ಯೋಗೇಶ್ವರ ಜೊತೆ ಕುದುರೆ ವ್ಯಾಪಾರಕ್ಕೆ ಹೋಗಿದ್ದೆ: ವಿನಯ್ ಕುಲಕರ್ಣಿ
ಬಿಜೆಪಿ ಸೇರ್ಪಡೆಗಾಗಿ ಯಾರನ್ನೂ ಭೇಟಿಯಾಗಿಲ್ಲ: ವಿನಯ್ ಕುಲಕರ್ಣಿ| ಬಿಜೆಪಿ ಸೇರ್ಪಡೆ ವಿಚಾರವೆಲ್ಲವೂ ಮಾಧ್ಯಮಗಳ ಊಹಾಪೋಹ| ಯಾವುದೇ ಸ್ವಾಮೀಜಿಗಳು ಸಹ ಈ ವಿಷಯವಾಗಿ ಮಾತನಾಡಿಲ್ಲ|
ಧಾರವಾಡ(ಅ.09): ಬಿಜೆಪಿ ಸೇರ್ಪಡೆ ಕುರಿತಂತೆ ನಾನು ಯಾವ ನಾಯಕರನ್ನು ಭೇಟಿಯಾಗಿಲ್ಲ. ಬಿಜೆಪಿ ನಾಯಕ, ಶಾಸಕ ಸಿ.ಪಿ.ಯೋಗೇಶ್ವರ್ ಅವರು ನನ್ನಿಂದ ಕುದುರೆ ಖರೀದಿಸಿದ್ದರು. ಇದೀಗ ನಾನು ಕುದುರೆ ಖರೀದಿಗಾಗಿ ರಾಜಸ್ತಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರೂ ನನ್ನ ಜೊತೆ ಬಂದಿದ್ದರು. ಅದು ಕೇವಲ ವ್ಯವಹಾರ ಮಾತ್ರ. ಇಲ್ಲಿ ರಾಜಕೀಯ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಗುರುವಾರ ತಮ್ಮ ಡೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ವಿಚಾರವೆಲ್ಲವೂ ಮಾಧ್ಯಮಗಳ ಊಹಾಪೋಹ. ಸಿ.ಪಿ.ಯೋಗೇಶ್ವರ್ ಅವರು ಈ ಹಿಂದೆ ತಮ್ಮಿಂದ 6 ಕುದುರೆ ಖರೀದಿಸಿದ್ದರು. ನಾನು ಕುದುರೆ ಖರೀದಿಗಾಗಿ ತೆರಳಿದ್ದ ಸಂದರ್ಭದಲ್ಲಿ ಅವರೂ ನನ್ನ ಜೊತೆಗಿದ್ದದ್ದು ನಿಜ. ಅಂದ ಮಾತ್ರಕ್ಕೆ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದರ್ಥವಲ್ಲ. ಅಲ್ಲದೇ, ಯಾವುದೇ ಸ್ವಾಮೀಜಿಗಳು ಸಹ ಈ ವಿಷಯವಾಗಿ ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಯೋಗೇಶ್ ಗೌಡ ಕೊಲೆ ಆರೋಪಿ ವಿನಯ್ ಕುಲಕರ್ಣಿ ಬಿಜೆಪಿ ಸೇರಲು ಸಿದ್ಧತೆ?
ಸಿಬಿಐ ತನಿಖೆ ತಪ್ಪಿಸಿಕೊಳ್ಳಲು ಬಿಜೆಪಿ ಸೇರ್ಪಡೆ ಎಂಬೆಲ್ಲ ಸುದ್ದಿಯಾಗಿದ್ದು, ಸಿಬಿಐ ಏನು ಬಿಜೆಪಿ ಕೆಳಗಡೆ ಕೆಲಸ ಮಾಡುತ್ತಿದೆಯೇ? ಒಂದು ವೇಳೆ ನಾನು ಬಿಜೆಪಿಗೆ ಹೋದರೆ ಸುಮ್ಮನೆ ಬಿಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.