* ಬಿಜೆಪಿಗರಿಗೆ ತತ್ವ-ಸಿದ್ಧಾಂತ ಗೊತ್ತಿಲ್ಲ* ಕಾಂಗ್ರೆಸ್ನಲ್ಲಿ ನನಗೆ ಒಳ್ಳೆಯ ಸಂಸ್ಕೃತಿ ಕಲಿಸಿದ್ದಾರೆ: ರೇವಣೆಪ್ಪ ಸಂಗಟಿ* ವೈಯಕ್ತಿಕ ನಿಂದನೆ ಯಾರಿಗೂ ಶೋಭೆ ತರುವುದಿಲ್ಲ
ಯಲಬುರ್ಗಾ(ಆ.26): ಬಿಜೆಪಿ ಕಟುಕರ ಪಕ್ಷ, ಅಲ್ಲಿಂದ ನಾನು ಹೊರಬಂದು ಗಿಳಿಯಂತಿರುವ ಕಾಂಗ್ರೆಸ್ ಸೇರಿದ್ದೇನೆ. ಬಿಜೆಪಿಗರಿಗೆ ತತ್ವ-ಸಿದ್ಧಾಂತ ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರೇವಣೆಪ್ಪ ಸಂಗಟಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿದ್ದಾಗ ಅಲ್ಲಿ ಕಡಿ-ಬಡಿ ಸಂಸ್ಕೃತಿ ಇತ್ತು. ನಾನೂ ಹಾಗೆಯೇ ಇದ್ದೆ. ಆದರೆ ಕಾಂಗ್ರೆಸಿಗೆ ಬಂದಾಗ ಮಾಜಿ ಬಸವರಾಜ ರಾಯರಡ್ಡಿ ಹೆಡ್ ಮಾಸ್ಟರ್ ನೇತೃತ್ವದಲ್ಲಿ ಆ ಪಕ್ಷದ ಮುಖಂಡರು ಸಹಶಿಕ್ಷಕರಂತೆ ನನಗೆ ಒಳ್ಳೆಯ ಸಂಸ್ಕೃತಿಯನ್ನು ಕಲಿಸಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಅಡಿವೆಪ್ಪ ಭಾವಿಮನಿ ಹಾಗೂ ಮಹೇಶ ಹಳ್ಳಿ ಮಾತನಾಡಿ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಬಗ್ಗೆ ಬಿಜೆಪಿ ಮುಖಂಡರು ಬಹಳಷ್ಟು ಅಸಭ್ಯ ಶಬ್ದಗಳಿಂದ ಮಾತನಾಡಿರುವುದು ಸರಿಯಲ್ಲ. ಮಾಜಿ ಸಚಿವ ರಾಯರಡ್ಡಿ ಅವರು ಸಚಿವ ಹಾಲಪ್ಪ ಆಚಾರ ಅವರನ್ನು ಗುರಿಯಾಗಿಸಿಕೊಂಡು ಹೇಳಿಲ್ಲ. ಏನಾದರೂ ತಪ್ಪು ಮಾತನಾಡಿದ್ದರೆ ಅದಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದರು.
ಮುಖ್ಯಮಂತ್ರಿಗಳೇ ಸಚಿವರಿಗೆ ಬುದ್ಧಿ ಹೇಳಿ: ಕೋವಿಡ್ ರೂಲ್ಸ್ ಉಲ್ಲಂಘಿಸಿದ ಆಚಾರ್..!
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ವೈಯಕ್ತಿಕ ನಿಂದನೆ ಯಾರಿಗೂ ಶೋಭೆ ತರುವುದಿಲ್ಲ. ಸಚಿವ ಹಾಲಪ್ಪ ಆಚಾರ ಹಾಗೂ ಮಾಜಿ ಸಚಿವ ಬಸವರಾಜ ರಾಯರಡ್ಡಿ ಇಬ್ಬರೂ ಒಳ್ಳೆಯ ಕುಟುಂಬದಿಂದ ರಾಜಕಾರಣಕ್ಕೆ ಬಂದಿದ್ದಾರೆ. ಇಬ್ಬರ ಮೇಲೆಯೂ ನಮಗೆ ಅಪಾರ ಗೌರವವಿದೆ. ಹಾಲಪ್ಪ ಆಚಾರ ಅವರಿಗೆ ದೂರವಾಣಿ ಕರೆ ಮಾಡಿ ವಿಷಾದ ವ್ಯಕ್ತಪಡಿಸಿದ್ದೇನೆ. ಮುಂದೆ ಈ ರೀತಿ ಆಗದಂತೆ ಎಲ್ಲರೂ ಎಚ್ಚೆತ್ತುಕೊಳ್ಳೋಣ ಎಂದರು.
ರಾಮಣ್ಣ ಸಾಲಭಾವಿ, ಡಾ. ಶರಣಪ್ಪ ಕೊಪ್ಪಳ, ಅಶೋಕ ತೋಟದ, ವೀರಣ್ಣ ಹಳ್ಳಿಕೇರಿ, ಎಂ.ಎಫ್. ನದಾಫ್, ಸಂಗಣ್ಣ ಟೆಂಗಿನಕಾಯಿ, ಗಿರಿಜಾ ಸಂಗಟಿ, ಮಹಾಂತೇಶ ಗಾಣಿಗೇರ, ಡಾ. ನಂದಿತಾ ದಾನರಡ್ಡಿ, ಜಯಶ್ರೀ ಕಂದಕೂರ, ಸಾವಿತ್ರಿ ಗೊಲ್ಲರ್, ಡಾ. ಎಸ್.ಸಿ. ದಾನರಡ್ಡಿ, ಶರಣಪ್ಪ ಗಾಂಜಿ, ಬಸವರಾಜ ಪೂಜಾರ, ಬಸವರಾಜ ಕುಡಗುಂಟಿ, ರಾಜು ನಿಂಗೋಜಿ, ಮಲ್ಲು ಜಕ್ಕಲಿ, ರೇವಣೆಪ್ಪ ಹಿರೇಕುಕಬರ, ಅಖ್ತರಸಾಬ್ ಖಾಜಿ, ಹನುಮಂತ ಭಜಂತ್ರಿ, ಹನುಮೇಶ ಕಡೇಮನಿ, ರೆಹೆಮಾನ್ಸಾಬ್ ನಾಯಕ, ಸುರೇಶ ದಾನಕೈ, ರಾಜು ಹಡಪದ, ಛೇತ್ರೆಪ್ಪ ಛಲವಾದಿ, ಸಂಗು ಗುತ್ತಿ, ಖಾಜಾವಲಿ ಗಡಾದ ಸಿದ್ದಪ್ಪ ಕಟ್ಟಿಮನಿ ಮತ್ತಿತರರು ಇದ್ದರು.
