Asianet Suvarna News Asianet Suvarna News

ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಿಸುವಲ್ಲಿ ಉತ್ತರ ಕನ್ನಡ ರಾಜ್ಯಕ್ಕೆ ಮಾದರಿ

ಜಿಲ್ಲಾಡಳಿತ ಪ್ರಮುಖವಾಗಿ ಕೋವಿಡ್‌ -19 ಸಮುದಾಯಕ್ಕೆ ಹರಡದಂತೆ ಹಾಗೂ ಸೋಂಕಿತರ ಮರಣವಾಗದಂತೆ ಚಿಕಿತ್ಸೆ ನೀಡುವ ಬಗ್ಗೆ ಹೆಚ್ಚಿನ ಗಮನ ನೀಡಿದೆ| ನಿರಂತರವಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತಿದೆ| ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಮಾಹಿತಿ| 

DC K Harishkumar Talks Over Prevent of Coronavirus in Uttara Kannada District
Author
Bengaluru, First Published Aug 19, 2020, 11:32 AM IST

ಕಾರವಾರ(ಆ.19): ಉತ್ತರ ಕನ್ನಡ ಜಿಲ್ಲೆಯ ನಾಗರಿಕರು ಲಾಕ್‌ಡೌನ್‌ ನಿಯಮಗಳನ್ನು ಹಾಗೂ ಅನ್‌ಲಾಕ್‌ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿರುವುದರಿಂದ ಜಿಲ್ಲೆಯಲ್ಲಿ ಸೋಂಕು ಹರಡುವುದನ್ನು ಬಹುತೇಕ ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಹೇಳಿದ್ದಾರೆ. 

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಜಿಲ್ಲಾಡಳಿತ ಪ್ರಮುಖವಾಗಿ ಕೋವಿಡ್‌ -19 ಸಮುದಾಯಕ್ಕೆ ಹರಡದಂತೆ ಹಾಗೂ ಸೋಂಕಿತರ ಮರಣವಾಗದಂತೆ ಚಿಕಿತ್ಸೆ ನೀಡುವ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದ್ದು, ನಿರಂತರವಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತಿದೆ ಎಂದರು.

ಕೊರೋನಾ ವೈರಸ್ ಮುಕ್ತ ಜಿಲ್ಲೆಗೆ ಉಚಿತ ಔಷಧ

ರಾಜ್ಯದಲ್ಲೇ ಅತ್ಯಂತ ಕಡಿಮೆ ಅಂದರೆ ಶೇ. 5-6 ರಷ್ಟು ಸೋಂಕು ಉತ್ತರ ಕನ್ನಡದಲ್ಲಿ ಪತ್ತೆಯಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 46,406 ಜನರ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೇವಲ 3368 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ. ಇವರಲ್ಲಿ 2420 ಜನರು ಸಂಪೂರ್ಣ ಗುಣಮುಖರಾಗಿದ್ದು, 33 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯು ಕೋವಿಡ್‌-19 ಸೋಂಕನ್ನು ಸಮರ್ಥವಾಗಿ ನಿಭಾಯಿಸಿ ಮಾದರಿಯಾಗಿದೆ ಎಂದರು.

ಈ ಯಶಸ್ಸಿಗೆ ಕಾರಣೀಕರ್ತರಾದ ಜಿಲ್ಲೆಯ ಜನರಿಗೆ, ಜನ ಪ್ರತಿನಿಧಿಗಳಿಗೆ, ವೈದ್ಯರು, ಶುಶ್ರೂಷಕರಿಗೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್‌, ಕಂದಾಯ, ಪಂಚಾಯತರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಗರಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿಗೆ ಅಭಿನಂದಿಸಿದರು.

ಮುಂದಿನ ದಿನಗಳಲ್ಲಿ ಗಣೇಶ ಚತುರ್ಥಿ ಹಾಗೂ ಇತರೇ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಜಿಲ್ಲೆಯ ನಾಗರಿಕರು ಈ ಹಿಂದಿನಂತೆಯೇ ಸಾಮಾಜಿಕ ಅಂತರ, ವೈಯುಕ್ತಿಕ ಸ್ವಚ್ಛತೆ ಹಾಗೂ ಉತ್ತಮ ಆರೋಗ್ಯವನ್ನು ಕಾಯ್ದುಕೊಂಡು, ಕೋವಿಡ್‌ -19 ಅನ್‌ಲಾಕ್‌ ಮಾರ್ಗಸೂಚಿಯ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಜಿಲ್ಲೆಯನ್ನು ಕೊರೋನಾ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಲು ಕೋರಿದರು.
 

Follow Us:
Download App:
  • android
  • ios