ಭಗವಂತ ಖೂಬಾ ಅವರ ಮೇಲೆ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದವರ ಕೇಸ್ ವಾಪಸ್ ಪಡೆದು ಸರ್ಕಾರ ಏನು ಸಂದೇಶ ನೀಡುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರು (ಮೇ.24): ಕಲಬುರಗಿಯ ಆಳಂದದಲ್ಲಿ ಸಂಸದರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಪೊಲೀಸರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಈ ಕಾಂಗ್ರೆಸ್‌ ಸರ್ಕಾರ ಸಮಾಜಕ್ಕೆ ಯಾವ ಸಂದೇಶ ನೀಡುವುದಕ್ಕೆ ಹೊರಟಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

Add Asianetnews Kannada as a Preferred SourcegooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಆಳಂದದ ರಾಘವ ಚೈತ್ಯನ್ಯರ ಬೃಂದಾವನದಲ್ಲಿ ಪೂಜೆಗೆ ಹೋದ ವೇಳೆ ಪೊಲೀಸ್‌ ಅಧಿಕಾರಿ, ಆಗಿನ ಸಂಸದ ಭಗವಂತ ಖೂಬಾ ಅವರ ಮೇಲೆ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದವರ ಕೇಸ್ ವಾಪಸ್ ಪಡೆದು ಸರ್ಕಾರ ಏನು ಸಂದೇಶ ನೀಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಒಂದು ಸಮುದಾಯಕ್ಕೆ ನೀವು ಏನು ಬೇಕಾದರೂ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ನೀತಿಯನ್ನು ಕಾಂಗ್ರೆಸ್‌ ಅನು ಸರಿಸುತ್ತಿದೆ. ಕಮ್ಯುನಲ್- ಮತ್ತು ಕ್ರಿಮಿನಲ್ ಗಳಿಗೆ ರಕ್ಷಣೆ ನೀಡುವ ಕಾಂಗ್ರೆಸ್ ನೀತಿಯು ಸಮಾಜ ಘಾತುಕ ಮತ್ತು ಅಪಾಯಕಾರಿ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ರೈತರು, ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆದಿದ್ದರೆ ಪ್ರಶ್ನೆ ಮಾಡುತ್ತಿರಲಿಲ್ಲ.

ರಾಷ್ಟ್ರಘಾತಕ ನೀತಿ

ಯಾವುದೇ ಚಳುವಳಿ ಕೇಸ್ ವಾಪಸ್ ಪಡೆಯುವುದು ಬೇರೆ, ಗಂಭೀರ ಪ್ರಕರಣದಲ್ಲಿ ಬೆಂಕಿ ಹಾಕಿ, ದೊಣ್ಣೆ ಹಿಡಿದ ಕೇಸ್ ಗಳನ್ನು ವಾಪಾಸ್‌ ಪಡೆಯುವುದು ಬೇರೆ. ರಾಜ್ಯ ಸರ್ಕಾರ ನೆಪ ಮಾತ್ರಕ್ಕೆ ಹೋರಾಟಗಾರರ ಮೇಲಿನ ಕೇಸ್‌ ವಾಪಾಸ್‌ ಪಡೆದಿದೆ. ಇದು ಸರ್ಕಾರದ ಸಮಾಜ ಘಾತುಕ ಹಾಗೂ ರಾಷ್ಟ್ರಘಾತಕ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ತನ್ನ ನಿರ್ಣಯ ಹಿಂಪಡೆಯಬೇಕು. ಇಲ್ಲವಾದರೆ, ಈ ಬಗ್ಗೆ ನ್ಯಾಯಾಲಯದಲ್ಲಿ ಮತ್ತು ಸದನದಲ್ಲಿಯೂ ಪ್ರಶ್ನಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.