ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ. ನಾನು ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ಕರ್ತವ್ಯ ನಿರ್ವಹಿಸಿದ್ದೇನೆ.

ಶಿರಾ : ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ. ನಾನು ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಬೇರೆ ಪಕ್ಷಗಳಿಗೆ ವಲಸೆ ಹೋಗುವ ಅವಶ್ಯಕತೆ ಇಲ್ಲ. ನಾನು ಕಾಂಗ್ರೆಸ್‌ನಲ್ಲೆ ಇರುತ್ತೇನೆ. ಕಾಂಗ್ರೆಸ್‌ದಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ತಾಲೂಕಿನ ಹುಲಿಕುಂಟೆ ಹೋಬಳಿಯ ಬರಗೂರುದಲ್ಲಿ ಕಾಂಗ್ರೆಸ್‌ನಿಂದ ನಡೆದ ಬೂತ್‌ ಸಮಿತಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ನನ್ನ ಬಗ್ಗೆ ಕೆಲವರು ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತೇನೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಶಿರಾ ಕ್ಷೇತ್ರದ ಜನತೆ ಕಿವಿಗೊಡಬೇಡಿ. ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಬೇಕೆಂಬ ಗುರಿ ಹೊಂದಿ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಡುವ ತೀರ್ಮಾನ ಮಾಡಿದ್ದು ಕಾಂಗ್ರೆಸ್‌ ಸರ್ಕಾರ ಹೊರತು ಯಾವುದೇ ಸರ್ಕಾರಗಳು ಮಾಡಿರಲಿಲ್ಲ. ಈಗ 7 ಕೆ.ಜಿ.ಬದಲು 5 ಕೆ.ಜಿ ಆಗಿದೆ. ಈ ಹಿಂದೆ ಅನ್ನಕ್ಕಾಗಿ ಪರಿತಪಿಸುತ್ತಿದ್ದ ಜನರಲ್ಲಿ ಇಂದು ಯಾರೂ ಸಹ ಅನ್ನಕ್ಕಾಗಿ ಬೇಡುವವರನ್ನು ನೋಡಲು ಸಾಧ್ಯವಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಪ್ರತಿ ತಿಂಗಳಿಗೆ 2 ಸಾವಿರ ರು.ನಂತೆ ಒಂದು ವರ್ಷಕ್ಕೆ 24 ಸಾವಿರ ರು.ಗಳನ್ನು ನೀಡುವುದಾಗಿ ತೀರ್ಮಾನ ಮಾಡಲಾಗಿದೆ ಎಂದರು.

ಬೂತ್‌ ಸಮಿತಿ ಸಭೆಯಲ್ಲಿ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌ ಬರಗೂರು, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಆರ್‌.ಮಂಜುನಾಥ್‌, ಕೆಪಿಸಿಸಿ ಸದಸ್ಯ ಕೋಟೆ ಲೋಕೇಶ್‌, ಗ್ರಾಪಂ ಅಧ್ಯಕ್ಷ ಲಕ್ಷ್ಮಣ್‌, ಉಪಾಧ್ಯಕ್ಷೆ ಮಂಜುಳ ಭೀಮಣ್ಣ, ಲೋಕೇಶ್‌, ಹಾರೋಗೆರೆ ಮಹೇಶ್‌, ಮುಖಂಡರಾದ ದೊಡ್ಡಬಾಣಗೆರೆ ಸಿ.ರಾಮಕೃಷ್ಣಪ್ಪ, ಶ್ರೀನಿವಾಸ್‌ ಬರಗೂರು,ಕಾಂತರಾಜ್‌ ಎಸ್‌ಟಿಡಿ, ಗ್ರಾಪಂ ಸದಸ್ಯ ಮಂಜುನಾಥ್‌(ಕಂಬಿ), ಕೊಟ್ಟಿಅಶೋಕ್‌, ಕದಿರೇಹಳ್ಳಿ ಉಮೇಶ್‌, ಹಂದಿಕುಂಟೆ ನಾರಾಯಣಪ್ಪ, ದಾಸರಹಳ್ಳಿ ಶ್ರೀನಿವಾಸ್‌ ಗೌಡ, ಲತೀಫ್‌, ಯಲಪೇನಹಳ್ಳಿ ರಾಜು, ನಾಗಭೂಷಣ್‌, ಮಾಜಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೇ ನರಸಮ್ಮ, ಯಲಪೇನಹಳ್ಳಿ ಶ್ರೀನಿವಾಸ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. 

ಸಿದ್ದರಾಮಯ್ಯ ಬೇರೆ ಕ್ಷೇತ್ರ ನೋಡಿಕೊಳ್ಳಲಿ

ಕೋಲಾರ (ಫೆ.13): ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೆಲ ಕಾಂಗ್ರೆಸ್‌ ಮುಖಂಡರು ಕೋಲಾರಕ್ಕೆ ಕರೆ ತಂದು ಬಲಿಪಶು ಮಾಡಲು ಮುಂದಾಗಿದ್ದಾರೆ. ಕೊನೆಯ ಚುನಾವಣೆಯಲ್ಲಿ ಅವರನ್ನು ಸೋಲಿಸಿ, ಹಾಳು ಮಾಡದೆ ಬೇರೆ ಕ್ಷೇತ್ರದ ಕಡೆಗೆ ಕಳುಹಿಸುವುದು ಸೂಕ್ತವೆಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಸಲಹೆ ನೀಡಿದರು.

ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ಜೆಡಿಎಸ್‌ ಪಕ್ಷದಿಂದ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಕೋಲಾರ ಕ್ಷೇತ್ರದಲ್ಲಿ ದೇವೇಗೌಡರು ಹಾಗೂ ಕುಮಾರಣ್ಣನ ಪಡೆಯಿದ್ದು, ಕೋಲಾರ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌ರನ್ನು ಗೆಲ್ಲಿಸಿಕೊಳ್ಳಲು ಸಿದ್ದವಾಗಿದ್ದಾರೆ. ಹೀಗಾಗಿ ಕೆಲ ಕಾಂಗ್ರೆಸ್‌ ಮುಖಂಡರು ಅವರನ್ನು ದಿಕ್ಕುತಪ್ಪಿಸಿ ಇಲ್ಲಿಗೆ ಕರೆತರುವ ಬದಲು, ಸುರಕ್ಷಿತ ಕ್ಷೇತ್ರಕ್ಕೆ ಕಳುಹಿಸಿದರೆ ಕೊನೆಯ ಚುನಾವಣೆಯಲ್ಲಾದರೂ ಗೆಲ್ಲುತ್ತಾರೆ. ಇಲ್ಲವಾದರೆ ಇಲ್ಲಿ ಸೋಲನುಭವಿಸಿ ಅವಮಾನಕ್ಕೀಡಾಗುವುದು ಖಚಿತ ಎಂದರು