ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಬೆಳೆದಿರುವ ಪಾಳೇಗಾರಿಕೆ ಸಂಸ್ಕೃತಿ ನಾಶವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾಗಿದೆ   ಶಾಸಕ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್‌ ರಮೇಶ್‌ ಕುಮಾರ್‌  ಹೇಳಿಕೆ

 ಕೋಲಾರ (ಜು.27): ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಬೆಳೆದಿರುವ ಪಾಳೇಗಾರಿಕೆ ಸಂಸ್ಕೃತಿ ನಾಶವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾಗಿದೆ ಎಂದು ಶಾಸಕ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್‌ ರಮೇಶ್‌ ಕುಮಾರ್‌ ತಿಳಿಸಿದರು.

Add Asianetnews Kannada as a Preferred SourcegooglePreferred

ಸೋಮವಾರ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ರಾಜೀವ್‌ ಗಾಂಧಿ ಪಂಜಾಯತ್‌ ರಾಜ್‌ ಸಂಘಟನೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಣಹದ್ದುಗಳ ರೆಕ್ಕೆ ಕಟ್‌ ಮಾಡಬೇಕು

ಪಂಚಾಯತ್‌ ರಾಜ್‌ ವ್ಯವಸ್ಥೆ ತಳಮಟ್ಟದ ಪ್ರಜೆಗೂ ಅಧಿಕಾರ ಸಿಗಬೇಕು ಎನ್ನುವ ಉದ್ದೇಶದಿಂದಾಗಿದೆ. ಕಾಂಗ್ರೆಸ್‌ನಲ್ಲಿ ರಣಹದ್ದುಗಳು ಇವೆ. ಚುನಾವಣೆ ಬಂದಾಗ ಮಾತ್ರ ಇವರುಗಳು ಬರುತ್ತಾರೆ. ಅಂತಹ ರಣಹದ್ದುಗಳ ರೆಕ್ಕೆ ಕಟ್‌ ಮಾಡಿದರೇ ಮಾತ್ರ ಕಾಂಗ್ರೆಸ್‌ಗೆ ಉಳಿಗಾಲ ಎಂದು ಎಚ್ಚರಿಸಿದರು.

ರಮೇಶ್‌ ಕುಮಾರ್‌ಗೆ ಮಹತ್ವದ ಹೊಣೆ : ಸೂಚನೆಯೊಂದು ನೀಡಿದ ಡಿಕೆಶಿ

ಇಂದಿರಾ ಗಾಂಧಿಯವರು ಎಮರ್ಜೆನ್ಸಿ ಹೊರಡಿಸಿದ್ದಕಿಂತ ಕೆಟ್ಟ ಪರಿಸ್ಥಿತಿ ಬಿಜೆಪಿ ಸರ್ಕಾರದಲ್ಲಿ ಇದೆಯೆಂದು ಟೀಕಿಸಿದ ಅವರು ಕೇವಲ ಚುನಾವಣೆ ದೃಷ್ಟಿಯಿಂದ ಸಂಘಟನೆ ಮಾಡದೆ ಪಕ್ಷದ ಸಿದ್ದಾಂತಗಳ ಬಗ್ಗೆ ಕಾರ್ಯಕರ್ತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಇದರ ಬಗ್ಗೆ ಚಿಂತನೆ ನಡೆಯಲಿ ಎಂದರು.

ಕಾರ್ಯಕರ್ತರಿಗೆ ಅವಕಾಶ ಸಿಗಬೇಕು

ಪಂಚಾಯತ್‌ ರಾಜ್‌ ವ್ಯವಸ್ಥೆ ತರಲು ಕೆಲವು ಪಕ್ಷಗಳ ಸಹಮತ ಇರಲಿಲ್ಲ, ಆದರೆ ನಸೀರ್‌ಸಾಬ್‌ರ ಹಠದಿಂದ ಶಾಸನ ಜಾರಿಗೆ ಬಂದಿದ್ದು ಇತಿಹಾಸ, ಚುನಾವಣೆ ನಂತರ ಮೀಸಲಾತಿ ಮಾಡುವುದನ್ನು ಯಾವುದೇ ಪಕ್ಷ ಮಾಡಿದರೂ ಅದು ತಪ್ಪು ಎಂದ ಅವರು,ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತನಿಗೆ ಅವಕಾಶ ಸಿಗಬೇಕು, ಮೊದಲು ನಮ್ಮಲ್ಲಿ ಪ್ರಾಮಾಣಿಕತೆ ಬರಬೇಕು ನಂತರ ಪಕ್ಷ ಸಂಘಟನೆ ಮಾಡುವುದು ಆಗಲಿ ಎಂದರು.

ಸಾಮಾನ್ಯರಿಗೆ ಅಧಿಕಾರ: ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮಾತನಾಡಿ, ನಜೀರ್‌ಸಾಬ್‌ರ ಆಶಯದಂತೆ ರಾಜ್ಯದಲ್ಲಿ ಎಲ್ಲಾ ವರ್ಗದ ಸಾಮಾನ್ಯ ಜನತೆಗೆ ಅಧಿಕಾರ ಸಿಗುವಂತೆ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲತ್ತದೆಯೆಂದರು.

ಸಂಘಟನೆಯ ರಾಷ್ಟ್ರೀಯ ಸಲಹೆಗಾರ ಡಿ.ಆರ್‌.ಪಾಟೀಲ್‌, ಸಾಮಾನ್ಯ ಜನರಿಗೆ ಸಂಪೂರ್ಣ ಅಧಿಕಾರ ಇನ್ನೂ ಸಿಕ್ಕಿಲ್ಲ. ಅಧಿಕಾರ ವಿಕೇಂದ್ರೀಕರಣ ಹಾಗೂ ಮೀಸಲಾತಿಯಿಂದ ಅಧಿಕಾರ ಹಂಚಿಕೆಯಾಗಿ ಎಲ್ಲಾ ವರ್ಗದವರಿಗೂ ಸಮಾನ ಅವಕಾಶ ದೊರೆಯುಂತಾಯಿತು. ಬಿಜೆಪಿ ಜನರಿಗೆ ಬರೀ ಸುಳ್ಳು ಹೇಳುತ್ತಾ, ಜನರನ್ನು ದಿಕ್ಕುತಪ್ಪಿಸುತ್ತಿದೆ, ಅದರ ವಿರುದ್ದ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಸಿದ್ದಾಂತ ತಿಳಿಸಬೇಕು ಎಂದರು.