ರಾಜ್ಯ ಸಚಿವ ಸಂಪುಟ ವಿಸ್ತರಣೆ: ಡಿಸಿಎಂ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ
* ರಮೇಶ್ ಸಮಾಧಾನ ಆಗಿರೋದು ಒಳ್ಳೆ ಬೆಳವಣಿಗೆ
* ಯತ್ನಾಳ್ ದೆಹಲಿ ಪ್ರವಾಸದ ಬಗ್ಗೆ ಪಕ್ಷದ ವರಿಷ್ಠರು ಗಮನಹರಿಸುತ್ತಾರೆ
* ಸುಮಲತಾ ಮತ್ತು ಕುಮಾರಸ್ವಾಮಿ ವಿಚಾರದ ಬಗ್ಗೆ ನಾವು ಮಾತಾಡೋದು ಸೂಕ್ತವಲ್ಲ
ಹುಬ್ಬಳ್ಳಿ(ಜು.12): ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಮಂತ್ರಿ ಮಂಡಲ ವಿಸ್ತರಣೆ ಇಲ್ಲ ಅಂತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರ ಮಾಡುವ ಅಗತ್ಯತೆ ಸದ್ಯಕ್ಕೆ ಇಲ್ಲ ಅಂತ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಇಂದು(ಸೋಮವಾರ) ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮಲತಾ ಮತ್ತು ಕುಮಾರಸ್ವಾಮಿ ಇಬ್ಬರೂ ಟ್ರೂಸ್ ಮಾಡಿಕೊಂಡಿದ್ದಾರೆ. ಶಾಂತಿ ಮಾಡಿಕೊಂಡಿದ್ದಾರೆ, ಪರಸ್ಪರ ಟೀಕೆ ಮಾಡಲ್ಲ ಎಂದಿದ್ದಾರೆ. ಹೀಗಾಗಿ ಅವರ ವಿಚಾರವನ್ನ ನಾವು ಮಾತಾಡೋದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲೂ ಸಂಪುಟ ಪುನರ್ ರಚನೆ: ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು
ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲ್ಲ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಡಿಸಿಎಂ, ರಮೇಶ್ ಅವರು ಸಮಾಧಾನ ಆಗಿರೋದು ಒಳ್ಳೆ ಬೆಳವಣಿಗೆಯಾಗಿದೆ. ಯತ್ನಾಳ್ ದೆಹಲಿ ಪ್ರವಾಸದ ಬಗ್ಗೆ ಪಕ್ಷದ ವರಿಷ್ಠರು ಗಮನಹರಿಸುತ್ತಾರೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಯಾವ ರೀತಿಯಾಗಿ ಅನುಷ್ಠಾನ ಮಾಡಬೇಕು ಎಂಬುದರ ಬಗ್ಗೆ ಮಾತನಾಡಿದ ಸಚಿವರು, ಈ ಸಂಬಂಧ ಪ್ರಮುಖ ಸಂಸ್ಥೆಗಳ ಜೊತೆ ಮಾತುಕತೆ ನಡೆಯಲಿದೆ. ಈ ಭಾಗದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಅಗಬೇಕು ಅನ್ನೋ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ. ಕೌಶಲ್ಯತೆಯನ್ನ ಯಾವ ರೀತಿ ಬೆಳೆಸಬೇಕು ಅಂತ ಮಾತುಕತೆ ನಡೆಸಿದ್ದೇವೆ. ಸೈನ್ಸ್ ಕೇಂದ್ರಗಳಿಗೆ ಭೇಟಿ ನೀಡಿ ಅವರ ಜೊತೆ ಚರ್ಚೆ ಮಾಡಲಿದ್ದೇವೆ. ಸೈನ್ಸ್ ಆಂಡ್ ಟೆಕ್ನಾಲಜಿ ಇಲಾಖೆಯಿಂದ ಕಿಟ್ಗಳ ವಿತರಣೆ ಕಾರ್ಯ ಮಾಡಲಿದ್ದೇವೆ ಎಂದು ಹೇಳಿದ್ದಾರೆ.