ಉಡುಪಿ ಜಿಲ್ಲೆಯಲ್ಲಿ ಶೇ. 30ಕ್ಕೂ ಹೆಚ್ಚಿದ್ದ ಕೊರೋನಾ ಪಾಸಿಟಿವಿಟಿ ಈಗ ಶೇ. 10ಕ್ಕಿಂತ ಕೆಳಗಿಳಿದಿದೆ ಹಳ್ಳಿಗಳಲ್ಲಿ ವೇಗವಾಗಿ ಹರಡುತ್ತಿದ್ದ ಕೊರೋನಾ ವೈರಸ್‌ಗೆ ಬ್ರೇಕ್‌ ಬಿದ್ದಿದೆ ಹಳ್ಳಿಗೆ ನಡೆದ 73 ಸರ್ಕಾರಿ ವೈದ್ಯರ ಮತ್ತು ಸಿಬ್ಬಂದಿಯಿಂದ ಮಹತ್ತರ ಸಾಧನೆ

ವರದಿ : ಸುಭಾಶ್ಚಂದ್ರ ಎಸ್‌.ವಾಗ್ಳೆ

Add Asianetnews Kannada as a Preferred SourcegooglePreferred

 ಉಡುಪಿ (ಜೂ.12): ಉಡುಪಿ ಜಿಲ್ಲೆಯಲ್ಲಿ ಶೇ. 30ಕ್ಕೂ ಹೆಚ್ಚಿದ್ದ ಕೊರೋನಾ ಪಾಸಿಟಿವಿಟಿ ಈಗ ಶೇ. 10ಕ್ಕಿಂತ ಕೆಳಗಿಳಿದಿದೆ. ಮುಖ್ಯವಾಗಿ ಹಳ್ಳಿಗಳಲ್ಲಿ ವೇಗವಾಗಿ ಹರಡುತ್ತಿದ್ದ ಕೊರೋನಾ ವೈರಸ್‌ಗೆ ಬ್ರೇಕ್‌ ಬಿದ್ದಿದೆ, ಇದರಲ್ಲಿ ಕಚೇರಿಯನ್ನು ಬಿಟ್ಟು ಹಳ್ಳಿಗೆ ನಡೆದ 73 ಸರ್ಕಾರಿ ವೈದ್ಯರ ಮತ್ತು ಸಿಬ್ಬಂದಿ ಕೊಡುಗೆ ಬಹಳ ದೊಡ್ಡದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿಯೂ ಅದನ್ನು ಜಾರಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮುತುವರ್ಜಿಯಿಂದ ಈ ಯೋಜನೆಯನ್ನು ರೂಪಿಸಿದ್ದರು.

ಹಳ್ಳಿ ಸುತ್ತುತ್ತಿರುವ ವೈದ್ಯರು, ತಗ್ಗಿದ ಕೊರೋನಾ ಸೋಂಕು..! ..

ಈ ಯೋಜನೆಯಡಿ ತಾಲೂಕು ಸರ್ಕಾರಿ ಆಸ್ಪತ್ರೆಯ, ಪ್ರಾ.ಆ.ಕೇಂದ್ರ, ಸ.ಆ.ಕೇಂದ್ರ, ನ.ಆ.ಕೇಂದ್ರಗಳ ವೈದ್ಯರು, ಸ್ವಾಬ್‌ ಸಂಗ್ರಾಹಕರು, ಗ್ರಾಮೀಣ ಕೋವಿಡ್‌ ಕಾರ್ಯಪಡೆಯ ಸದಸ್ಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ 73 ತಂಡಗಳನ್ನು ರಚಿಸಿ, ಪ್ರತ್ಯೇಕ ವಾಹನಗಳನ್ನು, ಸ್ಥಳದಲ್ಲಿಯೇ ಕೋವಿಡ್‌ ಪರೀಕ್ಷೆ ಮಾಡಿ ವರದಿ ನೀಡುವ ರಾರ‍ಯಟ್‌ ಕಿಟ್‌ಗಳನ್ನು ಒದಗಿಸಲಾಗಿತ್ತು.

ಮೇ 26ರಿಂದ ಜೂ.10ರ ವರೆಗೆ ಈ ತಂಡಗಳು ಜಿಲ್ಲೆಯ 1,174 ಗ್ರಾಮಗಳಿಗೆ ಭೇಟಿ ನೀಡಿ, 34,719 ಮಂದಿಯನ್ನು ತಪಾಸಣೆ ಮಾಡಿ, 18,105 ರಾರ‍ಯಟ್‌ ಮತ್ತು ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ 754 ಸೋಂಕಿತರನ್ನು ಪತ್ತೆ ಮಾಡಿದೆ. ಅವರಲ್ಲಿ 136 ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ, 30 ಮಂದಿಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

5 ಕೇಸ್‌ ಪತ್ತೆಯಾದ್ರೆ ಹಳ್ಳಿ ಸೀಲ್‌ಡೌನ್‌: ಸಚಿವ ಸುಧಾಕರ್‌ ...

2542 ಮಂದಿ ಐಎಲ್ಐ (ಶೀತ, ನೆಗಡಿಯಂತಹ) ಮತ್ತು ಸಾರಿ (ಉಸಿರಾಟಕ್ಕೆ ತೊಂದರೆ ಇರುವಂತಹ) ಲಕ್ಷಣ ಇರುವವರನ್ನು ಪತ್ತೆ ಮಾಡಲಾಗಿತ್ತು. ಸರ್ಕಾರ ಕೊಟ್ಟವಾಹನ ಸಂಚರಿಸಲು ರಸ್ತೆಗಳಿಲ್ಲದ ಹಳ್ಳಿಗಳ ಕಾಲು-ತೋಡು ದಾರಿಯಲ್ಲಿ, ಗದ್ದೆ ಹುಣಿ - ಓಣಿಗಳಲ್ಲಿ ನಡೆಯುತ್ತಾ ಈ ತಂಡಗಳು ಕೋವಿಡ್‌ ಸಂಕಷ್ಟದ ಈ ಕಾಲದಲ್ಲಿ ಗ್ರಾಮೀಣ ಜನಸಮುದಾಯಕ್ಕೆ ಸಲ್ಲಿಸುತ್ತಿರುವ ಸೇವೆ ಶ್ಲಾಘನಾರ್ಹವಾಗಿದೆ.