ನನ್ನ ಕೊನೆ ಉಸಿರು ಇರುವವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಮುಖಂಡರೋರ್ವರು ಹೇಳಿದ್ದಾರೆ. ಅಲ್ಲದೇ ದೇಶ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ ಎಂದಿದ್ದಾರೆ.

ಆನಂದಪುರ (ಸೆ.17): ಹೋರಾಟ, ಜೈಲು, ಅನ್ಯಾಯ, ಬಯಲು ಎಂಬ ತತ್ವ ಸಿದ್ಧಾಂತದ ಅಡಿಯಲ್ಲಿ ದೇಶದ ರಾಜಕೀಯ ನಿಂತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಹೇಳಿದರು. ಸ್ಥಳೀಯ ಲಕ್ಷ್ಮೀ ರಂಗನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಜಕೀಯಕ್ಕೆ ಹೋರಾಟ ಬಹುಮುಖ್ಯ. ಅಧಿಕಾರವಿದ್ದಾಗ ಕೆಲಸ ಮಾಡೋಣ ಇಲ್ಲದಿದ್ದಾಗ ಜನರಿಗಾಗಿ ಹೋರಾಟ ಮಾಡುವುದು ಅನಿವಾರ್ಯ. ಇಂತಹ ಸಮಯದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಇಚ್ಛಾಶಕ್ತಿ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

Add Asianetnews Kannada as a Preferred SourcegooglePreferred

ಪ್ರಧಾನಿ ಮೋದಿಯವರು ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮಿಸದೆ ಅಚ್ಚಾ ದಿನ್‌ ಆಗಯಾ ಎಂದು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪನವರ ಸರ್ಕಾರ ಬಂದು ಮೂರು ವರ್ಷ ಸಮೀಪಿಸುತ್ತಿದ್ದರೂ ಯಾವುದೇ ಅಭಿವೃದ್ಧಿ ಕಾಣಲಿಲ್ಲ ಹಾಗೆ ರೈತರ ಸಮಸ್ಯೆಗಳು ಹಾಗೂ ಬಗರ್‌ಹುಕುಂ ರೈತರಿಗೆ ಇನ್ನೂ ಹಕ್ಕುಪತ್ರ ವಿತರಣೆ ಆಗಿಲ್ಲ ವೆಂದು ವಿಷಾದ ವ್ಯಕ್ತಪಡಿಸಿದರು.

'ನಿರ್ಮಲಾ ಸೀತಾರಾಮನ್ ಹೇಳಿದಂತೆ ದೇವರೇ ಬಿಎಸ್‌ವೈ ಸರ್ಕಾರ ಕಾಪಾಡಬೇಕು' ...

ದೇಶಕ್ಕೆ ಸ್ವಾತಂತ್ರ್ಯ ಬರಲು ಕಾಂಗ್ರೆಸ್‌ ಪಕ್ಷದ ಪಾತ್ರ ಮಹತ್ವವಾದುದು. ದೇಶದಲ್ಲಿ ಎಲ್ಲರಲ್ಲೂ ಸಮಾನತೆ ಇರಬೇಕೆಂಬ ನೀತಿ ಸಿದ್ಧಾಂತ ಜಾರಿಗೊಳಿಸಿದ್ದು ಕಾಂಗ್ರೆಸ್‌ ಎಂದ ಅವರು, ಅಂತಹ ನೀತಿ ನಿಯಮಗಳಿಗೆ ಧಕ್ಕೆ ಬಂದಾಗ ಕಾಂಗ್ರೆಸ್‌ ಹೋರಾಟಕ್ಕೆ ಸದಾ ಸಿದ್ಧ. ಈ ಹಿನ್ನೆಲೆ ಕಾಂಗ್ರೆಸ್‌ ಕಾರ್ಯಕರ್ತರು ಜಾಗೃತರಾಗಿ ಪಕ್ಷದ ಸಂಘಟನೆಯಲ್ಲಿ ಮುಂದಾಗಬೇಕು. ನಾನು ನನ್ನ ಜೀವನದ ಕೊನೆಯ ಕ್ಷಣದವರೆಗೂ ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ತಿಳಿಸಿದರು.

ಕಲಗೋಡು ರತ್ನಾಕರ್‌, ಜಿಪಂ ಸದಸ್ಯೆ ಅನಿತಾ ಕುಮಾರಿ ಬಿ.ಆರ್‌. ಜಯಂತ್‌, ರತ್ನಾಕರ ಹೊನಗೋಡು, ಎಪಿಎಂಸಿ ಸದಸ್ಯ ಭರ್ಮಪ್ಪ, ಪಂಚಾಯ್ತಿ ಸದಸ್ಯ ಮೋಹನ್‌ ಕುಮಾರ್‌ ಕಾಲೊನಿ, ಪ್ರಕಾಶ್‌ ನಾಯಕ್‌. ತಾಪಂ ಸದಸ್ಯರಾದ ಜ್ಯೋತಿ ಕೋವಿ, ಹೇಮಾ ರಾಜಪ್ಪ ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.