ಮಾಧುರಿ ಆರ್., 'ಗೃಹಲಕ್ಷ್ಮಿ ಯೋಜನೆ'ಯ ಹಣದಿಂದ ಟ್ಯೂಷನ್ ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಸಾಧನೆಯನ್ನು ಶ್ಲಾಘಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತರುತ್ತಿವೆ ಎಂದು ಹೇಳಿದ್ದಾರೆ.

ಬೆಂಗಳೂರು: ‘ಗೃಹಲಕ್ಷ್ಮಿ ಯೋಜನೆ’ಯ ಹಣದಿಂದ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಮೈಸೂರಿನ ಮಾಧುರಿ ಆರ್‌. ಎಂಬ ವಿದ್ಯಾರ್ಥಿನಿ ಸಾಧನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಶ್ಲಾಘನೆ ವ್ಯಕ್ತಪಡಿಸಿರುವ ಅವರು, ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಮಹತ್ತರವಾದ ಬದಲಾವಣೆ ತರುತ್ತಿವೆ ಎಂಬುದಕ್ಕೆ ಇದೊಂದು ನಿದರ್ಶನ. ಬಡವರ ಮನೆಯ ಮಗು ಇಂದು ರಾಜ್ಯ ರ್‍ಯಾಂಕ್‌ ಪಡೆಯಲು ಗ್ಯಾರಂಟಿ ಹಣವೇ ಆಧಾರವಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯ. ನಮ್ಮ ಸರ್ಕಾರ ನಮ್ಮ ಹೆಮ್ಮೆ, ನಮ್ಮ ಗ್ಯಾರಂಟಿ ನಮ್ಮ ಹೆಮ್ಮೆ ಎಂಬುದು ಈ ಮೂಲಕ ಸಾಬೀತಾಗಿದೆ. ಇನ್ನಾದರೂ ವಿರೋಧ ಪಕ್ಷದವರು ಇನ್ನಾದರೂ ಸುಳ್ಳು ನುಡಿಯುವುದನ್ನು ಮತ್ತು ಜನರ ದಾರಿತಪ್ಪಿಸುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಶಿಕ್ಷಣ ರಂಗದಲ್ಲೂ ಗ್ಯಾರಂಟಿ ಯೋಜನೆಗಳು ಕ್ರಾಂತಿ

ಗ್ಯಾರಂಟಿ ಯೋಜನೆಗಳು ಓದಿಗೆ ನೆರವು, ಭವಿಷ್ಯಕ್ಕೆ ಭರವಸೆ ಮೂಡಿಸುತ್ತಿವೆ. ಗ್ಯಾರಂಟಿಗಳು ಜನರ ಜೀವನದ ದಿಕ್ಕನ್ನೇ ಬದಲಿಸುತ್ತಿವೆ. ಯಾರೋ ದೇವರಿಗೆ ಕಿರೀಟ ಮಾಡಿಸಿದರೆ, ಇನ್ಯಾರೋ ಜೀವನೋಪಾಯಕ್ಕಾಗಿ ಬಳೆ ಅಂಗಡಿ ಅಥವಾ ಗೂಡು ಅಂಗಡಿ ಇಟ್ಟುಕೊಂಡು ಸ್ವಾವಲಂಬಿಗಳಾಗುತ್ತಿದ್ದಾರೆ. ಈಗ ಶಿಕ್ಷಣ ರಂಗದಲ್ಲೂ ಗ್ಯಾರಂಟಿ ಯೋಜನೆಗಳು ಕ್ರಾಂತಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದು ಹೇಗೆ?

ಮೈಸೂರು ತಾಲೂಕಿನ ಇಲವಾಲದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಮಾಧುರಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಟಾಪರ್ ಆಗಿದ್ದಾರೆ. ಖಾಸಗಿ ಕೆಲಸದಲ್ಲಿದ್ದ ಮಾಧುರಿ ತಾಯಿ ಸರಿತಾ ಅವರು ಅನಾರೋಗ್ಯದಿಂದ ಕೆಲಸ ಬಿಡಬೇಕಾಯಿತು. ಆಗ ತಾಯಿಗೆ ಪ್ರತಿ ತಿಂಗಳು ಬರುತ್ತಿದ್ದ 2 ಸಾವಿರ ರು. ಮಾಧುರಿಗೆ ಟ್ಯೂಷನ್ ಫೀಸ್ ಕಟ್ಟಿದ್ದರು.