ದಲಿತ ಮುಖ್ಯಮಂತ್ರಿ ವಿಷಯ ಈಗ ಅಪ್ರಸ್ತುತ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ದಲಿತ ಮುಖ್ಯಮಂತ್ರಿ ಸಾಧ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

 ಮೈಸೂರು (ಡಿ.15): ದಲಿತ ಮುಖ್ಯಮಂತ್ರಿ ವಿಷಯ ಈಗ ಅಪ್ರಸ್ತುತ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ದಲಿತ ಮುಖ್ಯಮಂತ್ರಿ ಸಾಧ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರು (Dalit CM) ಮುಖ್ಯಮಂತ್ರಿ ಆಗಬೇಕಿದ್ದರೆ ಅದು ಕಾಂಗ್ರೆಸ್‌ನಿಂದ (Congress) ಮಾತ್ರ ಸಾಧ್ಯ. ಉಳಿದ ಯಾವ ಪಕ್ಷದಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಯಾವ ಬಣಗಳಿಲ್ಲ. ನಾವೆಲ್ಲಾ ಒಂದೇ. ನಮ್ಮದು ಕಾಂಗ್ರೆಸ್‌ ಬಣ ಎಂದು ಹೇಳಿದರು.

ಎಸ್ಸಿ, ಎಸ್ಟಿಸಹಕಾರ ನೀಡಿದರೆ ಅಧಿಕಾರ:

ಎಸ್ಸಿ, ಎಸ್ಟಿಜನರು ಒಟ್ಟಾಗಿ ಕಾಂಗ್ರೆಸ್‌ಗೆ ಸಹಕಾರ ನೀಡಿದರೆ ಅಧಿಕಾರ ಪಡೆಯಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರ ಪ.ಜಾತಿ, ಪ.ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ತೀರ್ಮಾನ ಕೈಗೊಂಡಿರುವುದಾಗಿ ಹೇಳುತ್ತ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಯಾವ ಕಾನೂನಿನ ಅಡಿ ಮೀಸಲು ಹೆಚ್ಚಿಸಿದ್ದಾರೆ. ಮೊದಲಿಗೆ ರಾಜ್ಯದ ವಿಧಾನಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಂಡು, ನಂತರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಆದರೆ ಯಾವುದೇ ಚರ್ಚೆ ತೀರ್ಮಾನ ಕೈಗೊಳ್ಳದೆ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ಟೀಕಿಸಿದರು.

Assembly election: ಗೆದ್ದವರು, ಸೋತವರ ನಡುವೆಯೇ ಮತ್ತೆ ಕದನ!

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಿಗದಿತ ಕಾಲಮಿತಿಯಲ್ಲಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ಸಮಾವೇಶದಲ್ಲಿ ಪ್ರಸ್ತಾಪಿಸುತ್ತೇವೆ. ಪ್ರಣಾಳಿಕೆಯಲ್ಲೂ ಸೇರಿಸುತ್ತೇವೆ ಎಂದು ಪರಮೇಶ್ವರ್‌ ಭರವಸೆ ನೀಡಿದರು.

ರಾಜ್ಯ ಸರ್ಕಾರ ಮೀಸಲು ಹೆಚ್ಚಿಸಲು ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಅನುಮೋದಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಲೋಕಸಭೆ, ರಾಜ್ಯ ಸಭೆಯಲ್ಲಿ ಒಪ್ಪಿಗೆ ದೊರೆತು ಶೆಡ್ಯೂಲ್ಡ್‌ 9ಕ್ಕೆ ತಿದ್ದುಪಡಿ ಮಾಡಬೇಕು. ಆದರೆ, ಲೋಕಸಭೆಯ ಅಧಿವೇಶನದಲ್ಲಿ ಕಾನೂನು ಸಚಿವರು ಮೀಸಲು ಶೇ.50ಕ್ಕಿಂತ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Ground Report : ದಾವಣಗೆರೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನೇರ ಫೈಟ್: ಟಿಕೆಟ್ ಕಸರತ್ತು ಜೋರು

ಪರಿಸ್ಥಿತಿ ಹೀಗಿರುವಾಗಯಾವ ಆಧಾರದ ಮೇಲೆ ಆಶ್ವಾಸನೆ ಕೊಡುತ್ತಿದ್ದಾರೆ. ಯಾವ ರೀತಿ ಕಾರ್ಯಾಗತ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಡಬಲ್‌ ಎಂಜಿನ್‌ ಸರ್ಕಾರಕ್ಕೆ ದಲಿತರ ಬಗ್ಗೆ ಕಳಕಳಿ ಇದ್ದರೆ ಕೂಡಲೇ ಶೆಡ್ಯೂಲ್ಡ್‌ 9ಕ್ಕೆ ತಿದ್ದುಪಡಿ ತರಬೇಕು ಎಂದು ಅವರು ನುಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮಾತನಾಡಿ, ಚಿತ್ರದುರ್ಗದಲ್ಲಿ ನಡೆಯಲಿರುವ ಎಸ್ಸಿ, ಎಸ್ಟಿಐಕ್ಯತಾ ಸಮಾವೇಶದಲ್ಲಿ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಪರಿಶಿಷ್ಟಜಾತಿ, ಪಂಗಡದ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿ ಇದ್ದರೆ ಅಭಿವೃದ್ಧಿಯ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಸಿದ್ದರಾಮಯ್ಯ ಸರ್ಕಾರ ಎಸ್ಸಿ, ಎಸ್ಟಿಕಲ್ಯಾಣಕ್ಕೆ ಕೊಟ್ಟಅನುದಾನ ಮತ್ತು ಬಿಜೆಪಿ ಸರ್ಕಾರದ ಕೊಟ್ಟಅನುದಾನದ ಹೋಲಿಕೆ ಮಾಡಿ ಶ್ವೇತ ಪತ್ರ ಹೊರಡಿಸಬೇಕು. ದಲಿತ ಸಮುದಾಯಕ್ಕೆ ಯಾವುದೇ ಅನುದಾನ ಕೊಡದೇ ಅನ್ಯಾಯ ಮಾಡಿದೆ. ಎಸ್ಸಿ, ಎಸ್ಟಿಸಮುದಾಯದ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿ ಸರ್ಕಾರಕ್ಕೆ ಇಲ್ಲ ಎಂದರು.

