ಕೊರೋನಾ ಡ್ಯೂಟಿಗೆ ಬರದವರಿಗೆ ನೋಟಿಸ್, ಬೆಡ್ ನೀಡದ ದೊಡ್ಡಾಸ್ಪತ್ರೆಗೂ ತಕ್ಕ ಶಾಸ್ತಿ
ಕೋವಿಡ್ ಕರ್ತವ್ಯಕ್ಕೆ ಗೈರು 3 ಸಾವಿರ ಸಿಬ್ಬಂದಿಗೆ ನೋಟಿಸ್/ ಡಿಸಿಎಂ ಅಶ್ವತ್ಥನಾರಾಯಣ ನಾರಾಯಣ ಕಠಿಣ ಕ್ರಮ / ಬೆಡ್ ಕೊಡದ ಖಾಸಗಿ ಆಸ್ಪತ್ರೆಗಳಿಗೆ ಮತ್ತೊಂದು ಎಚ್ಚರಿಕೆ
ಬೆಂಗಳೂರು(ಆ. 07) ಬಿಬಿಎಂಪಿ ಪಶ್ಚಿಮ ವಲಯದ ಕೋವಿಡ್ ಪರಿಸ್ಥಿತಿಯನ್ನು ಶುಕ್ರವಾರ ಅವಲೋಕಿಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಕರ್ತವ್ಯಕ್ಕೆ ಗೈರಾದ ಮೂರು ಸಾವಿರ ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಪಶ್ಚಿಮ ವಲಯಕ್ಕೆ 6,500 ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರಲ್ಲಿ ಮೂರು ಸಾವಿರ ಮಂದಿ ಬಂದಿಲ್ಲ. ಹೀಗಾಗಿ ವಲಯದ ಕೋವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಘೊಷ್ ಅವರು ನೋಟಿಸ್ ಕೊಟ್ಟಿದ್ದಾರೆ. ಅದರಲ್ಲಿ 700 ಮಂದಿ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರಿ ನೌಕರರು ಕೂಡ ಇದರಲ್ಲಿ ಸೇರಿದ್ದಾರೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಸಿಬ್ಬಂದಿ ಕೊರತೆಯಿಂದಾಗಿ ಶಂಕಿತ ರೋಗಿಗಳ ಗಂಟಲು ದ್ರವದ ಮಾದರಿ ಸಂಗ್ರಹ ಹೆಚ್ಚು ಪ್ರಮಾಣದಲ್ಲಿ ಮಾಡಲು ಕಷ್ಟ ಆಗುತ್ತಿದೆ. ಹೀಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಕಾಲೇಜು ಶಿಕ್ಷಣ ಇಲಾಖೆಯಿಂದ ಒದಗಿಸುವಂತೆ ಆಯುಕ್ತರಾದ ಪಿ.ಪ್ರದೀಪ್ ಅವರಿಗೆ ಸೂಚಿಸಿದರು. ಲ್ಯಾಬ್ಟೆಕ್ನಿಷಿಯನ್ ಗಳ ಕೊರತೆ ಕೂಡ ಇದ್ದು ಪರ್ಯಾಯ ವ್ಯವಸ್ಥೆ ಗೆ ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಖಾಸಗಿ ಆಸ್ಪತ್ರೆಗೆ ಖುದ್ದು ಹೋಗಿ ಮಾತನಾಡಿ: ಕೆಲವು ಖಾಸಗಿ ಆಸ್ಪತ್ರೆಗಳು ನಿಗದಿ ಪ್ರಕಾರ ಬೆಡ್ ಕೊಡುತ್ತಿಲ್ಲ ಎನ್ನುವ ಆರೋಪಗಳು ಇದ್ದು ಈ ಬಗ್ಗೆ ಅಧಿಕಾರಿಗಳು ಖುದ್ದು ಹೋಗಿ ಪರಿಶೀಲಿಸಬೇಕು. ತಪ್ಪು ಎಸಗಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದರು.
ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಜತೆ ಸಭೆ ನಡೆಸಿದ್ದರ ಬಗ್ಗೆ ಘೋಷ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿದರು. ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳು ನಿಗದಿಯಂತೆ ಬೆಡ್ ಗಳನ್ನು ನೀಡುತ್ತಿಲ್ಲ ಎನ್ನುವ ದೂರುಗಳು ಬಂದಿದ್ದು ಅದರ ಪರಿಶೀಲನೆಗೂ ಡಿಸಿಎಂ ಸೂಚಿಸಿದರು.