ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಡಿಜಿಟಲ್‌ ಪಾವತಿ ವ್ಯವಸ್ಥೆ (ಎಲೆಕ್ಟ್ರಾನಿಕ್‌ ಡೆಬಿಟ್‌ ಕಲೆಕ್ಷನ್‌) ಆರಂಭಿಸಿಸಲಾಗಿದೆ. ಬಿಲ್‌ ಕಲೆಕ್ಟರ್‌ಗಳು ಮನೆಗಳಿಗೆ ಭೇಟಿ ನೀಡಿ ಈ ಡಿಜಿಟಲ್‌ ಯಂತ್ರದ ಸಹಾಯದಿಂದ ಡಿಡಿ, ಚೆಕ್‌ ಅಥವಾ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಆಸ್ತಿ ತೆರಿಗೆಯನ್ನು ಪಡೆಯಲು ಸಾಧ್ಯವಿದೆ.

ಶಿವಮೊಗ್ಗ(ಆ.06): ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಡಿಜಿಟಲ್‌ ಪಾವತಿ ವ್ಯವಸ್ಥೆ (ಎಲೆಕ್ಟ್ರಾನಿಕ್‌ ಡೆಬಿಟ್‌ ಕಲೆಕ್ಷನ್‌) ಆರಂಭಿಸಿರುವುದರಿಂದ ಆಸ್ತಿ ತೆರಿಗೆ ಪಾವತಿಯಲ್ಲಿರುವ ಹಲವಾರು ಗೊಂದಲಗಳು ನಿವಾರಣೆಯಾಗಲಿವೆ. ತಂತ್ರಜ್ಞಾನದ ಬಳಕೆ ಮೂಲಕ ಸಾರ್ವಜನಿಕರು ತೆರಿಗೆಯನ್ನು ಸುಲಭವಾಗಿ ಪಾವತಿಸುವ ವಿಧಾನ ಇದಾಗಿದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

Add Asianetnews Kannada as a Preferred SourcegooglePreferred

ನಗರದಲ್ಲಿ ಸೋಮವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಎಲೆಕ್ಟ್ರಾನಿಕ್‌ ಡೆಬಿಟ್‌ ಕಲೆಕ್ಷನ್‌ (ಇಡಿಸಿ) ಯಂತ್ರಗಳನ್ನು ಬಿಲ್‌ ಕಲೆಕ್ಟರ್‌ಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ರಾಜ್ಯದ ಕೆಲವೇ ಮಹಾನಗರ ಪಾಲಿಕೆಯಲ್ಲಿ ಈ ಸೌಲಭ್ಯ ಲಭ್ಯವಿದೆ.

ಇಡಿಸಿ ಸೌಲಭ್ಯದಿಂದಾಗಿ ಆಸ್ತಿ ತೆರಿಗೆ ಸಂಗ್ರಹ ಸುಲಭವಾಗಲಿದೆ. ತೆರಿಗೆದಾರರು ತಾವು ಇರುವ ಸ್ಥಳದಲ್ಲಿಯೇ ತೆರಿಗೆಯನ್ನು ಪಾವತಿಸಬಹುದು. ಅವರು ಪಾವತಿಸಿದ ಮೊತ್ತ ಅದೇ ದಿನ ಖಾತೆಗೆ ಜಮಾ ಆಗಲಿದ್ದು, ಪಾಲಿಕೆ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಸಾಧ್ಯವಾಗಲಿದೆ ಎಂದು ಹೇಳಿದರು.

ಹೆಚ್‌ಡಿಎಫ್‌ಸಿ ಸಹಯೋಗದಲ್ಲಿ ಯೋಜನೆ ಜಾರಿ:

ಎಚ್‌ಡಿಎಫ್‌ಸಿ ಬ್ಯಾಂಕ್‌ ಸಹಯೋಗದೊಂದಿಗೆ ಈ ಕಾರ್ಯಯೋಜನೆ ಜಾರಿಗೆ ತರಲಾಗಿದೆ. ಇನ್ನು ಮುಂದೆ ಬಿಲ್‌ ಕಲೆಕ್ಟರ್‌ಗಳು ಮನೆಗಳಿಗೆ ಭೇಟಿ ನೀಡಿ ಈ ಡಿಜಿಟಲ್‌ ಯಂತ್ರದ ಸಹಾಯದಿಂದ ಡಿಡಿ, ಚೆಕ್‌ ಅಥವಾ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಆಸ್ತಿ ತೆರಿಗೆಯನ್ನು ಪಡೆಯಲು ಸಾಧ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಗೂಗಲ್‌, ಫೇಸ್‌ಬುಕ್‌, ಟ್ವೀಟರ್‌ಗೂ ಇನ್ನು ತೆರಿಗೆ?

ಇಡಿಸಿ ಆಂಡ್ರಾಯಿಡ್‌ ಆಧಾರಿತ ಯಂತ್ರವಾಗಿದ್ದು, ಆಸ್ತಿ ಐಡಿ ಆಧಾರದಲ್ಲಿ ಡಿಮಾಂಡ್‌ ನೋಟ್‌ ಇದರಲ್ಲಿ ಸಿದ್ಧಪಡಿಸಿ ಆಸ್ತಿ ತೆರಿಗೆಯನ್ನು ಪಾವತಿಸಬಹುದು. ಈ ವ್ಯವಸ್ಥೆಯಲ್ಲಿ ಆಯುಕ್ತರು ತೆರಿಗೆ ಸಂಗ್ರಹದ ರಿಯಲ್‌ ಟೈಮ್‌ ಪ್ರಗತಿಯನ್ನು ಪರಿಶೀಲಿಸಬಹುದು. ಮುಂದಿನ ದಿನಗಳಲ್ಲಿ ಈ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಆರೋಗ್ಯ ಇನ್ಸ್‌ಪೆಕ್ಟರ್‌ಗಳಿಗೆ ನೀಡಲಾಗುತ್ತಿದೆ. ಪ್ಲಾಸ್ಟಿಕ್‌ ಬಳಕೆ, ನೈರ್ಮಲ್ಯ ಕಾಪಾಡದಿರುವುದು ಇತ್ಯಾದಿ ಪ್ರಕರಣಗಳಲ್ಲಿ ಸ್ಥಳದಲ್ಲಿಯೇ ದಂಡ ವಸೂಲಾತಿ ಮಾಡಲು ಹಾಗೂ ಬಾಡಿಗೆ ಸಂಗ್ರಹ ಕಾರ್ಯಕ್ಕೆ ಬಳಸಲು ಉದ್ದೇಶಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಮಾಹಿತಿ ನೀಡಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಸಂದರ್ಭದಲ್ಲಿ ಮೇಯರ್‌ ಲತಾ ಗಣೇಶ್‌, ಉಪ ಮೇಯರ್‌ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಎಚ್‌ಡಿಎಫ್‌ಸಿ ಬ್ಯಾಂಕ್‌ ಅಧಿಕಾರಿ ಅಶೋಕ್‌ ಮತ್ತಿತರರು ಉಪಸ್ಥಿತರಿದ್ದರು.