Asianet Suvarna News Asianet Suvarna News

ಕ್ವಿಂಟಲ್‌ ಕೊಬ್ಬರಿಗೆ .19 ಸಾವಿರ ನಿಗದಿ ಮಾಡಲು ಆಗ್ರಹ

ಕ್ವಿಂಟಲ್‌ ಕೊಬ್ಬರಿಗೆ 19 ಸಾವಿರ ರು. ಬೆಲೆಯನ್ನು ನಿಗಧಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸೋಮವಾರ ಎಪಿಎಂಸಿ ರೈತ ಭವನದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಕಲ್ಪಶ್ರೀರವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.

Demand to fix 19 thousand per quintal of coconut snr
Author
First Published Jan 31, 2023, 6:14 AM IST

 ತಿಪಟೂರು :  ಕ್ವಿಂಟಲ್‌ ಕೊಬ್ಬರಿಗೆ 19 ಸಾವಿರ ರು. ಬೆಲೆಯನ್ನು ನಿಗಧಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸೋಮವಾರ ಎಪಿಎಂಸಿ ರೈತ ಭವನದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಕಲ್ಪಶ್ರೀರವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಯೋಗೇಶ್ವರಸ್ವಾಮಿ ಮಾತನಾಡಿ, ರೈತರ ಹೆಸರೇಳಿಕೊಂಡು ಅಧಿಕಾರ ಗದ್ದುಗೆ ಹಿಡಿಯುವ ಸರ್ಕಾರಗಳು ಕೊಬ್ಬರಿ ಬೆಂಬಲ ಬೆಲೆಯ ಬಗ್ಗೆ ಚಿಂತಿಸದಿರುವುದು ರೈತರ ದುರದೃಷ್ಟವೇ ಸರಿ. ಈಗಿನ ತೋಟಗಾರಿಕಾ ಕೃಷಿಯ ವೆಚ್ಚ ದುಬಾರಿಯಾಗಿದ್ದು, ಒಂದು ಕ್ವಿಂಟಲ್‌ ಕೊಬ್ಬರಿ ಬೆಳೆಯಲು ಕನಿಷ್ಠವೆಂದರೂ ರು.16 ಸಾವಿರ ಖರ್ಚು ಬರುತ್ತಿದ್ದು, ವೈಜ್ಞಾನಿಕವಾಗಿ ಒಂದು ಕ್ವಿಂಟಲ್‌ ಕೊಬ್ಬರಿಗೆ ರು.16 ಸಾವಿರ ಬೆಲೆ ಸಿಕ್ಕರೆ ಮಾತ್ರ ತೆಂಗು ಬೆಳೆಗಾರರು ತುಸು ನೆಮ್ಮದಿ ಜೀವನ ನಡೆಸಬಹುದಾಗಿದೆ. ಆದರೆ ಪ್ರಸ್ತುತ 11 ಸಾವಿರ ಆಸುಪಾಸಿನಲ್ಲಿ ಕೊಬ್ಬರಿ ಬೆಲೆ ಇದ್ದು ಬೆಳೆಗಾರರು ತೀವ್ರ ನಷ್ಟಅನುಭವಿಸುವಂತಾಗಿದೆ. ಕೂಡಲೇ ಕ್ವಿಂಟಲ್‌ ಕೊಬ್ಬರಿಗೆ 19 ಸಾವಿರ ರು. ನಿಗದಿ ಮಾಡಬೇಕೆಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯ ಜಿ. ನಾರಾಯಣ್‌ ಮಾತನಾಡಿ, ರೈತಪರ, ಜನಪರ ಸರ್ಕಾರವೆಂದು ಬಿಂಬಿಸುವ ಬಿಜೆಪಿ ಸರ್ಕಾರಕ್ಕೆ ರೈತರು ಕಷ್ಟಅರ್ಥವಾಗುತ್ತಿಲ್ಲ. ಕೇವಲ ಸುಳ್ಳು ಆಶ್ವಾಸನೆ ಹೇಳಿಕೊಂಡು ಕಾಲಹರಣ ಮಾಡುತ್ತಿದೆ. ತೆಂಗು ಬೆಳೆಗಾರರಿಗೆ ತೋಟಗಾರಿಕಾ ಮೂಲ ಸೌಲಭ್ಯಗಳ ಕೊರತೆ, ಪ್ರಕೃತಿ ವಿಕೋಪ, ತೆಂಗಿನ ಮರಗಳಿಗೆ ಎಡಬಿಡದೆ ಕಾಡುತ್ತಿರುವ ರೋಗಗಳ ಜೊತೆ ಜೊತೆಗೆ ತೋಟಗಳ ಅಭಿವೃದ್ಧಿಗೆ ಬ್ಯಾಂಕುಗಳಿಂದ ಪಡೆದಿರುವ ಸಾಲಗಳ ಮೇಲಿನ ಬಡ್ಡಿ, ಕಂತುಗಳ ತೀರಿಸಲು ಬೆಲೆ ಕುಸಿತ ಕಂಗಾಲಾಗುವಂತೆ ಮಾಡಿದೆ. ಆದ್ದರಿಂದ ಸರ್ಕಾರ ರೈತರ ಕಷ್ಟಅರ್ಥಮಾಡಿಕೊಂಡು ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಎಸ್‌.ಎನ್‌.ಸ್ವಾಮಿ, ರೈತ ಸಂಘದ ತಿಮ್ಲಾಪುರ ದೇವರಾಜು, ಚನ್ನಬಸವಣ್ಣ, ಗಡಬನಹಳ್ಳಿ ತಿಮ್ಮೇಗೌಡ, ಪೊ›. ಜಯನಂದಯ್ಯ, ಮನೋಹರ್‌ಪಾಟೀಲ್‌, ಬೈರಾಪರ ಸ್ವಾಮಿ, ಯೋಗಾನಂದಸ್ವಾಮಿ, ಗಡಬನಹಳ್ಳಿ ತಿಮ್ಮೇಗೌಡ, ಚಿ.ನಾ. ಹಳ್ಳಿ ಲೋಕೇಶ್‌, ಸಂಪಿಗೆ ಕೀರ್ತಿ, ಚಿಕ್ಕಸ್ವಾಮಿಗೌಡ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

