ಮೂವರಿಂದ ಕೃತ್ಯ| ಓರ್ವ ಚಾಲಕ ಬಂಧನ| ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ| ಡಿಪೋ 22ರ ಬಸ್ ಚಾಲಕ ನಂಜುಂಡೇಗೌಡ ಎಂಬವರಿಗೆ ಗಾಯ| ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಬಸ್ ಚಾಲಕ|
ಬೆಂಗಳೂರು(ಏ.19): ಸಾರಿಗೆ ಮುಷ್ಕರಕ್ಕೆ ಸೆಡ್ಡು ಹೊಡೆದು ಬಸ್ ಚಾಲನೆ ಮಾಡಿದ ಬಿಎಂಟಿಸಿ ಬಸ್ ಚಾಲಕನ ಮೇಲೆ ಮೂವರು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಚಾಲಕನ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ಡಿಪೋ 22ರ ಬಸ್ ಚಾಲಕ ನಂಜುಂಡೇಗೌಡ (44) ಎಂಬವರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದ ಮೂವರ ಪೈಕಿ 9ನೇ ಡಿಪೋದ ಬಿಎಂಟಿಸಿ ಬಸ್ ಚಾಲಕ ಸೀತೆಗೌಡ (42) ಎಂಬಾತನನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಜಮಖಂಡಿ: ಮುಷ್ಕರದ ಮಧ್ಯೆ ಬಸ್ ಚಾಲನೆ, ಕಲ್ಲೇಟಿಗೆ ಚಾಲಕ ಬಲಿ
ಚಾಲಕ ನಂಜುಂಡೇಗೌಡ ಅವರು ಕೆ.ಆರ್.ಮಾರುಕಟ್ಟೆಯಿಂದ ಜಾಲಹಳ್ಳಿ ಮಾರ್ಗದ ಬಸ್ ಚಾಲನೆ ಮಾಡುತ್ತಾರೆ. ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕೆ.ಆರ್.ಮಾರುಕಟ್ಟೆಯಿಂದ ಜಾಲಹಳ್ಳಿಗೆ ಕಾಮಾಕ್ಷಿಪಾಳ್ಯದ ವಿಘ್ನೇಶ್ವರ ನಗರದ ಮಾರ್ಗವಾಗಿ ಹೋಗುತ್ತಿದ್ದರು. ಈ ವೇಳೆ ಮೂವರು ಆರೋಪಿಗಳು ಬಸ್ ಅಡ್ಡಗಟ್ಟಿಏಕಾಏಕಿ ಚಾಲಕನ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ನಂಜುಂಡೇಗೌಡ ಅವರ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ವೇಳೆ ಬಸ್ನಲ್ಲಿ ಸುಮಾರು 20 ಮಂದಿ ಪ್ರಯಾಣಿಕರಿದ್ದು, ಯಾರಿಗೂ ತೊಂದರೆಯಾಗಿಲ್ಲ. ಬಸ್ ಗಾಜು ಪುಡಿಯಾಗಿವೆ ಎಂದು ಪೊಲೀಸರು ಹೇಳಿದರು.
ಕೃತ್ಯ ಎಸಗಿ ಪರಾರಿಯಾದ ಆರೋಪಿಗಳನ್ನು ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಗುರುತಿಸಲಾಗಿದೆ. ಮೂವರ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ಇಬ್ಬರಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
