ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಹೆಚ್ಚಿನ ಜನ ಸೇರುವ ಹಿನ್ನೆಲೆ, 1300 ಪೊಲೀಸರ ನಿಯೋಜನೆ, 150 ಕ್ಯಾಮೆರಾ ಅಳವಡಿಕೆ, ಸರ್ಕಾರದ ಮಾರ್ಗಸೂಚಿ ಪಾಲನೆಗೆ ಸೂಚನೆ, ಪ್ರತಿಯೊಬ್ಬರು ಮಾಸ್ಕ್‌ ಧರಿಸುವುದು ಕಡ್ಡಾಯ. 

ಬೆಂಗಳೂರು(ಡಿ.29): ಹೊಸ ವರ್ಷಾಚರಣೆಗೆ ಹೆಚ್ಚಿನ ಜನ ಸೇರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಿಗೆ ಡಿ.31ರಂದು ಶನಿವಾರ ರಾತ್ರಿ ಭದ್ರತೆಗೆ 2 ಸಾವಿರ ಪೊಲೀಸರ ನಿಯೋಜನೆ ಮಾತ್ರವಲ್ಲದೆ 150 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಖಾಕಿ ಪಡೆ ನಿಗಾವಹಿಸಲಿದೆ. ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಿಗೆ ಬುಧವಾರ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ, ಹೊಸ ವರ್ಷದ ಸಂಭ್ರಮದ ವೇಳೆ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಸ್‌್ತ ಕಲ್ಪಿಸಲಾಗುತ್ತದೆ ಎಂದರು.

ನಗರದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ಹೆಚ್ಚಿನ ಜನರು ಸೇರಲಿದ್ದಾರೆ. ಕೊರೋನಾ ಸೋಂಕು ಕಾರಣಕ್ಕೆ ಎರಡು ವರ್ಷಗಳಿಂದ ಇಲ್ಲಿ ಸಾರ್ವಜನಿಕವಾಗಿ ವರ್ಷಾಚರಣೆಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈ ಬಾರಿ ಆಚರಣೆಗೆ ಅವಕಾಶ ಕೊಟ್ಟಿರುವ ಕಾರಣ ಹೆಚ್ಚಿನ ಜನರು ಸೇರಬಹುದು ಎಂದು ತಿಳಿಸಿದರು.

Bengaluru: ಹೊಸ ವರ್ಷಕ್ಕೆ ಉಗ್ರರ ಕರಿನೆರಳು: ರಾಜಧಾನಿಯಲ್ಲಿ ಪೊಲೀಸರ ಕಟ್ಟೆಚ್ಚರ

ಸಂಭ್ರಮಾಚರಣೆಗೆ ಆಗಮಿಸುವ ಜನರು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕಿದೆ. ಪ್ರತಿಯೊಬ್ಬರು ಮಾಸ್‌್ಕ ಧರಿಸಬೇಕು. ಡಿ.31ರಂದು ಸಂಜೆ ಎಂ.ಜಿ.ರಸ್ತೆಯ ಎರಡು ಬದಿಗಳಲ್ಲಿ ಮೆಟಲ್‌ ಡಿಟೆಕ್ಟರ್‌ಗಳನ್ನು ಹಾಕಿ ಎಂ.ಜಿ.ರಸ್ತೆಗೆ ಬರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಅಂದು ಆ ಎರಡು ರಸ್ತೆಗಳಲ್ಲಿ ವಾಹನವನ್ನು ಸಂಚಾರ ನಿರ್ಬಂಧಿಸಲಾಗುತ್ತದೆ. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಜೊತೆ ಡ್ರೋನ್‌ ಕ್ಯಾಮರಾ ಮೂಲಕ ಕೂಡಾ ಕಣ್ಗಾವಲಿರಲಿದೆ ಎಂದು ಆಯುಕ್ತರು ವಿವರಿಸಿದರು.

ಈ ವೇಳೆ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸಂದೀಪ್‌ ಪಾಟೀಲ್‌ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‌ಗೌಡ ಉಪಸ್ಥಿತರಿದ್ದರು.

ಬಾಂಬ್‌ ನಿಷ್ಟ್ರೀಯ ದಳ

ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಿಗೆ ಶನಿವಾರ ರಾತ್ರಿ ಸಾವಿರಾರು ಜನರು ಜಮಾವಣೆಯಾಗುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭದ್ರತೆಗೆ ಮೂವರು ಡಿಸಿಪಿಗಳು, 5 ಎಸಿಪಿಗಳು, 20 ಇನ್‌ಸ್ಪೆಕ್ಟರ್‌ಗಳು, 30 ಪಿಎಸ್‌ಐಗಳು ಹಾಗೂ 1500 ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಲ್ಲದೆ 10 ನಗರ ಸಶಸ್ತ್ರ ಮೀಸಲು ಪಡೆಗಳು, ಶ್ವಾನ ದಳ ಹಾಗೂ ಬಾಂಬ್‌ ನಿಷ್ಟ್ರೀಯ ದಳಗಳನ್ನು ಕೂಡಾ ಬಂದೋಸ್‌್ತಗೆ ಬಳಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಧ್ಯರಾತ್ರಿ 1ಕ್ಕೆ ವಹಿವಾಟು ಬಂದ್‌

ಹೊಸ ವರ್ಷಾಚರಣೆಗೆ ಶನಿವಾರ ರಾತ್ರಿ 1ರವರೆಗೆ ಮಾತ್ರ ಪಬ್‌, ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಿಗೆ ವಹಿವಾಟು ನಡೆಸಲು ಸರ್ಕಾರ ಅವಕಾಶ ನೀಡಿದೆ. ಈ ಅವಧಿ ಮುಗಿದ ಕೂಡಲೇ ವಹಿವಾಟು ಬಂದ್‌ ಮಾಡುವಂತೆ ಮಾಲಿಕರಿಗೆ ಸೂಚಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಹೇಳಿದರು.

New Year party: ಹೊಸ ವರ್ಷಾಚರಣೆ ಮೇಲೆ ಉಗ್ರರ ಕಣ್ಣು: ಹದ್ದಿನ ಕಣ್ಣಿಟ್ಟ ಖಾಕಿ ಪಡೆ

ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ರಾತ್ರಿ 1ರ ಬಳಿಕವು ವ್ಯಾಪಾರ-ವಹಿವಾಟು ನಡೆಸುವ ಪಬ್‌, ಹೋಟೆಲ್‌ ಹಾಗೂ ಬಾರ್‌-ರೆಸ್ಟೋರೆಂಟ್‌ಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರ ರಕ್ಷಣೆಗೆ ಆದ್ಯತೆ

ಹೊಸ ವರ್ಷಾಚರಣೆ ವೇಳೆ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸಲಾಗಿದೆ. ಅನುಚಿತ ವರ್ತನೆ ಹಾಗೂ ಕುಚೋದ್ಯತನ ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಅಂತ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.