Asianet Suvarna News Asianet Suvarna News

ಹಂದಿ ಜೋಗಿ ಕುಟುಂಬಕ್ಕೆ ನಿವೇಶನ ನೀಡಲು ಆಗ್ರಹ

ಹಂದಿ ಜೋಗಿ ಕುಟುಂಬಕ್ಕೆ ನಿವೇಶನ ನೀಡಲು ತುಮಕೂರು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಇಸ್ಮಾಯಿಲ್‌ ನಗರ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

Demand to give land to the Handi Jogi family snr
Author
First Published Jul 29, 2023, 7:51 AM IST

 ತುಮಕೂರು :  ಹಂದಿ ಜೋಗಿ ಕುಟುಂಬಕ್ಕೆ ನಿವೇಶನ ನೀಡಲು ತುಮಕೂರು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಇಸ್ಮಾಯಿಲ್‌ ನಗರ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ನಗರದ ಬಡ್ಡಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸಚಿವರಿಗೆ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಪರಮೇಶ್ವರ್‌ ಅವರು ತುರ್ತು ಕ್ರಮ ವಹಿಸಿ 60 ಹಂದಿ ಜೋಗಿ ಕುಟುಂಬಗಳಿಗೆ ನಗರದ 4 ಕಿ.ಮೀ ಸಮೀಪದಲ್ಲಿ ಭೂಮಿ ಹುಡುಕಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಪುನರ್‌ ವಸತಿಗೊಳಿಸಲು ಜಿಲ್ಲಾಧಿಕಾರಿ ಶ್ರೀನಿವಾಸ್‌ ಮತ್ತು ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ ಬಿ.ವಿ ರವರಿಗೆ ಸೂಚಿಸಿದರು. ಪುನರ್‌ಗೊಳಿಸುವವರೆವಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಶ್ರೀನಿವಾಸ್‌ ಈ ಕುರಿತು ಹೊನ್ನೇನಹಳ್ಳಿಯಲ್ಲಿ ನಿರ್ಮಾಣಕ್ಕೆ ಸಿದ್ದವಾಗಿರುವ ಪಿಎಂಎವೈ ಯೋಜನೆಯಡಿ 192 ಜಿ+ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಈ 60 ಕುಟುಂಬಗಳಿಗೆ ಪುನರ್‌ ವಸತಿಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಈ ಸಮುದಾಯದವರು ಜೀವನಾಧಾರಿತ ಕಸುಬುಗಳಿಗೆ ತೊಂದರೆ ಉಂಟಾಗುತ್ತದೆ. ಇದರಿಂದ ಬಹುಮಹಡಿ ವಸತಿ ಸಮುಚ್ಚಯ ಬೇಡವೆಂದು ತಿಳಿಸಿದ್ದಾರೆ. ಇವರ ಜೀವನಾಧಾರಿತ ಕುಲಕಸುಬುಗಳಿಗೆ ಪೂರಕವಾಗಿ ನಗರದ ಸಮೀಪದಲ್ಲಿ ನಿವೇಶನ ಹುಡುಕಿ ನೀಡಲು ತುರ್ತು ಕ್ರಮ ವಹಿಸಲಾಗುವುದೆಂದು ತಿಳಿಸಿದರು.

ಸ್ಲಂ ಸಮಿತಿ ಕಾರ್ಯದರ್ಶಿ ಅರುಣ್‌ ಮಾತನಾಡಿ ಸುಮಾರು 60 ವರ್ಷಗಳಿಂದ ಬಟ್ಟೆಗುಡಿಸಲುಗಳಲ್ಲಿ ವಾಸ ಮಾಡಿಕೊಂಡು ಬರುತ್ತಿರುವ ಈ ಸಮುದಾಯವನ್ನು ತುಮಕೂರು ಜಿಲ್ಲಾಡಳಿತ ಮತ್ತು ತುಮಕೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ಮಾಡುತ್ತ ಬಂದಿವೆ. ನಗರದಲ್ಲಿ ಹಲವು ಸಮುದಾಯಗಳಿಗೆ ನಿವೇಶನ ವಸತಿ ನೀಡುವ ಇಲಾಖೆಗಳು ಅಲೆಮಾರಿ ಹಂದಿ ಜೋಗಿ ಸಮುದಾಯವನ್ನು ಸಂಪೂರ್ಣ ಮೂಲೆ ಗುಂಪು ಮಾಡಲಾಗಿದೆ ಎಂದರು.

ನಂತರ ಹಂದಿಜೋಗಿ ಸಮುದಾಯದ ಮುಖಂಡರಾದ ಚಿಕ್ಕಗಂಗಮ್ಮ, ವೆಂಕಟೇಶ್‌ ಮಾತನಾಡಿ ಹಂದಿ ಸಾಗಾಣಿಕೆ ಕಸುಬಾಗಿತ್ತು. ಆದರೆ ಮಹಾನಗರ ಪಾಲಿಕೆ ಸೂಚನೆ ಮೇರೆಗೆ ಸಾಗಾಣಿಕೆಯನ್ನು ಬಿಟ್ಟು ಮೇಕೆ, ಕುರಿ, ಕೋಳಿ ಸಾಗಾಣಿಕೆಯಿಂದ ಜೀವನ ನಡೆಸುತ್ತಿದ್ದೇವೆ ಎಂದರು.

ಕೊರಟಗೆರೆ ಕಾಂಗ್ರೆಸ್‌ ಮುಖಂಡರಾದ ಹರೀಶ್‌, ಹಂದಿಜೋಗಿ ಸ್ಲಂ ಶಾಖಾ ಸಮಿತಿಯ ಚಿಕ್ಕಗಂಗಮ್ಮ, ಯುವ ಘಟಕದ ವೆಂಕಟೇಶ್‌, ಪದಾಧಿಕಾರಿಗಳಾದ ಮಂಜಮ್ಮ, ನಾಗಮ್ಮ, ರವಿ, ಗುರಮ್ಮ, ಮಹಾಲಕ್ಷ್ಮಿ, ಮಾರಪ್ಪ, ಲತಾ, ಮಂಜ, ಚಂದ್ರ, ಲಂಬಾಣಿ ಸಮುದಾಯದ ಗೋಪಾಲಯ್ಯ, ಮಂಜನಾಯ್‌್ಕ, ಓಂಕಾರ್‌ನಾಯ್ಕ, ಲಕ್ಷ್ಮೀಬಾಯಿ ಮುಂತಾದವರು ಪಾಲ್ಗೊಂಡಿದ್ದರು.

Follow Us:
Download App:
  • android
  • ios