ನಿವೇಶನ ನಿರ್ಮಿಸಿಕೊಳ್ಳಲು 5 ಎಕರೆ ಜಮೀನು : ಸುಸಜ್ಜಿತ ಮನೆಗೆ ಮನವಿ
ಸುಜ್ಜಿತ ಮನೆ ನಿರ್ಮಾಣ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸರ್ಕಾರದಿಂದ 5 ಎಕರೆ ಜಮೀನು ಮೀಸಲಿಡಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.
ಶಿರಾ (ಆ.21): ಪೌರ ಕಾರ್ಮಿಕರಿಗೆ ನಿವೇಶನಗಳ ಉದ್ದೇಶಕ್ಕಾಗಿ 5 ಎಕರೆ ಸರಕಾರಿ ಜಮೀನನ್ನು ಮೀಸಲಿಡಬೇಕೆಂದು ಒತ್ತಾಯಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ಉಪ-ತಹಶೀಲ್ದಾರ್ ಕಮಲಮ್ಮ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಡಿಎಸ್4 ತಾಲೂಕು ಸಂಚಾಲಕ ಟೈರ್ ರಂಗನಾಥ್ ಮಾತನಾಡಿ, ನಗರಸಭೆಯಲ್ಲಿ ಸುಮಾರು 80 ಪೌರಕಾರ್ಮಿಕರು ಹಲವಾರು ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಯಾವುದೇ ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಕೆಲವರು ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದಾರೆ. ಹಾಗೂ ಗ್ರಾಮೀಣ ಪ್ರದೇಶಗಳಿಂದಲೂ ಸಹ ಹಲವು ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೋದಿ ಮಹತ್ವಾಕಾಂಕ್ಷಿ ಯೋಜನೆ : ಶೀಘ್ರ ನಿವೇಶನ ಭಾಗ್ಯ...
ದಿನ ನಿತ್ಯ ಬೆಳಗಿನ ಜಾವ 4 ಗಂಟೆಯಿಂದ ಕೆಲಸ ಮಾಡಿ ನಗರದ ಸ್ವಚ್ಛತೆ ಮಾಡುತ್ತಾರೆ. ಇವರಿಗೆ ಇದುವರೆಗೂ ಸ್ವಂತ ನಿವೇಶನವಿಲ್ಲ. ಹಲವಾರು ಬಾರಿ ಶಾಸಕರಿಗೆ, ಉಸ್ತುವಾರಿ ಸಚಿವರಿಗೆ, ಸಂಸದರಿಗೂ ಮನವಿ ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೌರಕಾರ್ಮಿಕರಿಗಾಗಿಯೇ 5 ಎಕರೆ ಜಮೀನನ್ನು ಸರಕಾರ ಮೀಸಲಿಟ್ಟು ಅವರಿಗೆ ನಿವೇಶನ ಒದಗಿಸಬೇಕು. ಪೌರಕಾರ್ಮಿಕರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಬೇಕು. 30*40 ವಿಸ್ತೀರ್ಣ ಅಳತೆಯ ನಿವೇಶನ ನೀಡಬೇಕು. ಕೊವಿಡ್-19 ಹಿನ್ನೆಲೆಯಲ್ಲಿ ಎಲ್ಲಾ ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಸಲಕರಣೆಗಳನ್ನು ನೀಡಬೇಕು.
ಸೀಲ್ಡೌನ್ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಪಿಪಿಇ ಕಿಟ್ ಅನ್ನು ವಿತರಿಸಬೇಕು. ಕೆಲಸದಿಂದ ಮನೆಗೆ ಹಿಂತಿರುಗುವ ಮುನ್ನ ಬಿಸಿನೀರು ಸ್ನಾನಕ್ಕೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಪೌರಕಾರ್ಮಿಕರಿಗೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ಹಾಗೂ ಸುರಕ್ಷತಾ ಸಲಕರಣೆಗಳನ್ನು ನೀಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನೀಡಿ ಅವಶ್ಯಕ ಔಷಧಿಗಳನ್ನು ವಿತರಿಸಬೇಕೆಂದು ಒತ್ತಾಯಿಸಿದರು.