ಬೆಂಗಳೂರಿನ 25  ಮೆಟ್ರೋ ಸ್ಟೇಷನ್‌ಗಳಲ್ಲಿ, 200 ಸಿಗ್ನಲ್‌, 26 ಫ್ಲೈ ಓವರ್‌ಗಳಲ್ಲಿ ಏಕಕಾಲಕ್ಕೆ ರಾಜ್ಯ ಕಾಂಗ್ರೆಸ್‌ ಪಕ್ಷ ಪ್ರತಿಭಟನೆ ನಡೆಸಲಿದ್ದಾರೆ.

ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್‌ ನಾಯಕರು ನಾಳೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಭ್ರಷ್ಟಾಚಾರ ನಿಲ್ಲಿಸಿ ಬೆಂಗಳೂರು ಉಳಿಸಿ ಹೆಸರಿನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೈ ಪಕ್ಷದ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ, ಬೆಂಗಳೂರು ಅಭಿವೃದ್ಧಿಯಿಂದ ಕುಂಠಿತವಾಗುತ್ತಿದೆ ಎಂದು ಆರೋಪಿಸಿ ರಾಜ್ಯದ ಪ್ರಮುಖ ಕಾಂಗ್ರೆಸ್‌ ನಾಯಕರು ಈ ಪ್ರೊಟೆಸ್ಟ್‌ನಲ್ಲಿ ಭಾಗಿಯಾಗಲಿದ್ದಾರೆ. 

ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್‌ ಟೀಕೆ ಮಾಡುತ್ತಿದ್ದು, ಪ್ರತಿಭಟನೆ ನಡೆಸುತ್ತಿದೆ. ಇನ್ನು, ನಾಳೆ ನಡೆಯಲಿರುವ ಈ ಪ್ರತಿಭಟನೆಯಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಕೈ ನಾಯಕರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಮಹಿಳೆಯರಿಗೆ ಕಾಂಗ್ರೆಸ್‌ ಬಂಪರ್‌ ಗಿಫ್ಟ್‌: ಮಾಸಿಕ 2 ಸಾವಿರ ರೂ. ಸಹಾಯಧನ

ಬೆಂಗಳೂರಿನ 25 ಮೆಟ್ರೋ ಸ್ಟೇಷನ್‌ಗಳಲ್ಲಿ, 200 ಸಿಗ್ನಲ್‌, 26 ಫ್ಲೈ ಓವರ್‌ಗಳಲ್ಲಿ ಏಕಕಾಲಕ್ಕೆ ರಾಜ್ಯ ಕಾಂಗ್ರೆಸ್‌ ಪಕ್ಷ ಪ್ರತಿಭಟನೆ ನಡೆಸಲಿದ್ದಾರೆ. ಒಟ್ಟಾರೆ 300 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾಂಗ್ರೆಸ್‌ ಸೋಮವಾರ ಅಂದರೆ ಜನವರಿ 23, 2023 ರಿಂದ ಪ್ರತಿಭಟನೆ ನಡೆಸಲಿದೆ ಎಂದು ತಿಳಿದುಬಂದಿದೆ. 

ಬೆಂಗಳೂರಿನ ಬಿ.ಟಿ.ಎಂ. ವಿಧಾನಸಭಾ ಕ್ಷೇತ್ರದ ಲಕ್ಕಸಂದ್ರ ವಾರ್ಡ್‌ನ ಆಡುಗೋಡಿ ವಾರ್ಡ್‌, ಬಿ.ಜಿ. ರೋಡ್‌ ಲಕ್ಕಸಂದ್ರದ ಮೈಕೋ ಬಂಡೆ ರೋಡ್‌ ಸಿಗ್ನಲ್‌, ಕ್ರೈಸ್ಟ್‌ ಕಾಲೇಜು ರಸ್ತೆಯ ಡೈರಿ ಸರ್ಕಲ್‌ ಸಿಗ್ನಲ್‌ ಹಾಗೂ ಫ್ಲೈಓವರ್‌ ಹಾಗೂ ಪ್ರೆಸ್ಟೀಜ್‌ ಆಕ್ರೊಪೊಲೀಸ್‌ ಅಪಾರ್ಟ್‌ಮೆಂಟ್‌ ಎದುರಿನ ತಾವರೆಕೆರೆ ಮುಖ್ಯ ರಸ್ತೆಯ ಸಿಗ್ನಲ್‌ನಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ ಎಂದೂ ಮಾಹಿತಿ ನೀಡಿದೆ. ಜನವರಿ 23, 2023 ರಂದು ಬೆಳಗ್ಗೆ 9:45 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ ಎಂದೂ ಕೈ ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಚಿಕ್ಕಮಗಳೂರು ಕಾಂಗ್ರೆಸ್‌ ನಾಯಕನಿಗೆ ಐಟಿ ಶಾಕ್: ಕಿಸಾನ್‌ ಸೆಲ್ ಸಂಚಾಲಕನ ಮನೆಯಲ್ಲಿ ಶೋಧ