ಜೋಶಿ ಕೆಲಸಕ್ಕೆ ಚಕ್ಕರ್, ಪ್ರಚಾರಕ್ಕೆ ಹಾಜರ್
ಜೋಶಿ ಕೇಂದ್ರ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ವರ್ಷಕ್ಕೆ ಕೊಡುವ 5 ಕೋಟಿ ಅನುದಾನವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳದೆ ರಾಜ್ಯದಲ್ಲಿ ಅತ್ಯಂತ ಕಳಪೆ ಸಂಸದರೆಂದು ಅಂಕಿ ಸಂಖ್ಯೆಗಳಿಂದ ಸಾಬೀತಾಗಿದೆ. ಇನ್ನಾದರೂ ಸುಳ್ಳು ಪ್ರಚಾರ ಪ್ರಿಯರಾಗದೆ ಜೋಶಿ ಅವರು ಕ್ಷೇತ್ರದ ಅನುದಾನ ಸದ್ಭಳಕೆ ಮಾಡಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಕಲಿಯಲಿ - ಕಾಂಗ್ರೆಸ್ ಮುಖಂಡ ಬಸವರಾಜ ಮಲಕಾರಿ
ಧಾರವಾಡ(ಅ.10): ಅಭಿವೃದ್ಧಿ ಕಾರ್ಯಗಳಿಗೆ ಚಕ್ಕರ್ ಹಾಕಿ ಪ್ರಚಾರದ ಸಂದರ್ಭದಲ್ಲಿ ಮಾತ್ರ ಹಾಜರಾಗುವುದೇ ಸಂಸದ ಪ್ರಹ್ಲಾದ ಜೋಶಿ ಅವರ ಪ್ರೋಗ್ರೆಸ್ ಕಾರ್ಡ್ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಮಲಕಾರಿ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೋಶಿ ಕೇಂದ್ರ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ವರ್ಷಕ್ಕೆ ಕೊಡುವ 5 ಕೋಟಿ ಅನುದಾನವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳದೆ ರಾಜ್ಯದಲ್ಲಿ ಅತ್ಯಂತ ಕಳಪೆ ಸಂಸದರೆಂದು ಅಂಕಿ ಸಂಖ್ಯೆಗಳಿಂದ ಸಾಬೀತಾಗಿದೆ. ಇನ್ನಾದರೂ ಸುಳ್ಳು ಪ್ರಚಾರ ಪ್ರಿಯರಾಗದೆ ಜೋಶಿ ಅವರು ಕ್ಷೇತ್ರದ ಅನುದಾನ ಸದ್ಭಳಕೆ ಮಾಡಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಕಲಿಯಲಿ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ದೇಶದ ಎಲ್ಲ ರಾಜ್ಯಗಳಿಗೆ ಕೊಡುವ ಅನುದಾನವನ್ನು ತಮ್ಮದೇ ವಿಶೇಷ ಪ್ರಯತ್ನದಿಂದ, ವಿಶೇಷ ಪರಿಶ್ರಮದಿಂದ ಅನುದಾನ ತರಲಾಗಿದೆ ಎಂದು ಪ್ರಚಾರ ಗಿಟ್ಟಿಸಿ ಕೊಳ್ಳುತ್ತಿದ್ದಾರೆ. ಕೇಂದ್ರದಿಂದ ಪ್ರತಿವರ್ಷ ಕೊಡುವ ಪ್ರದೇಶ ಅಭಿವೃದ್ಧಿ ಹಣವನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ನಾಚಿಗೇಡಿತನದ ಸಂಗತಿ ಎಂದಿದ್ದಾರೆ.