ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ದುರುದ್ದೇಶ ಪೂರ್ವಕವಾಗಿ ರಚಿಸಿರುವ ಟಿಪ್ಪು ಕುರಿತ ನಾಟಕವನ್ನು ವಿರೋಧಿಸುವುದಾಗಿ ದಲಿತ ಮಹಾಸಭಾ ಅಧ್ಯಕ್ಷ ಎಸ್‌. ರಾಜೇಶ್‌ ತಿಳಿಸಿದರು

ಮೈಸೂರು (ನ.17) : ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ದುರುದ್ದೇಶ ಪೂರ್ವಕವಾಗಿ ರಚಿಸಿರುವ ಟಿಪ್ಪು ಕುರಿತ ನಾಟಕವನ್ನು ವಿರೋಧಿಸುವುದಾಗಿ ದಲಿತ ಮಹಾಸಭಾ ಅಧ್ಯಕ್ಷ ಎಸ್‌. ರಾಜೇಶ್‌ ತಿಳಿಸಿದರು. ಟಿಪ್ಪು ಸಮಾನತೆ, ಮಹಿಳಾ ಸ್ವಾತಂತ್ರ್ಯ, ಸರ್ವರಿಗೂ ಸಮಾನ ಬದುಕು ನೀಡಿದ ಸಾಮಾಜಿಕ ಸಮಾನತೆಯ ಪ್ರತಿಪಾದಕನಾಗಿದ್ದ. ಆತನ ಪ್ರತಿಮೆ ನಿರ್ಮಾಣಕ್ಕೆ ನಮ್ಮ ಬೆಂಬಲವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಒಂದು ವೇಳೆ ಕಲಾಮಂದಿರದಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶಿಸಿದರೆ ಕಲಾಮಂದಿರಕ್ಕೆ ಮುತ್ತಿಗೆ ಹಾಕಲಾಗುವುದು. ಇದು ಟಿಪ್ಪು ಸುಲ್ತಾನ್‌ ಅವರು ಹೊಂದಿದ್ದ ಭಾರತ ದೇಶವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡುಗಡೆಗೊಲಿಸಬೇಕು ಎಂಬ ನಿಜವಾದ ಕನಸನ್ನು ಆತ ನನಸು ಮಾಡಲು ಹೋರಾಟ ನಡೆಸಿದ, ಆತನ ರಾಷ್ಟ್ರಪ್ರೇಮಕ್ಕೆ ಮಸಿ ಬಳಿಯುವ ಕೆಲಸವನ್ನು ಈ ನಾಟಕದಲ್ಲಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

‘ಟಿಪ್ಪು ನಿಜಕನಸು ನಾಟಕ’ ವಿರುದ್ಧ ಕಾನೂನು ಹೋರಾಟ; ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಟಿಪ್ಪು ವಿವಿ: ಇಬ್ರಾಹಿಂ

ಟಿಪ್ಪು ಮುಖ ವಿಕಾರಗೊಳಿಸಿ, ಆತ ಪರ್ಷಿಯನ್‌ ಎಂದು ಬಿಂಬಿಸಲಾಗಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಈ ನಾಟಕ ಪ್ರದರ್ಶನ ಮತ್ತು ಪುಸ್ತಕವನ್ನು ಪ್ರಸಾರವನ್ನು ತಡೆಯಬೇಕು. ಇದು ಅಡ್ಡಂಡ ಕಾರ್ಯಪ್ಪ ಅವರ ಸುಳ್ಳು ಕನಸಿನ ಚಿತ್ರಣ ಎಂದು ಅವರು ದೂರಿದರು.

ಅಲ್ಲದೆ ಗುಂಬಜ್‌ ಮಾದರಿಯಲ್ಲಿ ನಗರದ ವಿವಿಧೆಡೆ ನಿರ್ಮಿಸಿರುವ ಬಸ್‌ ನಿಲ್ದಾಣ ತೆರವುಗೊಳಿಸುವುದಾಗಿ ಹೇಳಿರುವ ಸಂಸದ ಪ್ರತಾಪ ಸಿಂಹ ಹೇಳಿಕೆಯನ್ನು ಖಂಡಿಸುವುದಾಗಿ ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸೈಯದ್‌ ಫಾರೂಕ್‌, ರಾಮಕೃಷ್ಣ, ಇರ್ಫಾನ್‌ ಅನ್ನುಭಾಯ…, ರಸೂಲ್‌ ಮೊದಲಾದವರು ಇದ್ದರು.

ಟಿಪ್ಪು ಕುರಿತ ನಾಟಕದಲ್ಲಿ ಸುಳ್ಳುಗಳೇ ತುಂಬಿದೆ: ಆರೋಪ

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಟಿಪ್ಪು ಕುರಿತ ನಾಟಕದಲ್ಲಿ ಸುಳ್ಳುಗಳೇ ಇದ್ದು, ಸಮಾಜದಲ್ಲಿ ಶಾಂತಿ ಕದಡುವ ಯತ್ನವಾಗಿದೆ ಎಂದು ಮೈಸೂರು ನಗರ ಯುವ ಸಂಘಟನೆಗಳ ಒಕ್ಕೂಟ ಆರೋಪಿಸಿದೆ. ನಾಟಕ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಕೋರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಈ ನಾಟಕ ರಚಿಸಲಾಗಿದೆ ಎಂದು ಒಕ್ಕೂಟದ ಮುಖಂಡ ರಫೀಕ್‌ ಅಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.

ಟಿಪ್ಪು ಜಯಂತಿ ಮಾಡಿದ್ದೇ ದೊಡ್ಡ ತಪ್ಪು: ಸಿಎಂ ಇಬ್ರಾಹಿಂ ಹೀಗೆ ಹೇಳಿದ್ಯಾಕೆ?

ಜೊತೆಗೆ, ಟಿಪ್ಪುವನ್ನು ರಾಜನಾಗಿ ಮಾತ್ರ ನೋಡಬೇಕು. ಆದರೆ ನಾಟಕದಲ್ಲಿ ಲೂಟಿಕೋರ, ಮತಾಂಧ ಎಂದು ಬಿಂಬಿಸಿದ್ದಾರೆ. ಟಿಪ್ಪುವಿನ ಒಳ್ಳೆಯ ಕೆಲಸ ನಿರ್ಲಕ್ಷಿಸಿದ್ದಾರೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಈ ನಾಟಕ ರಚಿಸಲಾಗಿದೆ ಎಂದು ಅವರು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಜೀದ್‌ ಹಿನಾಯತ್‌, ಮೊಹಮ್ಮದ್‌ ಅಬ್ರಾರ್‌, ಸೈಯದ್‌ ರಿಜ್ವಾನ್‌ ಇದ್ದರು.