ರಾಜ್ಯ ಸರ್ಕಾರ ಕ್ವಿಂಟಲ್‌ ಕೊಬ್ಬರಿಗೆ ಮೂರು ಸಾವಿರ ಬೆಂಬಲ ಬೆಲೆ ನೀಡಬೇಕು. ರೈತರು ಬೆಳೆದ ಬೆಳೆಗನ್ನು ಕಾಲ ಕಾಲಕ್ಕೆ ಬೆಳೆ ಸಮೀಕ್ಷೆಯಲ್ಲಿ ಲೋಪವಾಗದಂತೆ ಮಾಡಬೇಕು. ಕೊಬ್ಬರಿ ಖರೀದಿ ಮಾಡಿದ 72 ಗಂಟೆಯೊಳಗೆ ರೈತ ಖಾತೆಗೆ ಹಣವನ್ನು ವರ್ಗಾಯಿಸಬೇಕು. ಪಡಿತರ ಆಹಾರ ಧಾನ್ಯದ ಜೊತೆಗೆ ಕೊಬ್ಬರಿ ಎಣ್ಣೆಯನ್ನು ನೀಡಬೇಕು. ಸರ್ಕಾರಗಳು ರೈತರ ಕಷ್ಟವನ್ನು ಅರ್ಥಮಾಡಿಕೊಂಡು ಅವರಿಗೆ ಸ್ಪಂದಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.

ಬಸ್ತಿಹಳ್ಳಿ ರಾಜಣ್ಣ ತಾಲೂಕು ಅಧ್ಯಕ್ಷ, ರಾಜ್ಯ ರೈತ ಸಂಘ

Follow Us:
Download App:
  • android
  • ios