ಕ್ಷೇತ್ರದ ದಲಿತ ಮುಖಂಡ, ಜಿಪಂ ಮಾಜಿ ಸದಸ್ಯ ಅಚ್ಚುತಾನಂದ ತಮ್ಮ ನೂರಾರು ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.

ಕೆ.ಆರ್‌. ನಗರ : ಕ್ಷೇತ್ರದ ದಲಿತ ಮುಖಂಡ, ಜಿಪಂ ಮಾಜಿ ಸದಸ್ಯ ಅಚ್ಚುತಾನಂದ ತಮ್ಮ ನೂರಾರು ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.

ಬೆಂಗಳೂರಿನ ಬಿಡದಿ ಬಳಿ ಕೇತಗಾನಹಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿಗಳ ತೋಟದ ಮನೆಯಲ್ಲಿ ಸೋಮವಾರ ತಾಪಂ ಮಾಜಿ ಸದಸ್ಯ ಹಂಗರಬಾಯನಹಳ್ಳಿ ತಮ್ಮಣ್ಣ ಸೇರಿದಂತೆ ಇತರ ಬೆಂಬಲಿಗರೊಂದಿಗೆ ಶಾಸಕ ಸಾ.ರಾ. ಮಹೇಶ್‌ ಉಪಸ್ಥಿತಿಯಲ್ಲಿ ಜೆಡಿಎಸ್‌ ಸೇರ್ಪಡೆಯಾದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಅಚ್ಚುತಾನಂದ ಮತ್ತು ಬೆಂಬಲಿಗರನ್ನು ಪಕ್ಷದ ಶಾಲು ಹಾಕಿ ಸ್ವಾಗತಿಸಿ ಮಾತನಾಡಿ, ಇವರÜ ಪಕ್ಷ ಸೇರ್ಪಡೆಯಿಂದ ಕೆ.ಆರ್‌. ನಗರ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್‌ಗೆ ಬಲ ಬಂದಿದ್ದು, ನಾವು ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದರು.

ಕಳೆದ ನಾಲ್ಕು ವರ್ಷಗಳ ಹಿಂದೆಯೆ ಶಾಸಕ ಸಾ.ರಾ. ಮಹೇಶ್‌ ಮತ್ತು ನಾನು ಅಚ್ಚುತಾನಂದ ಅವರನ್ನು ಪಕ್ಕಕ್ಕೆ ಆಹ್ವಾನಿಸಿದ್ದೇವು ಆಗ ಅವರು ಬಂದಿದ್ದರೆ ಈ ವೇಳೆಗೆ ಶಾಸಕರಾಗಿರುತ್ತಿದ್ದರು, ಆದರೂ ಚಿಂತೆ ಇಲ್ಲ, ಹಾಗಾಗಿ ಅವರಿಗೆ ಶೀಘ್ರದಲ್ಲಿ ಉನ್ನತವಾದ ರಾಜಕೀಯ ಸ್ಥಾನ ಮತ್ತು ಚುನಾವಣೆಯ ನಂತರ ಉತ್ತಮ ಅಧಿಕಾರ ನೀಡುವ ಭರವಸೆ ನೀಡಿದರು.

ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜನರ ಬಳಿಗೆ ಹೋಗಿ ರಾಜ್ಯಕ್ಕೆ ಜೆಡಿಎಸ್‌ ಅನಿವಾರ್ಯತೆ ಮತ್ತು ಈ ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳನ್ನು ತಿಳಿಸಿ ಸಾ.ರಾ. ಮಹೇಶ್‌ ಗೆಲುವಿಗೆ ದುಡಿಯಿರಿ ಎಂದು ಕರೆ ನೀಡಿದರು.

ಜೆಡಿಎಸ್‌ ಸೇರ್ಪಡೆಯಾದ ಅಚ್ಚುತಾನಂದ ಮಾತನಾಡಿ, ನನಗೆ ರಾಜಕೀಯ ಅಧಿಕಾರದ ಆಸೆ ಇಲ್ಲ ನಮ್ಮೆಲ್ಲರ ಮುಂದಿನ ಗುರಿ ಸಾ.ರಾ. ಮಹೇಶ್‌ ಅವರು ನಾಲ್ಕನೆ ಬಾರಿ ದಾಖಲೆಯ ಗೆಲುವು ಸಾಧಿಸುವಂತೆ ಮಾಡುವುದಾಗಿದ್ದು, ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಶಾಸಕ ಸಾ.ರಾ. ಮಹೇಶ್‌ ಮಾತನಾಡಿ, ಅಚ್ಚುತಾನಂದ ಅವರ ರಾಜಕೀಯ ಶಕ್ತಿ ಮತ್ತು ಸಾಮರ್ಥ್ಯದ ಅರಿವು ನಮಗಿದ್ದು, ಅವರನ್ನು ನಾವು ಭವಿಷ್ಯದಲ್ಲಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದರು.

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಸಾಲಿಗ್ರಾಮ ತಾಲೂಕು ಜೆಡಿಎಸ್‌ ಅಧ್ಯಕ್ಷ ಮೆಡಿಕಲ್‌ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷ ಡಿ. ಕಾಂತರಾಜು, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್‌, ತಾಪಂ ಮಾಜಿ ಸದಸ್ಯ ವೈರಮುಡಿ, ಜೆಡಿಎಸ್‌ ಮುಖಂಡರಾದ ನಾಗರಾಜು, ಬಿ.ಆರ್‌. ಕುಚೇಲ, ರಮೇಶ್‌, ಗ್ರಾಪಂ ಮಾಜಿ ಸದಸ್ಯರಾದ ಚಲುವರಾಜು, ಬಾಲಕೃಷ್ಣ, ಮಹದೇವ್‌, ಮುಖಂಡರಾದ ನಾಗಣ್ಣ, ಎಚ್‌.ಜೆ. ಮಹದೇವ್‌, ದಾಶರಥಿ. ನಿವೃತ್ತ ಶಿಕ್ಷಕ ಸಂಪತ್‌ ಇದ್ದರು.