ಟಿಕೆಟ್‌ಗೆ ಜಾತಿ ಗೌಣವೇ

ಟಿಕೆಟ್‌ ಫೈಟ್‌: ವಿಜಯನಗರ

- ಕೃಷ್ಣ ಎನ್‌.ಲಮಾಣಿ

ನೂತನ ವಿಜಯನಗರ ಜಿಲ್ಲೆಯ ರಾಜಕೀಯ ಇತಿಹಾಸ ತೆರೆದರೆ ಮೊದಲು ಬಳ್ಳಾರಿ ಜಿಲ್ಲೆಯ ರಾಜಕಾರಣದ ಚರಿತ್ರೆಯತ್ತ ಕಣ್ಣುಹಾಯಿಸಬೇಕು. ಮಂಡಕ್ಕಿ, ಮಂಡಾಳು ತಿಂದು ರಾಜಕಾರಣ ಮಾಡುತ್ತಿದ್ದ ನೆಲದಲ್ಲಿ ಗಣಿ ದುಡ್ಡು ಹರಿದಾಡಿದ ಬಳಿಕ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮೀಸಲು ಕ್ಷೇತ್ರಗಳು. ಇನ್ನು ವಿಜಯನಗರ ಹಾಗೂ ಹರಪನಹಳ್ಳಿ ಸಾಮಾನ್ಯ ಕ್ಷೇತ್ರಗಳು. ಈ ಹಿಂದೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಪೈಪೋಟಿ ನಡೆಯುತ್ತಿತ್ತು. ಆದರೆ ಇದೀಗ ಜೆಡಿಎಸ್‌ ಶಕ್ತಿಗುಂದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಕದನ ಕುತೂಹಲ ಏರ್ಪಟ್ಟಿದೆ. ಜಿಲ್ಲೆಯ ಎಲ್ಲಾ ಚುನಾವಣೆಯಲ್ಲಿ ಬಹುತೇಕ ಗಣಿದುಡ್ಡಿನದ್ದೇ ದರ್ಬಾರ್‌ ನಡೆಯುತ್ತಾ ಬಂದಿರುವುದರಿಂದ ಜಾತಿ ಲೆಕ್ಕಾಚಾರ ಗೌಣವಾಗಿದ್ದು, ಸಂಘಟನೆ ಮತ್ತು ಸಂಪನ್ಮೂಲವೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆಯೇ ಈ ಬಾರಿಯೂ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ವಿಜಯನಗರ: ಆನಂದ್‌ ಸಿಂಗ್‌ ಎದುರು ಕಾದಾಟಕ್ಕೇ ಕಾದಾಟ

ವಿಜಯನಗರ ಕ್ಷೇತ್ರ ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆ. ಈಗ ಸದ್ಯ ಬಿಜೆಪಿ ಇಲ್ಲಿ ಪ್ರಾಬಲ್ಯ ಮೆರೆಯುತ್ತಿದೆ. ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ 2008ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2008 ಹಾಗೂ 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಅವರು, 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರ್ಪಡೆಯಾದರು. ತದನಂತರ ನಡೆದ ಉಪ ಚುನಾವಣೆಯಲ್ಲಿ ಕಮಲದ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು, ಮಂತ್ರಿಯಾಗಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಗವಿಯಪ್ಪ ಅವರು ಈ ಬಾರಿ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಇವರ ಜತೆಗೆ ಇನ್ನೂ ಹತ್ತಕ್ಕೂ ಹೆಚ್ಚು ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಸಿರಾಜ್‌ ಶೇಖ್‌ ಹಾಗೂ ಮುಖಂಡರಾದ ರಾಜಶೇಖರ್‌ ಹಿಟ್ನಾಳ, ಇಮಾಮ್‌ ನಿಯಾಜಿ ಇವರಲ್ಲಿ ಪ್ರಮುಖರು. ಆನಂದ ಸಿಂಗ್‌ ಪ್ರಭಾವಿ ವ್ಯಕ್ತಿ. ಹೀಗಾಗಿ ‘ಸಂಪನ್ಮೂಲ’ ಸುರಿಯುವವರಿಗೆ ಕೈ ಹೈಕಮಾಂಡ್‌ ಮಣೆ ಹಾಕಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಜೆಡಿಎಸ್‌ನಲ್ಲಿ ಪಕ್ಷದ ರಾಜ್ಯ ವಕ್ತಾರ ನೂರ್‌ ಅಹಮದ್‌, ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್‌ ಆಕಾಂಕ್ಷಿಗಳು. ಆಮ್‌ ಆದ್ಮಿ ಪಕ್ಷದಿಂದ ಶಂಕರದಾಸ್‌, ಕಿಚಡಿ ಕೊಟ್ರೇಶ್‌ ಅವರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಅದೇ ರೀತಿ ಎಸ್‌ಡಿಪಿಐ, ಕೆಆರ್‌ಎಸ್‌, ಸಿಪಿಐಎಂ ಪಕ್ಷಗಳೂ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿವೆ.