ಗ್ರಾಹಕ ಸ್ನೇಹಿಯಾಗಿ ಇಂಧನ ಇಲಾಖೆ: ಸಚಿವ ಸುನೀಲ್ ಕುಮಾರ್
ಪ್ರತಿಯೊಬ್ಬ ರೈತರು ಸ್ವಾವಲಂಬಿಯಾಗಿ ಜೀವನ ಸಾಗಿಸಲು ತಮ್ಮ ಹೊಲದಲ್ಲಿಯೇ ಸೋಲಾರ್ ಪಂಪ್ಸೆಟ್ಗಳನ್ನು ಅಳವಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಿಎಂ ಕುಸುಮ ಯೋಜನೆಯನ್ನು ಜಾರಿಗೆ ತರಲಾಗಿದೆ: ಸಚಿವ ಸುನೀಲ್ ಕುಮಾರ್
ತುಮಕೂರು(ಅ.02): ಗ್ರಾಹಕರ, ಉದ್ಯಮಿಗಳ ಸ್ನೇಹಿಯಾಗಿಸಿ ಹಲವಾರು ಕ್ರಮಗಳನ್ನು ಕೈಗೊಂಡು ಇಂಧನ ಇಲಾಖೆಯ ದಕ್ಷತೆಯನ್ನು ಹೆಚ್ಚಿಸಿದ್ದು, ಇದಕ್ಕಾಗಿ ಅಗತ್ಯವಾದ ಎಲ್ಲ ಸೌಲಭ್ಯಗಳ ಒದಗಿಸಿ ಸಾರ್ವಜನಿಕರ ಸ್ನೇಹಿ ಕಚೇರಿಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದರು. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ನೂತನ ಅಧೀಕ್ಷಕ ಎಂಜಿನಿಯರ್ಯವರ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಸಂಕೀರ್ಣದ ಉದ್ಘಾಟನಾ ಸಮಾರಂಭ ನಗರದ ಕೆಇಬಿ ಕಾಲೋನಿಯಲ್ಲಿ ನಡೆದಿದ್ದು, ಸಚಿವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆ:
ಈ ಯೋಜನೆಯಡಿ ಸೌರಶಕ್ತಿ ಆಧಾರಿತ ನೀರಾವರಿ ಪಂಪ್ ಸೆಟ್ಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬ ರೈತರು ಸ್ವಾವಲಂಬಿಯಾಗಿ ಜೀವನ ಸಾಗಿಸಲು ತಮ್ಮ ಹೊಲದಲ್ಲಿಯೇ ಸೋಲಾರ್ ಪಂಪ್ಸೆಟ್ಗಳನ್ನು ಅಳವಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಿಎಂ ಕುಸುಮ ಯೋಜನೆಯನ್ನು ಜಾರಿಗೆ ತರಲಾಗಿದೆ. ಬರಡು ಭೂಮಿಯಲ್ಲಿಯೂ ರೈತರು ಲಾಭ ಗಳಿಸುವಂತೆ ಮಾಡಲು ಈ ಯೋಜನೆ ರಚಿಸಲಾಗಿದೆ. ಸೌರ ಫಲಕದಿಂದ ಉತ್ಪತ್ತಿಯಾಗುವ ವಿದ್ಯುತ್ನ್ನು ರೈತರು ಮಾರಾಟ ಮಾಡಬಹುದಾಗಿದೆ. ಈ ಯೋಜನೆಯು ರೈತರಿಗೆ ಬಹಳ ಪ್ರಯೋಜನಕಾರಿಯಾಗಿದ್ದು, ವಿದ್ಯುತ್ ಮೇಲೆ ಅವಲಂಬಿತರಾಗದೇ ವರ್ಷದ ಬಹಳ ದಿನಗಳಲ್ಲಿ ಹಗಲು ವೇಳೆ ಸೌರ ಶಕ್ತಿಯ ಬಳಕೆಯಿಂದ ಬೆಳೆಗೆಳಿಗೆ ನೀರಾವರಿ ಕಲ್ಪಿಸಬಹುದು. ಇದಕ್ಕೆ ಸರ್ಕಾರ ಸಬ್ಸಿಡಿ ನೀಡುವುದರಿಂದ ರಾಜ್ಯದ 3 ಲಕ್ಷದಷ್ಟುರೈತರಿಗೆ ಅನುಕೂಲವಾಗಿದೆ ಎಂದರು.
ಪಿಎಫ್ಐಗೆ ಫಂಡಿಂಗ್ ಮಾಡಿದವರ ತನಿಖೆ ಶೀಘ್ರ; ಸಚಿವ ಸುನೀಲ್ ಕುಮಾರ್
ಬೆಳಕು ಯೋಜನೆ:
ವಿದ್ಯುತ್ ಸಂಪರ್ಕ ಕಲ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಅನುಮತಿ ಕಡ್ಡಾಯವಲ್ಲ (ನಿರಾಕ್ಷೇಪಣಾ ಪತ್ರ) ಎನ್ನುವ ಆದೇಶ ಹೊರಡಿಸಲಾಗಿದ್ದು ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ವಿದ್ಯುತ್ ಪರಿವರ್ತಕಗಳನ್ನು ಇಪ್ಪತ್ತನಾಲ್ಕು ಗಂಟೆಯ ಒಳಗೆ ಬದಲಾವಣೆ ಮಾಡಲು ಆದೇಶ ನೀಡಲಾಗಿದೆ ಎಂದರು.
ಅಮೃತಜ್ಯೋತಿ ಯೋಜನೆ:
ಈ ಯೋಜನೆಯಡಿ ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಫಲಾನುಭವಿಗಳಿಗೆ ಗೃಹ ವಿದ್ಯುತ್ ಬಳಕೆದಾರರಿಗೆ ಮಾಸಿಕ 75 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.
ಇಂಧನ ಇಲಾಖೆಯು ರೈತರ, ಉದ್ಯಮಿಗಳ, ಗ್ರಾಹಕರ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವುದು ಅಭಿನಂದರ್ಹವಾಗಿದ್ದು, ಸಾರ್ವಜನಿಕರ ಅನುಕೂಲಕ್ಕೆ ನಗರದಲ್ಲಿ ಸುಸಜ್ಜಿತವಾದ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಸಂಕೀರ್ಣದ ಕಟ್ಟಡ ನಿರ್ಮಿಸಿದೆ. ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಸಂಕೀರ್ಣದ ನಿರ್ಮಾಣದಿಂದ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಲು ಸಹಕಾರಿಯಾಗಿದೆ. ತುಮಕೂರು ನಗರವು ಸ್ಮಾರ್ಟ್ ಸಿಟಿಯಾಗಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಇದರೊಂದಿಗೆ ಇಂಧನ ಇಲಾಖೆಯ ಇನ್ನು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಗರದಲ್ಲಿ ಕೈಗೊಳ್ಳಲಿ ಎಂದು ಅಧ್ಯಕ್ಷತೆವಹಿಸಿದ್ದ ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.