

ಹೌದು, ರಾಜ್ಯದಲ್ಲಿ ಈಗಾಗಲೇ ಬರಗಾಲ ಕಂಡುಬಂದಿದ್ದು, ಸರ್ಕಾರದಿಂದ ರೈತರಿಗೆ ವಿದ್ಯುತ್‌ ಶಾಕ್‌ ನೀಡಲಾಗಿದೆ. ಈ ವಿದ್ಯುತ್ ಲೋಡ್ ಶೆಡ್ಡಿಂಗ್ ಪರಿಣಾಮ ಕೋರ್ಟ್ ಕಲಾಪಕ್ಕೂ ತಟ್ಟಿದೆ. ವಿದ್ಯುತ್ ಕೈಕೊಟ್ಟ ಹಿನ್ನೆಲೆಯಲ್ಲಿ ಮೊಬೈಲ್ ಟಾರ್ಚ್ ನಲ್ಲೇ ತುಮಕೂರು ಉಪ ವಿಭಾಗಾಧಿಕಾರಿ (ಎಸಿ) ಕೋರ್ಟ್ ಕಲಾಪ‌ ನಡೆಸಿದ್ದಾರೆ. ಕಚೇರಿ ಕೆಲಸದ ವೇಳೆ ವಿದ್ಯುತ್ ಲೋಡ್ ಶೆಡ್ಡಿಂಗ್ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ, ಮೊಬೈಲ್ ಟಾರ್ಚ್ ಹಿಡಿದು ಕೋರ್ಟ್ ಕಲಾಪ ನಡೆಸಿದರು.

ಕಾಂಗ್ರೆಸ್‌ ಸರ್ಕಾರದ 'ಕತ್ತಲೆಭಾಗ್ಯ ಗ್ಯಾರಂಟಿ ನಂಬರ್ ಆರು' ಘೋಷಣೆ ಮಾಡಿದ ಎಚ್.ಡಿ. ಕುಮಾರಸ್ವಾಮಿ!

ತುಮಕೂರು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಲಯದ ಸಂಕೀರ್ಣದಲ್ಲಿ, ಬಾಕಿ ಇದ್ದ ಪ್ರಕರಣಗಳ ಕಲಾಪ ನಡೆಸುತ್ತಿದ್ದ ತುಮಕೂರು ಎಸಿ ಗೌರವಕುಮಾರ್ ಶೆಟ್ಟಿ ಅವರಿಗೆ, ಬೆಸ್ಕಾಂ ವಿದ್ಯುತ್ ಲೋಡ್ ಶೆಡ್ಡಿಂಗ್ ಬಿಸಿ ತಟ್ಟಿದೆ. ಪರ್ಯಾಯ ವ್ಯವಸ್ಥೆ ಇಲ್ಲದೇ ಮೊಬೈಲ್ ಟಾರ್ಚ್ ಬಳಸಿ ವಕೀಲರ ಹಾಗೂ ಸಾರ್ವಜನಿಕರ ಅಹವಾಲು ನಡೆಸಲಾಯಿತು. ಸಾರ್ವಜನಿಕ ವಲಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಾರ್ಯ ವೈಖರಿ ಬಗ್ಗೆ ಅಪಸ್ವರ ಕೇಳಿಬಂದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಹೀಗಾದರೇ ಜನಸಾಮಾನ್ಯರ ಪಾಡೇನು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮೊಬೈಲ್‌ ಟಾರ್ಚ್‌ನಲ್ಲಿಯೇ ಸಭೆ ನಡೆಸಿದ ಶಾಸಕ: ಮತ್ತೊಂದೆಡೆ ಕಾಂಗ್ರೆಸ್ ಶಾಸಕರ ಸಭೆಯಲ್ಲಿಯೂ ವಿದ್ಯುತ್‌ ಕೈ ಕೊಟ್ಟಿದೆ. ಕುಣಿಗಲ್ ಪುರಸಭೆಯಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ನಡೆಸುತ್ತಿದ್ದ ಸಭೆಯಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ. ಈ ವೇಲೆ ಶಾಸಕ ರಂಗನಾಥ್‌ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಸಭೆ ನಡೆಸಿದರು. ಕಾಂಗ್ರೆಸ್ ಶಾಸಕರ ಸಭೆಗೂ ಅಘೋಷಿತ ಲೋಡ್ ಶೆಡ್ಡಿಂಗ್ ಬಿಸಿ ತಟ್ಟಿದೆ. ಕುಣಿಗಲ್ ಪುರ ಸಭೆಯಲ್ಲಿ ವಿದ್ಯುತ್ ‌ಗೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ, ಮೊಬೈಲ್ ಟಾರ್ಚ್ ಆನ್ ಮಾಡಿದ ಪುರಸಭೆ ಸಿಬ್ಬಂದಿ. ವಿದ್ಯುತ್ ವ್ಯತ್ಯಯದಿಂದ ಮೊಬೈಲ್ ಬೆಳಕಲ್ಲೇ ಸಭೆ ನಡೆಸಿದ ಶಾಸಕ.