Asianet Suvarna News Asianet Suvarna News

10 ದಿನಗಳ ದಸರಾ ಮಹೋತ್ಸವ ಭದ್ರತೆಗಾಗಿ 7 ಸಾವಿರ ಪೊಲೀಸರ ನಿಯೋಜನೆ

ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ 10 ದಿನ ನಗರದ ವಿವಿಧೆಡೆ ನಡೆಯುವ ಕಾರ್ಯಕ್ರಮಗಳು, ಜಂಬೂಸವಾರಿ, ಪಂಜಿನ ಕವಾಯತು ಭದ್ರತೆಗಾಗಿ 7 ಸಾವಿರ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

Deployment of 7 thousand policemen for 10-day Dussehra festival security snr
Author
First Published Oct 15, 2023, 9:21 AM IST

 ಮೈಸೂರು :  ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ 10 ದಿನ ನಗರದ ವಿವಿಧೆಡೆ ನಡೆಯುವ ಕಾರ್ಯಕ್ರಮಗಳು, ಜಂಬೂಸವಾರಿ, ಪಂಜಿನ ಕವಾಯತು ಭದ್ರತೆಗಾಗಿ 7 ಸಾವಿರ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ಮೈಸೂರು ನಗರ ಸಿವಿಲ್ ಪೊಲೀಸರು, ಸಂಚಾರ ಪೊಲೀಸರು, ಸಿಎಆರ್, ಡಿಎಆರ್, ಕೆಎಸ್ಆರ್ ಪಿ, ಅಶ್ವಾರೋಹಿ ದಳ, ಗೃಹ ರಕ್ಷಕದ ದಳದ ಸಿಬ್ಬಂದಿ ಸೇರಿ 2000 ಮಂದಿ ಸ್ಥಳೀಯ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ. ಹೊರ ಜಿಲ್ಲೆಗಳಿಂದ 4200 ಮಂದಿ ಪೊಲೀಸರು ಹಾಗೂ ಸಶಸ್ತ್ರ ಪಡೆಗಳು ಸೇರಿದಂತೆ ಒಟ್ಟಾರೆ 7 ಸಾವಿರ ಮಂದಿ ಪೊಲೀಸರು ದಸರಾ ಭದ್ರತೆಗೆ ಕಾರ್ಯ ನಿರ್ವಹಿಸಲಿದ್ದಾರೆ.

ಹೊರ ಜಿಲ್ಲೆಗಳಿಂದ 1 ಡಿಐಜಿ, 11 ಎಸ್ಪಿ, 410 ಇತರೆ ಪೊಲೀಸ್ ಅಧಿಕಾರಿಗಳು, 3778 ಸಿಬ್ಬಂದಿ ಸೇರಿದಂತೆ ಒಟ್ಟು 4200 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಲ್ಲದೆ, 30 ಕೆಎಸ್ಆರ್ ಪಿ, 20 ಎಎಸ್ಪಿ, 2 ಬಿಡಿಡಿಎಸ್, 1 ಗರುಡಾ ಪಡೆ ಸಹ ನಿಯೋಜಿಸಲಾಗಿದೆ.

ದಸರಾ ಮಹೋತ್ಸವ ಅ.15 ರಿಂದ 24 ರವರೆಗೆ ನಡೆಯಲಿದ್ದು, ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ವಸ್ತುಪ್ರದರ್ಶನ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ, ದೀಪಾಲಂಕಾರ, ಯುವ ದಸರಾ, ಏರ್ ಶೋ, ಜಂಬೂಸವಾರಿ ಮೆರವಣಿಗೆ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳಿಗೆ ಮತ್ತು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಸಂಬಂಧ ರಾಜ್ಯದ ಹೊರ ಘಟಕಗಳಿಂದ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ.

ನಗರದ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಹೊರ ಜಿಲ್ಲೆಗಳಿಂದ ಅಧಿಕಾರಿ ಮತ್ತು ಸಿಬ್ಬಂದಿ ಈ ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸಲಾಗುತ್ತಿದ್ದು, ಹೊರ ಜಿಲ್ಲೆಗಳಿಂದ 4200 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದೆ. ಸಶಸ್ತ್ರ ಪಡೆಗಳ, ವಿಧ್ವಂಸಕ ಕೃತ್ಯ ಪತ್ತೆ ದಳಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಗರುಡಾ ಪಡೆ ಸಹ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ದಸರಾ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ 

  ಮೈಸೂರು :  ದಸರಾ ಅಂಗವಾಗಿ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಅ.15 ರಿಂದ 23 ರವರೆಗೆ ಅರಮನೆ ಮುಂಭಾಗದ ವೇದಿಕೆ ಸೇರಿದಂತೆ ನಗರದೆಲ್ಲೆಡೆ 10 ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.

ಮೈಸೂರುನ ಅರಮನೆ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.15ರ ಸಂಜೆ 6ಕ್ಕೆ ಅರಮನೆ ಮುಂಭಾಗದ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಅರಮನೆ ವೇದಿಕೆ ಕಾರ್ಯಕ್ರಮದ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಈ ಬಾರಿ ಸಾಕಷ್ಟು ಅರ್ಜಿಗಳು ಬಂದಿರುವ ಕಾರಣ ಉತ್ತಮ ತಂಡಗಳನ್ನು ಆಯ್ಕೆ ಮಾಡಿ ಎರಡು ದಿನಗಳಲ್ಲಿ ಉಳಿದ ವೇದಿಕೆ ಕಾರ್ಯಕ್ರಮಗಳ ಕಲಾವಿದರ ಆಯ್ಕೆ ನಡೆಯಲಿದೆ ಎಂದರು.

ನಾಟಕಕ್ಕೆ 468, ಸಂಗೀತ 920, ಜನಪದ 340, ನೃತ್ಯ 692, ಹರಿಕಥೆ 18, ಸೋಬಾನೆ ಪದ 37, ವಾದ್ಯಸಂಗೀತ 265, ತೊಗಲುಗೊಂಬೆ 10, ಜಾದೂ 5, ನಿರೂಪಣೆ 48 ಸೇರಿದಂತೆ ಒಟ್ಟು 2803 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದರು.

Follow Us:
Download App:
  • android
  • ios