ಬ್ರಿಟಿಷ್ ಕಾಲದಲ್ಲೂ, ಕರ್ಫ್ಯೂ ಇದ್ದಾಗಲೂ ಕರಗ ನಡೆದಿತ್ತು : ಈ ಬಾರಿ ನಡೆಯುತ್ತಾ..?
ಈ ಬಾರಿ ಕೊರೋನಾ ಎರಡನೆ ಅಲೆ ಭೀತಿ ಎದುರಾಗಿದ್ದು ಈ ನಿಟ್ಟಿನಲ್ಲಿ ಬೆಂಗಳೂರು ಕರಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅನುಮತಿ ಕೇಳಲು ಸಮಿತಿ ನಿರ್ಧರಿಸಿದೆ.
ಬೆಂಗಳೂರು (ಮಾ.26): ರಾಜ್ಯದಲ್ಲಿ ಮತ್ತೆ ಕೊರೋನಾ ಮಹಾಮಾರಿ ಮತ್ತೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ರಾಜ್ಯದಲ್ಲಿ ಎರಡನೆ ಅಲೆಯ ಭೀತಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪ್ರತೀ ವರ್ಷದಂತೆ ಈ ವರ್ಷ ಬೆಂಗಳೂರು ಕರಗಕ್ಕೆ ತಡೆ ನೀಡುವ ಸಾಧ್ಯತೆಯೂ ಇದೆ.
ಇದರಿಂದ ಬೆಂಗಳೂರು ಪ್ರಸಿದ್ಧ ಕರಗ ನಡೆಸಲು ಅವಕಾಶ ನೀಡುವಂತೆ ಬೆಂಗಳೂರು ಕರಗ ಉತ್ಸವ ಸಮಿತಿ ಮನವಿ ಮಾಡಲು ನಿರ್ಧರಿಸಿದೆ. ಬೆಂಗಳೂರಿನ ಕರಗ ನಿಂತರೆ ದೇಶದ ಪಾಲಿಗೆ ಅದು ಅಶುಭ ಸೂಚಕ. ಹಾಗಾಗಿ ಕರಗ ನಿಲ್ಲಿಸೋದು ಬೇಡ ಎಂದು ಮನವಿ ಮಾಡಲು ಸಮಿತಿ ನಿರ್ಧಾರ ಮಾಡಿದೆ.
ಕಳೆದ ವರ್ಷ ಸಹ ಕೊರೊನಾ ಲಾಕ್ ಡೌನ್ ಹಿನ್ನೆಲೆ ದೇವಸ್ಥಾನದ ಒಳಭಾಗದಲ್ಲೇ ತಿಗಳ ಸಮುದಾಯ ಕರಗ ನಡೆಸಿತ್ತು. ಈ ಬಾರಿ ಕೇವಲ ಸಮುದಾಯದ ಮಟ್ಟಿಗಾದರು ಕರಗ ಉತ್ಸವ ನಡೆಸುವಂತೆ ಮನವಿ ಮಾಡಲು ನಿರ್ಧರಿಸಿದೆ.
ಏಪ್ರಿಲ್ 18 ರಂದು ಕರಗ ಉತ್ಸವಕ್ಕೆ ಚಾಲನೆ ನೀಡಬೇಕಿದ್ದು, ತಿಗಳ ಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಚಾಲನೆ ದೊರೆಯಬೇಕಿದೆ. ಏಪ್ರಿಲ್ 27 ರಂದು ಧರ್ಮರಾಯ ಹಾಗೂ ದ್ರೌಪದಿ ಅಮ್ಮನವರ ಕರಗ ಮಹೋತ್ಸವ ನಡೆಸಬೇಕಿದ್ದು 29ಕ್ಕೆ ಮುಕ್ತಾಯವಾಗುತ್ತದೆ. ಆದರೆ ಈ ಬಾರಿ ಅನುಮತಿ ದೊರೆಯುವುದು ಅನುಮಾನವಾಗಿದೆ.
ಐತಿಹಾಸಿಕ ಬೆಂಗಳೂರು ಕರಗಕ್ಕೆ ಹೈಕೋರ್ಟ್ ಬ್ರೇಕ್: ಸರ್ಕಾರಕ್ಕೆ ಮುಜುಗರ .
ದೇವಸ್ಥಾನ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ವಕೀಲರಾದ, ಎ ರಾಜಗೋಪಾಲ್ ಮಾತನಾಡಿ ಸರ್ಕಾರದ ಮಾರ್ಗಸೂಚಿ ಪ್ರಕಾರ ನಾವು ನಡೆಸಲೇ ಬೇಕಾಗುತ್ತದೆ. ಸರ್ಕಾರದ ನಿಯಮಗಳನ್ನು 100% ಪಾಲಿಸುತ್ತೇವೆ. ರಂಜಾನ್ ,ಹೋಳಿಯೂ ವರ್ಷ ವರ್ಷ ಆಗುತ್ತದೆ. ಆದರೆ ಕರಗಕ್ಕೆ, ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸ ಇದೆ
ಬ್ರಿಟಿಷ್ ಕಾಲದಲ್ಲೂ, ಕರ್ಫ್ಯೂ ಇದ್ದಾಗಲೂ ಕರಗ ಆಚರಣೆಗೆ ಅವಕಾಶ ಇತ್ತು ಎಂದರು.
ಇಲ್ಲಿಂದ ಚಿಕ್ಕಪೇಟೆ ಸರ್ಕಲ್ ವರೆಗೂ ಹೋಗಿ ಕರಗ ಆಚರಣೆ ನಡೆಯುತಿತ್ತು. ಕಳೆದ ಬಾರಿ ಸಿಎಂ ದೇವಾಲಯದ ಒಳಗೆ ಕರಗ ನಡೆಸಲು ಅವಕಾಶ ನೀಡಿದ್ದರು. ಈ ಬಾರಿಯೂ ಅನುಮತಿ ನೀಡುವ ವಿಶ್ವಾಸ ಇದೆ. ಸಾಂಪ್ರಾಯಿಕವಾಗಿ, ವಿಧಿವಿಧಾನಗಳನ್ನು ಪೂರೈಸಿ ದೇವಸ್ಥಾನದ ಒಳಗೆ ಆಚರಣೆ ಮಾಡುತ್ತೇವೆ. ಸ್ವಲ್ಪ ಅವಕಾಶ ಕೊಟ್ಟರೆ ದೇವಸ್ಥಾನದ ಒಂದು ಸುತ್ತು ಬರಲು ಅವಕಾಶ ಕೊಡಲಿ ಎಂದರು.