'ರೈತರು ಅನ್ಯಾಯವಾದಾಗ ಡಿಸಿ ಕಚೇರಿಗೆ ಹೋಗುವುದು ರೂಢಿ'
ಬೆಳಗಾವಿ ಜಿಲ್ಲಾ ಕಬ್ಬು ರೈತರು ತಮ್ಮ ಬಾಕಿ ಹಣಕ್ಕಾಗಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಈಗ ಪ್ರತಿಕ್ರಿಯಿಸಿದ್ದು ಹೀಗೆ.
ಬೆಳಗಾವಿ, (ನ.28): ಯಾವುದೇ ಸರ್ಕಾರ ಬಂದರೂ ಟೇಕ್ ಆಫ್ ಆಗಲು ಸಮಯ ಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರ ಟೇಕ್ ಆಫ್ ಆಗಿಲ್ಲ ಎನ್ನುವ ಅರ್ಥದಲ್ಲಿ ನಾನೇನೂ ಹೇಳಿರಲಿಲ್ಲ. ತಪ್ಪಾಗಿ ಅದನ್ನು ಅರ್ಥೈಸಲಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಚೆಂದಕ್ಕೆ ನಿಮ್ಗೆ ಮಿನಿಸ್ಟರ್ ಗಿರಿ ಬೇಕಾ ಜಾರಕಿಹೊಳಿ ಸಾಹೇಬ್ರೇ..?
ಬೆಳಗಾವಿಯಲ್ಲಿ ಇಂದು (ಬುಧವಾರ) ಪೋಲೀಸ್ ಕ್ವಾರ್ಟರ್ಸ್ ನಲ್ಲಿ ಪೇವರ್ಸ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಮ್ಮಿಶ್ರ ಟೇಕ್ ಅಫ್ ಆಗುತ್ತದೆ. ಹಂತ ಹಂತವಾಗಿ ಎಲ್ಲವೂ ಸರಿಯಾಗುತ್ತದೆ.
ಇನ್ನು ಕಬ್ಬು ರೈತರ ಹೋರಾಟ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ರೈತರು ಅನ್ಯಾಯವಾದಾಗ ಜಿಲ್ಲಾಧಿಕಾರಿ ಕಚೇರಿಗೆ ಹೋಗುವುದು ರೂಢಿ. ಅದೇ ರೀತಿ ಬೇಡಿಕೆಗಾಗಿ ಹೋರಾಟ ನಡೆಸಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಸರ್ಕಾರದ ಪರವಾಗಿ ರೈತರ ಬಳಿ ಬಂದು ಸಮಸ್ಯೆ ಬಗೆಹರಿಸಿದ್ದಾರೆ. ಅವರು ಮಂತ್ರಿಗಳು. ಎಲ್ಲಿಗೆ ಬೇಕಾದರೂ ಬರಬಹುದು ಹೋಗಬಹುದು. ಇದಕ್ಕೆ ರಾಜಕೀಯ ಕಲ್ಪಿಸುವುದು ತರವಲ್ಲ.
ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲ ಶಾಸಕರು ಒಂದಾಗಿದ್ದಾರೆ. ಯಾರೂ ಬಿಜೆಪಿಗೆ ಹೋಗುತ್ತಿಲ್ಲ. ಎಂಇಎಸ್ ನವರು ನಡೆಸುವ ಮಹಾಮೇಳಾವ್ ಬಗ್ಗೆ ಯಾರೂ ಆದ್ಯತೆ ನೀಡಬೇಕಿಲ್ಲ ಎಂದರು.