ಸೋಂಕಿತರು, ಸೋಂಕಿನಿಂದ ಮೃತರಾದವರ ಕುಟುಂಬಕ್ಕೆ ನೆರವಾಗಲು ಈ ಸೇವೆ| ಜಿಲ್ಲಾ ಕೇಂದ್ರಗಳಲ್ಲೂ ಸಹಾಯವಾಣಿ| ‘ಕಾಂಗ್ರೆಸ್‌ ಕೇ​ರ್ಸ್‌’ ಹೆಸರಿನಲ್ಲಿ ಜನಸೇವೆಗೆ ಸಿದ್ಧತೆ| ಆ್ಯಂಬುಲೆನ್ಸ್‌ ಸೇವೆಗೆ ಚಾಲನೆ ನೀಡಿದ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌| 

ಬೆಂಗಳೂರು(ಮೇ.01): ಕೊರೋನಾ ಸೋಂಕಿತರ ಸಹಾಯಕ್ಕಾಗಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಸೇವೆ ನೀಡಲು ‘ಕಾಂಗ್ರೆಸ್‌ ಕೇ​ರ್ಸ್‌’ ಹೆಸರಿನಲ್ಲಿ ಹತ್ತು ಆ್ಯಂಬುಲೆನ್ಸ್‌ ವಾಹನಗಳು ಸಜ್ಜಾಗಿದ್ದು, ಇಂದು(ಶನಿವಾರ) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆ್ಯಂಬುಲೆನ್ಸ್‌ ಸೇವೆಗೆ ಅಧಿಕೃತ ಚಾಲನೆ ನೀಡಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಿಂದ 10 ಆ್ಯಂಬುಲೆನ್ಸ್‌ಗಳನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಹೇಗೆ ಬಳಕೆ ಮಾಡಬೇಕು ಎಂಬ ಕುರಿತು ಮಾಜಿ ಮೇಯರ್‌ಗಳು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಸಭೆ ನಡೆಸಿದ್ದೇವೆ. ಸೋಂಕಿತರು ಹಾಗೂ ಸೋಂಕಿನಿಂದ ಮೃತರಾದವರ ಕುಟುಂಬಕ್ಕೆ ನೆರವಾಗಲು ಈ ಸೇವೆ ಆರಂಭಿಸುತ್ತಿದ್ದೇವೆ.

ಮಹಾಮಾರಿ ಕೊರೋನಾಗೆ ಬೆಂಗಳೂರು ಟಾರ್ಗೆಟ್: ಬಯಲಾಯ್ತು ಆಘಾತಕಾರಿ ವಿಚಾರ!

ಸರ್ಕಾರ ನೀಡಿರುವ ಸಹಾಯವಾಣಿಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುತ್ತಿಲ್ಲ. ಕಾಂಗ್ರೆಸ್‌ ಸಹಾಯವಾಣಿಗೆ ಈವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಕರೆ ಮಾಡಿದ್ದಾರೆ. 100ಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ನಾವು ನೆರವಾಗಿದ್ದೇವೆ. 300ಕ್ಕೂ ಹೆಚ್ಚು ಮಂದಿ ಸೋಂಕಿತರಿಗೆ ವೈದ್ಯರ ಸಂದರ್ಶನಕ್ಕೆ ಅವಕಾಶ ಕೊಡಿ"ಸಿ ಔಷಧ ವಿತರಿಸಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಸಹಾಯವಾಣಿ ಪ್ರಾರಂಭಿಸಲು ಪಕ್ಷದ ಮುಖಂಡರಿಗೆ ನಿರ್ದೇಶನ ನೀಡಿದ್ದೇವೆ. ಈ ಸಮಯದಲ್ಲಿ ಎಷ್ಟೇ ಕಷ್ಟವಾದರೂ ಜನರ ಜತೆ ಇರಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಮುಖ್ಯಮಂತ್ರಿಗಳಿಂದ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಆದರೂ ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಹೀಗಾಗಿ ನಾವೇ ಮುಂದೆ ಬಂದಿದ್ದೇವೆ. ಜತೆಗೆ ಲಾಕ್ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಗುರಿಯಾಗಿರುವವರಿಗೆ ಆರ್ಥಿಕ ಪ್ಯಾಕೇಜ್‌ ಘೋಷಿಸಲು ಒತ್ತಾಯಿಸುತ್ತೇವೆ ಎಂದರು. ಕೆಪಿಸಿಸಿ ವತಿಯಿಂದ ವ್ಯವಸ್ಥೆ ಮಾಡಿರುವ ಆ್ಯಂಬುಲೆನ್ಸ್‌ಗಳಲ್ಲಿ 5 ಆ್ಯಂಬುಲೆನ್ಸನ್ನು ಯುವ ಕಾಂಗ್ರೆಸ್‌ ಹಾಗೂ 5 ಆ್ಯಂಬುಲೆನ್ಸ್‌ ಡಾ.ಜಿ.ಪರಮೇಶ್ವರ್‌ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಹಾಯವಾಣಿ ಆರಂಭ

ಉಚಿತ ಆ್ಯಂಬುಲೆನ್ಸ್‌ ಸೇವೆಗೆ 080-47188800 ಸಂಖ್ಯೆಯ ಪ್ರತ್ಯೇಕ ಸಹಾಯವಾಣಿ ಸ್ಥಾಪಿಸಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona