ಕೊರೋನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣ ವಾಟ್ಸಾಪ್‌ಗಳಲ್ಲಿ ಬರುವ ಸುಳ್ಳು ಸುದ್ದಿ ನಂಬಬೇಡಿ|ಜಾಗೃತಿ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಟಿ.ಎಂ. ಮಚ್ಚೆ ಸಲಹೆ|ಕೊರೋನಾ ವೈರಸ್ ಕುರಿತು ಭಯ ಪಡಬೇಡಿ ನಮ್ಮ ಭಾಗದಲ್ಲಿ ಬಿಸಿಲು ಹೆಚ್ಚಿದ್ದು ಬಿಸಿಲಿನ ತಾಪಕ್ಕೆ ಯಾವುದೇ ವೈರಸ್ ಬರುವುದಿಲ್ಲ|

ಔರಾದ್(ಮಾ.13): ಕೊರೋನಾ ವೈರಸ್ ಬಗ್ಗೆ ವಾಟ್ಸಾಪ್‌ಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ವೈದ್ಯ ಅಧಿಕಾರಿ ಟಿ.ಎಂ ಮಚ್ಚೆ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ತಾಲೂಕಿನ ಸಂತಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗುರುವಾರ ನೆಹರು ಯುವ ಕೇಂದ್ರ ಬೀದರ್ ವತಿಯಿಂದ ಕೊರೋನಾ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುವ ಸುದ್ದಿಗಳನ್ನು ನಂಬದೆ ಸತ್ಯ ಸತ್ಯತೆಯನ್ನು ಅರಿಯಬೇಕು. ಸುಳ್ಳು ಸುದ್ದಿಯಿಂದ ಜನ ಭಯಭೀತರಾಗುತ್ತಾರೆ. ದಯವಿಟ್ಟು ಸುಳ್ಳು ಸುದ್ದಿಗಳನ್ನು ಕಳುಹಿಸಬೇಡಿ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವೈದ್ಯ ರಾಣಿ ಮಾತನಾಡಿ, ಕೊರೋನಾ ವೈರಸ್ ಸೋಂಕಿನ ಲಕ್ಷಣಗಳಾದ ಕೆಮ್ಮು, ಜ್ವರ ಸೀನುವುದು, ಉಸಿರಾಟ ಸಮಸ್ಯೆ, ವಾಂತಿ ಮತ್ತು ಭೇಧಿ (ಕೆಲವು ರೋಗಿಗಳಲ್ಲಿ ಮಾತ್ರ) ರೋಗಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಿದ್ದಾಗ ನ್ಯುಮೋನಿಯಾ ಹಾಗೂ ಕಿಡ್ನಿ ವೈಫಲ್ಯ ಉಂಟಾಗುವುದು. ದಿನನಿತ್ಯ ಎಲ್ಲರೂ ಪದೇ ಪದೇ ಸಾಬೂನು ಬಳಸಿ ಕೈಗಳನ್ನು ಸ್ವಚ್ಛಗೊಳಿಸಬೇಕು, ಮುಖಗವಸು ಅಥವಾ ಮಾಸ್ಕ್ ಹಾಕಿಕೊಳ್ಳುವುದು, ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಆದಷ್ಟು ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ. 

ಉಪನ್ಯಾಸಕ ದತ್ತಾತ್ರಿ ಮಡಿವಾಳ ಮಾತನಾಡಿ, ಕೊರೋನಾ ವೈರಸ್ ಕುರಿತು ಭಯ ಪಡಬೇಡಿ ನಮ್ಮ ಭಾಗದಲ್ಲಿ ಬಿಸಿಲು ಹೆಚ್ಚಿದ್ದು ಬಿಸಿಲಿನ ತಾಪಕ್ಕೆ ಯಾವುದೇ ವೈರಸ್ ಬರುವುದಿಲ್ಲ. ಮನುಷ್ಯರು ಹಸ್ತ ಲಾಘವ ಮಾಡುವುದನ್ನು ಭಾರತೀಯ ಸಂಸ್ಕೃತಿಯ ಪ್ರಕಾರ ನಮಸ್ಕಾರ ಮಾಡುವ ರೂಢಿ ಬೇಳೆಸುವ ಮೂಲಕ ವೈರಸ್ ಹೊರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು. 

ವೈದ್ಯರಾದ ರೇಣುಕಾ, ಸುಮಯ್ಯ, ನಿವೃತ್ತ ಶಿಕ್ಷಕ ಸುರ್ಯಕಾಂತ ಪಟ್ನೆ ಮಾತನಾಡಿದರು. ಈ ವೇಳೆ ಮಂಜು ಸ್ವಾಮಿ, ವಿನೋದಕುಮಾರ ದೇಶಪಾಂಡೆ, ರಾಘವೇಂದ್ರ, ನೀಖಿಲ ದೇಸಾಯಿ, ಬಸವ ಕಿರಣ, ಸಂತೋಷ ಆರ್ಮಿ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತರ ಪ್ರಶಾಂತ್ ಮಣಿಗೆಂಪುರೆ, ರಿಯಾಜಪಾಶಾ ಕೊಳ್ಳೂರ, ಸಂತೋಷ ಕೋಳಿ, ಪ್ರಭುಶಟ್ಟಿ ಸೈನಿಕಾರ ನಿರೂಪಿಸಿ ವಂದಿಸಿದರು.