ಕಾಂಗ್ರೆಸ್ ಜತೆ ಸೇರಿದ ನಾಲ್ವರು ಬಿಜೆಪಿಗರು!
ಕಾಂಗ್ರೆಸ್ ಜತೆ ಸೇರಿದ ನಾಲ್ವರು ಬಿಜೆಪಿ ಸದಸ್ಯರು| ಧಾರವಾಡ ಜಿ.ಪಂ. ಅಧ್ಯಕ್ಷೆ ಸ್ವಪಕ್ಷೀಯರಿಂದಲೇ ಪದಚ್ಯುತಿ
ಧಾರವಾಡ[ಫೆ.06]: ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುವ ಮೂಲಕ ಅಧಿಕಾರಿಗಳು ಹಾಗೂ ಸ್ವಪಕ್ಷದ ಸದಸ್ಯರ ಆಕ್ರೋಶಕ್ಕೆ ಗುರಿಯಾಗಿದ್ದ ಇಲ್ಲಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ವಿರೋಧ ಪಕ್ಷಗಳ ಜತೆಗೂಡಿ ಸ್ವಪಕ್ಷದ ಸದಸ್ಯರೇ ಅಧಿಕಾರದಿಂದ ಕೆಳಗಿಳಿಸಿದ್ದಾರೆ.
ಧಾರವಾಡದ ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ಗೊತ್ತುವಳಿಗೆ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಅಧಿಕಾರ ಕಳೆದುಕೊಂಡಿದ್ದಾರೆ. ಇದರಿಂದ ಆಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ.
ಜಿಪಂ ಒಟ್ಟು 22 ಸಂಖ್ಯಾಬಲ ಹೊಂದಿದ್ದು, ಬಿಜೆಪಿ 10, ಕಾಂಗ್ರೆಸ್ 11 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರ ಸದಸ್ಯ ಶಿವಾನಂದ ಕರಿಗಾರ ಬೆಂಬಲ ಪಡೆದು ಬಿಜೆಪಿ ಎರಡೂವರೆ ವರ್ಷಗಳ ಹಿಂದೆ ಅಧಿಕಾರದ ಗದ್ದುಗೆ ಏರಿತ್ತು. ಚೈತ್ರಾ ಶಿರೂರ ಅಧ್ಯಕ್ಷೆಯಾಗಿದ್ದರು.
ಆದರೆ, ಚೈತ್ರಾ ಶಿರೂರ ವರ್ತನೆ ಹಾಗೂ ಅಧಿಕಾರಿಗಳು, ಸದಸ್ಯರೊಂದಿಗೆ ಹೊಂದಾಣಿಕೆ ಇಲ್ಲದಿರುವ ಕಾರಣ ಸ್ವ ಪಕ್ಷ ಬಿಜೆಪಿ ಸದಸ್ಯರಲ್ಲಿಯೇ ಭಿನ್ನಮತ ಉಂಟಾಗಿತ್ತು. ಇದರ ಲಾಭ ಪಡೆದ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ಮಂಡಿಸಿದ್ದರು. ಚೈತ್ರಾ ಶಿರೂರ ವಿರುದ್ಧ ಅವಿಶ್ವಾಸ ಮಂಡಿಸಲು 15 ಮತಗಳು ಬೇಕಿತ್ತು. ಕಾಂಗ್ರೆಸ್ 11, ಪಕ್ಷೇತರ ಒಂದು ಹಾಗೂ ಬಿಜೆಪಿಯ ನಾಲ್ಕು ಜನ (ರತ್ನಾ ಪಾಟೀಲ, ಅಣ್ಣಪ್ಪ ದೇಸಾಯಿ, ಮಂಜವ್ವ ಹರಿಜನ, ಜ್ಯೋತಿ ಬೆಂತೂರ) ಒಟ್ಟು 16 ಜನ ಕೈ ಎತ್ತಿದ ಕಾರಣ ಅವಿಶ್ವಾಸಕ್ಕೆ ಜಯ ದೊರೆಯಿತು.