ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆಗೆ ಒತ್ತಾಯ
- ರಾಜ್ಯದಲ್ಲಿ ದಿನದಿನವೂ ಎರಿಕೆಯಾಗುತ್ತಿರುವ ಕೊರೋನಾ ಸೋಂಕು
- ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ರಾಜೀನಾಮೆಗೆ ಕೈ ಮುಖಂಡರ ಆಗ್ರಹ
- ರಾಜ್ಯದಲ್ಲಿ ಲಸಿಕೆಕೊರೆತೆಗೂ ಮುಖಂಡರ ಅಸಮಾಧಾನ
ಮೈಸೂರು(ಮೇ.14): ರಾಜ್ಯದಲ್ಲಿ ಕೊರೋನಾ ಪ್ರಕರಣ ನಿಯಂತ್ರಿಸಲು ಹಾಗೂ ಸಾವಿನ ಪ್ರಕರಣ ತಡೆಯಲು, ಜನರಿಗೆ ಆಕ್ಸಿಜನ್ ಪೂರೈಸಲು ವಿಫಲವಾಗಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸಾವಿನ ಪ್ರಕರಣಗಳು ಮಿತಿಮೀರಿದೆ. ಆರೋಗ್ಯ ಸಚಿವರ ವೈಫಲ್ಯ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ, ಆರೋಗ್ಯ ಸಚಿವರು ಲಸಿಕೆ ಇದೆ ಅಂತ ಹೇಳಿದರೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ಹೇಳಿದ್ದಾರೆ. ಆರೋಗ್ಯ ಸಚಿವರು ಯಾರು ಎನ್ನುವ ಅನುಮಾನ ಮೂಡಿದೆ. 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಕೊಡಲು ಸಾಧ್ಯವಾಗದ ಕಾರಣ ಜನರು ಪರದಾಡುತ್ತಿದ್ದಾರೆ ಎಂದು ದೂರಿದ್ದಾರೆ.
'ಬೆಂಗಳೂರಲ್ಲಿ ಸೋಂಕು 2-3 ವಾರದಲ್ಲಿ ಇಳಿಕೆ, ಇತರೆಡೆ ತೀವ್ರ ಏರಿಕೆ'
ರಾಜ್ಯದಲ್ಲಿ ವ್ಯಾಕ್ಸಿನ್, ವೆಂಟಿಲೇಟರ್, ಆಕ್ಸಿಜನ್ ಸಿಗದೆ ಜನರು ತತ್ತರಗೊಂಡಿದ್ದರೂ ಪ್ರಧಾನಮಂತ್ರಿ ನರೇಂದ್ರಮೋದಿ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದ್ದಾರೆ. ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಿಕೊಟ್ಟಕರ್ನಾಟಕಕ್ಕೆ ಮಾಡಿರುವ ದೊಡ್ಡ ದ್ರೋಹ, ಅನ್ಯಾಯವಾಗಿದೆ. ಕೊರೋನಾ 2ನೇ ಅಲೆ ಜಾಸ್ತಿಯಾಗಿ ನಿತ್ಯ 500ಕ್ಕೂ ಹೆಚ್ಚು ಸಾವು, 50 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದರೂ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಕ್ರಮ ಕೈಗೊಂಡಿಲ್ಲ. ಕರ್ನಾಟಕಕ್ಕೆ ಬೇಕಾದ ವ್ಯಾಕ್ಸಿನ್ ಕೊಡಲು ಹಿಂದೇಟು ಹಾಕಲಾಗುತ್ತಿದೆ. ಆಕ್ಸಿಜನ್ ಸಿಗದೆ ನಿತ್ಯ ಸಾವು-ನೋವು ಸಂಭವಿಸುತ್ತಿದ್ದರೂ ಈತನಕ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಸಿಲಿಂರ್ಡ ಪೂರೈಸದೆ ಇರುವುದು ಅಮಾನವೀಯ.
ಬೆಂಗಳೂರಿನಲ್ಲೂ ಬ್ಲ್ಯಾಕ್ ಫಂಗಸ್ ಪತ್ತೆ: ಆರೋಗ್ಯ ಸಚಿವರನ್ನು ಕೇಳಿದ್ರೆ ಕೊಟ್ಟ ಉತ್ತರವಿದು! ..
ರಾಜ್ಯಕ್ಕೆ 2 ಕೋಟಿ ವ್ಯಾಕ್ಸಿನ್ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದ್ದರೂ ಈತನಕ ಸರಬರಾಜು ಮಾಡಿಲ್ಲ. ಸರ್ಕಾರ ಕೇಂದ್ರ ಸರ್ಕಾರವನ್ನು ಕಾಯದೆ ನೇರವಾಗಿ ಖರೀದಿಸಿ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ಕೊಡಬೇಕು ಎಂದು ಆಗ್ರಹಿಸುತ್ತೇನೆ. ಲಾಕ್ಡೌನ್ ಜಾರಿಗೊಳಿಸಿದ್ದರೂ ಕೊರೊನಾ ಕಂಟ್ರೋಲ್ಗೆ ಬಂದಿಲ್ಲ. ದಿನಕ್ಕೊಂದು ನಿಯಮ ಜಾರಿಗೆ ತರುವುದು ,ಬದಲಿಸುವುದರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಒಂದು ರೀತಿಯಲ್ಲಿ ಗೊಂದಲಮಯ ಸರ್ಕಾರವಾಗಿದೆ. ಒಬ್ಬರಿಗೊಬ್ಬರು ಸಮನ್ವಯತೆ ಇಲ್ಲದೆ ಇರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona