ಕನ​ಕ​ಪು​ರ ನಗ​ರದ ಎಸ್‌ಎಲ್‌ಎನ್‌ ರಸ್ತೆಯ ಕರ್ನಾಟಕ ಒನ್‌ ಕೇಂದ್ರಕ್ಕೆ ಶುಕ್ರವಾರ ಸಂಜೆ ಶಿವ​ಕು​ಮಾರ್‌ ದಿಢೀರ್‌ ಭೇಟಿ ನೀಡಿ​ದಾಗ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಅವಾಕ್ಕಾದರು. ತಮ್ಮ ಹೆಸರು ನೋಂದಣಿ ಮಾಡಲು ಬಂದಿದ್ದ ಮಹಿಳೆಯರು ಕೂಡ ಸೇವಾ ಕೇಂದ್ರದಲ್ಲಿ ಡಿಸಿಎಂ ಅವರನ್ನು ಕಂಡು ಆಶ್ಚರ್ಯ ಚಕಿತರಾದರು. 

ಕನ​ಕ​ಪು​ರ(ಜು.23): ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಅವರು ಕನಕಪುರದ ಕರ್ನಾಟಕ ಒನ್‌ ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿ ರಾಜ್ಯ​ಸ​ರ್ಕಾ​ರದ ಮಹ​ತ್ವಾ​ಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಯನ್ನು ಖುದ್ಧು ಪರಿಶೀಲಿಸಿದರು.

ನಗ​ರದ ಎಸ್‌ಎಲ್‌ಎನ್‌ ರಸ್ತೆಯ ಕರ್ನಾಟಕ ಒನ್‌ ಕೇಂದ್ರಕ್ಕೆ ಶುಕ್ರವಾರ ಸಂಜೆ ಶಿವ​ಕು​ಮಾರ್‌ ದಿಢೀರ್‌ ಭೇಟಿ ನೀಡಿ​ದಾಗ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಅವಾಕ್ಕಾದರು. ತಮ್ಮ ಹೆಸರು ನೋಂದಣಿ ಮಾಡಲು ಬಂದಿದ್ದ ಮಹಿಳೆಯರು ಕೂಡ ಸೇವಾ ಕೇಂದ್ರದಲ್ಲಿ ಡಿಸಿಎಂ ಅವರನ್ನು ಕಂಡು ಆಶ್ಚರ್ಯ ಚಕಿತರಾದರು. ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಹೇಗೆ ಮಾಡಲಾಗುತ್ತಿದೆ? ಅಲ್ಲಿನ ಸಿಬ್ಬಂದಿ ಏನಾದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರಾ? ವಿಳಂಬ ಮಾಡುತ್ತಿದ್ದಾರಾ? ಕುಂಟು ನೆಪ ಹೇಳು​ತ್ತಿದ್ದಾರಾ? ಮನೆ ಯಜಮಾನಿಯರಿಗೆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ? ನೋಂದಣಿ ಪ್ರಕ್ರಿಯೆ ಸರಳವಾಗಿದೆಯಾ ಎಂಬುದರ ಬಗ್ಗೆ ನೋಂದಣಿದಾರರಿಂದಲೇ ಖುದ್ದು ಮಾಹಿತಿ ಪಡೆದರು.

ಔಟ್ ಆಫ್‌ ದಿ ವೇ ಯಾರೂ ಹೋಗಬೇಡಿ: ಅಧಿಕಾರಿಗಳಿಗೆ ಡಿಕೆಶಿ ಖಡಕ್‌ ವಾರ್ನಿಂಗ್‌!

ಅಗತ್ಯ ದಾಖಲೆ ಸಲ್ಲಿಸಲು ತನಗಿರುವ ವೈಯಕ್ತಿಕ ತಾಂತ್ರಿಕ ತೊಡಕುಗಳ ಬಗ್ಗೆ ಮಹಿಳೆಯೊಬ್ಬರು ನೀವೇದಿಸಿಕೊಂಡಾಗ ಅದಕ್ಕೆ ಪರಿಹಾರವನ್ನು ಡಿ.ಕೆ.​ಶಿ​ವ​ಕು​ಮಾರ್‌ ಅವರು ಸೂಚಿಸಿದರು. ಸಿಬ್ಬಂದಿ ಜತೆ ಕಂಪ್ಯೂಟರ್‌ ಮುಂದೆ ಕುಳಿತು ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದರು. ಅರ್ಜಿ ಸಲ್ಲಿಸಲು ಯಾವುದೇ ಅಡೆತಡೆಗಳು ಹಾಗೂ ವಿಳಂಬ ಮಾಡದಂತೆ ಸೇವಾ ಕೇಂದ್ರದ ಸಿಬ್ಬಂದಿಗಳಿಗೆ ಸೂಚನೆ ನೀಡಿದ ಅವ​ರು, ಅರ್ಜಿ ಸಲ್ಲಿಸಲು ಆಗಮಿಸಿದ್ದ ಮಹಿಳೆಯರಿಗೆ ಶುಭವನ್ನು ಹಾರೈಸಿ ಪ್ರತಿಯೊಬ್ಬ ಮಹಿಳೆಯೂ ಇದರ ಲಾಭ ಪಡೆದು ಕೊಳ್ಳುವಂತೆ ತಿಳಿಸಿದರು. ಈ ಸಂದ​ರ್ಭ​ದಲ್ಲಿ ಕೆಲವು ಮಹಿಳೆಯರಿಗೆ ನೋಂದಣಿ ಪತ್ರವನ್ನೂ ವಿತರಿಸಿದರು.